ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಗಿ ಹಲ್ವಾ ಎಂಬ ಸೋಜುಗಾದ ಸೂಜಿಮಲ್ಲಿಗೆ..

ಶಾಲಿನಿ ರುದ್ರಮುನಿ 

ಹೌದು, ಬೆಳಗ್ಗೆ ಬೆಳಗ್ಗೆ ಆ ಪ್ರಾಥಃಸ್ಪರ್ಶ ಇರತ್ತಲ್ಲ ಅದನ್ನ ಆಸ್ವಾದಿಸೋದೆ ಒಂದು ಹಬ್ಬ ನನಗೆ. ಇದನ್ನ ಬರಿವಾಗ ಕೋಗಿಲೆ ಹಾಡ್ತಿದೆ. ಜಸ್ಟ್  ವಾಕಿಂಗ್ ಮುಗ್ಸಿ ಬಂದೆ.

ಬಂದ್ ಕೂಡ್ಲೆ ಮನದಲ್ಲಿ ಒಂದು ಆಲಾಪನೆ ಶುರುವಾಯಿತು. ಅದಕ್ಕೆ ಈ ನೂರಾರು ಪದಗಳ ಹರವನ್ನ, ಬದುಕಿನ‌ ಹದಗಳನ್ನ ಹರಡಿಕೊಂಡು ಕುಳಿತೆ.

ಐದುವರಿಯಿಂದ ಆರು ಇಪ್ಪತ್ತರವರೆಗೆ  ವಾಕಿಂಗ್ ಹೋಗಿದ್ದೆ. ದಾರಿಲಿ, ಪಾರಿಜಾತದ ಪರಿಮಳ, ಮಲ್ಲಿಗೆ ಸುವಾಸನೆ, ದೂರದಲ್ಲಿ ಕೂಗೋ ನವಿಲು, ಕೋಗಿಲೆಯ ಆ ಪಂಚಮ ಸ್ವರ ಜೊತೆಗೆ ನನ್ನ ಪುಟ್ಟ ಜಗತ್ತಿನ ದೊರೆ ನೀ ನಿನ್ನ ಜೋಡಿ ಅದನ್ನೆಲ್ಲ ಅನುಭವಿಸುತ್ತ ಮನೆಗೆ ಬಂದೆ ,

ನೆನ್ನೆ ರಾತ್ರಿ ಮಾಡಿದ ಈ ಹಲ್ವನ ಡೈಮಂಡ್ ಶೇಪಲ್ಲಿ ಕಟ್ ಮಾಡಿ ಪಿಕ್ ತೆಗೆದು ಇವತ್ತಿನ ಶುಭೋದಯ ಕಳ್ಸಿದೀನಿ ನೋಡು. ಇವತ್ತಿನ ಈ ಬರಹ ಕೂಡ ಹಲ್ವಾ ನೆಪಾನೆ. ಅಷ್ಟು ಚೆಂದದ ಹದಾ ಬಂದಿದೆ. ಪ್ರತಿ ಭಾರಿನು ಬರತ್ತೆ. ಆದರೆ ಹಲ್ವಾ , ನೆನಸಿದ ರಾಗಿನ ರುಬ್ಬಿ ಅದರ ಹಾಲು ತೆಗೆದು ಸೋಸಿ ಎಕ್ದಂ ಪೈನ್ ಹಾಲ ಬರಬೇಕು ಹಾಗೆ. ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲ ಬೆರೆಸಿ. ಅದನ್ನ ಕೈ ಬಿಡದ ಹಾಗೆ ಬೆರೆಸ್ತಾನೆ ಇರಬೇಕು ಸಣ್ಣ ಉರಿಯಲಿ, ಅದನ್ನ ಗುರಾಡ್ತಾನೆ ಇರಬೇಕು, ಕೈ ನೋವಾಗತ್ತೆ ಗೊತ್ತಾ.

ಗುರಾಡ್ತಾ ಗುರಾಡ್ತ ಅದು ಗಟ್ಟಿಯಾಗ್ತಾ ಬೆಂದು ಬೆಂದು ಬರತ್ತೆ. ಆಗ ಒಂದು ಹದ ಬರತ್ತೆ. ಎಂಥ ಅನುಭವ ಗೊತ್ತಾ ಅದು. ಅದು ಜೀವನದ ಅನುಭಾವಾವೆ ಸರಿ. ಬದುಕು ಹೀಗೆ ಅಲ್ವ , ಶರಣಾಗತಿಯ ಸಮರ್ಪಣೆ. ಜೀವನದಲ್ಲಿ ಏನು ಅರಿದೇ ಇದ್ದಾಗ ಬೆಸೆವ ಸಂಬಂಧಗಳು ಒಂದು ಹದಕ್ಕೆ ನಿಲುಕಿ ಬೆಂದು ನೊಂದು ಗಟ್ಟಿಯಾಗಿ ನಮ್ಮನ್ನೆಲ್ಲ ಒಂದುಗೂಡಿಸೋದು.      ‌

ಒದ್ದಾಡ್ತ ಇರತ್ತೆ ಬೆಲ್ಲ ರಾಗಿ ಎರಡು ಬೆರೆಯೋಕೆ, ಆದರೆ ಬೆರೆತ ಮೇಲೆ ಅದಕ್ಕೆ ಒಂದು ಹಿಡಿತ ಸಿಕ್ಕತ್ತೆ. ಆಗ ನೋಡಬೇಕು ಅದರ ಬಣ್ಣ ಬದಲಾಗೋ ರೀತಿ, ಅಲ್ಲಿ ಪ್ರೀತಿ ಮೇಳೈಸಿ ಒಂದು ಹೊಂಬಣ್ಣ ಬರತ್ತೆ. ನೋಡೋಕೆ ಚೆಂದ ಗೊತ್ತಾ. ರಾಗಿ, ಬೆಲ್ಲ ಎರಡೂ ಬೇರೆ ಬೇರೆ ಅಸ್ಮಿತೆ  ಹೊಂದಿದ್ದರು, ಎರಡು ಬೆರೆತು ಒಂದಾಗೋ ಪರೀನೆ ಅದ್ಭುತ. ಎರಡಕ್ಕೂ ಆದ ಬದಲಾವಣೆ ಈ ಹದ, ಚೆಲುವಿದ್ದರೇನು, ಸಿರಿಯಿದ್ದರೇನು ನಲವಿಲ್ಲದ ಬದುಕಿಗೆ.

ಪ್ರೀತಿ ಅಂದರೇನೆ  ಬದಲಾವಣೆ , ಅದರಿಂದ ಸಿಗೋ ಈ ನಿರಾಳತೆ, ಸ್ವಭಾವಗಳ ರೂಪಾಂತರ, ಇದೇ ಅಲ್ವೆನೋ  ಮೂಲ ಖುಷಿಗೆ ಕಾರಣ. ನಿನ್ನ ಖುಷಿಗೆ ನಾ ಕಾರಣ, ನನ್ನ ಖುಷಿಗೆ ನೀ ಅನ್ನೋ ಮನೋಭಾವ ಸದ್ದಿಲ್ಲದೆ ಜಾಗ ಮಾಡಿ ಮನದ ಗುಡಿಸಲಲ್ಲಿ ಕೂರತ್ತಲ್ಲ. ಅದರ ಜೋಡಿ ತುಟಿಯಂಚಿನಲಿ ಕಂಡು ಕಾಣದ ಹಾಗೆ ಮೂಡಿ ಬರುವ ಈ ನಗು ಕೂಡ ಖುಷಿನೆ . ಇದೇ ಮುಂದೆ ಬರುವ ದಿನಗಳ ಭರವಸೆಗಳ ಬೆಳೆ.‌

ಈ ಹೊತ್ತಲ್ಲಿ  ಹಲ್ವಾ ಗಟ್ಟಿಯಾಗಿ ಮತ್ತಷ್ಟು ಗಟ್ಟಿಯಾಗತ್ತ ಹೋಗತ್ತೆ. ಈಗ ನಿಜವಾದ ಟೆನ್ಶನ್, ಒಂದು ಕ್ಷಣ ಮೈಮರೆತರೂ ಹಲ್ವ ಹಳ್ಳ ಹಿಡಿಯೋ ಹೊತ್ತು. ಗಂಟಾಗಿಲ್ಲ ಅನ್ನೋ ಮನದಟ್ಟು ಆಯ್ತಾ, ಆದರೂ, ಬಿಡದೆ ಕೈಯಾಡ್ಸತ್ತ, ಒಂದು ನೆಮ್ಮದಿಯ ನಿಟ್ಟುಸಿರು ಬಿಡ್ತಿನಿ. ಈಗ ಪರಿಪೂರ್ಣ ಬೆಂದಿದೆ ಅನ್ನೊ ಹೊತ್ತಿಗೆ ಅದನ್ನ ಮುಚ್ಚಿ ಮತ್ತಷ್ಟು ಹೊತ್ತು ಇಡೋದು. ನಂತರ ತಟ್ಟೆಗೆ ತುಪ್ಪ ಸವರಿ, ಬೆಂದ ಹಲ್ವಾ ಹಾಕಿ ಚೆನ್ನಾಗಿ ಸಮಮಾಡಿ ಇಡೋದು.

ಆಗ್ಲೆ ಹಲ್ವಾ ಮಾಡಿದ ಅನುಭವ ಅನುಭಾವ ಆಗಿರುತ್ತೆ. ಹಲ್ವಾ ಮಸ್ತ ಬಂದಿದೆ.  ಆ ಖುಷಿ ನಿನ್ನೊಟ್ಟೊಗೆ  ಹಂಚ್ಕೋಬೇಕಿತ್ತು, ‘ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ’ ಅನ್ನೋ ಹಾಡು ಕಿವಿಲಿ ಗುನುಗುಟ್ಟುತಿದೆ. ಅದೇ ಪ್ರೇಮ ಹಬ್ಬಿದ ಪರಿಲಿ ಈ ಬರಹ ನಿ‌ನಗಾಗಿ ಬರಿತಿದೀನಿ.

ಮತ್ತೆ ಹಲ್ವಾ ನೋಡಿ ಮನಸ್ಸು  ಮತ್ತೆ ಜಪ ಮಾಡ್ತಿದೆ. ನಮ್ಮ ಪ್ರೀತಿ ಮತ್ತಷ್ಟು ಅದರ ಮೃದುತ್ವ ಪಡೆದು ಕೂಡಿಕೊಳ್ಳಲಿ ಅಂತ ಮನಸ್ಸು ಹೇಳ್ತಿದೆ. ಅನುಭವನೇ ಹಾಗೆ, ಅದು ಅಡಿಗೆ ಮನೇದಿರಲಿ ಅದರಾಚೆಗಿನ ಪ್ರಕೃತಿಯ ಎಲ್ಲ ಪ್ರಕಾರಗಳಲ್ಲೇ ಇರಲಿ, ಪ್ರತಿಯೊಂದರಲ್ಲೂ ನಾವು ಕಾಣೋ ಪ್ರೀತಿ, ಪ್ರೇಮದ ನಂಟು  ಹಬ್ಸೋ ರೀತಿಲಿ ನನ್ನ ನಾನು ನನ್ನತನ ಮಾತ್ರ ಉಳಿಸಿ ಮೆರೆಸೋ ತಂತ್ರ ಅದನ್ನ ಬಳಸೋ ಬಾಳು ಎಲ್ಲ ಸೋಜಿಗಾದ ಸೂಜುಮಲ್ಲಿಗೇನೆ ಅಲ್ವಾ…?

‍ಲೇಖಕರು avadhi

3 April, 2020

4 Comments

  1. Poorvi

    ವ್ಹಾ ಈ ಲೇಖನ ಹಾಗೂ ನಿಮ್ಮ ಕಲ್ಪನೆ ಎರಡೂ ಸೊಗಸಾಗಿವೇ. ಬೆಳಿಗ್ಗೆ ಬೆಳಿಗ್ಗೆ ರಾಗಿ ಹಲ್ವದ ಲೇಖನ ಮನಸ್ಸಿದೆ ಮುದ ನೀಡಿತು

    • Shalini R

      ಧನ್ಯವಾದಗಳು ಪೂರ್ವಿ ಅವರೆ…_/\_

  2. Shyamala Madhav

    ತೆಂಗಿನ ಕಾಯಿ ಹಾಲು ಬೆರಸಲ್ವಾ? ನಾನು ರಾಗಿ, ತೆಂಗಿನಕಾಯಿ ಒಟ್ಟಿಗೇ ಕಡೆದು ಮೂರು ಬಾರಿ ಹಾಲು ತೆಗೆದು, ಬಾದಾಮ್ ಯಾ ಗೇರುಬೀಜ ಹೆಚ್ಚಿ ಹಾಕಿ ಬೆಲ್ಲ, ಓಲೆ ಬೆಲ್ಲ, ಏಲಕ್ಕಿ ಹಾಕಿ ಒಲೆಯಲ್ಲಿಟ್ಟು ನೀವಂದಂತೆ ಕೈಯಾಡಿಸುತ್ತಾ ಕುದಿಸ್ತೇನೆ.

  3. Shalini R

    ಶ್ಯಾಮಲ, ಧನ್ಯವಾದಗಳು ನಿಮಗೆ

    ಅಕ್ಕಿ ಹಾಲಬಾಯಿ ಮಾಡುವಾಗ ನೀವು ಹೇಳಿದ ರೀತಿ ಮಾಡ್ತೀನಿ. ಅದು ಕೂಡ ಘನ ಟೇಸ್ಟಿ ಯಾಗಿರತ್ತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading