ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಘುನಾಥ್‌ ಕೃಷ್ಣಮಾಚಾರ್ ಓದಿದ ‘ಥ್ಯಾಂಕ್ಯೂ ಸರ್’

ರಘುನಾಥ್‌ ಕೃಷ್ಣಮಾಚಾರ್

ನನ್ನ ಕಾಲು ಶತಮಾನದ ಗೆಳೆಯರಾದ ಪ್ರೊ.ಬಿ.ಬಿ.ಪೂಜಾರಿಯವರು ಮೊದಲ ಬಾರಿಗೆ ತಮ್ಮ ಪುಸ್ತಕವನ್ನು ಕಳಿಸಿದ್ದಾರೆ. ಅದರಲ್ಲೂ ಅವರ‌ ಗುರುಗಳ ಗಾಥೆ. ಅವರ ಶಿಷ್ಯರ ಗಾಥೆಯು ಆಗಿರುವುದು ಈ ಕೃತಿಯ ವಿಶೇಷವಾಗಿದೆ. ಗುರುವಿನ ಋಣವನ್ನು ತೀರಿಸಲು ಇದಕ್ಕಿಂತ ಬೇರೆ ಸಾರ್ಥಕವಾದ ಮಾರ್ಗ ಇನ್ನೇನಿದೆ. ಏಕಕಾಲದಲ್ಲಿ ಇದು ಗುರ ಶಿಷ್ಯರ ಶ್ರೇಯೋಭಿವೃದ್ದಿಯನ್ನು ತೆರೆದಿಡುತ್ತದೆ. ಶಿಷ್ಯರ ಏಳಿಗೆಯನ್ನೇ ತಮ್ಮ ಜೀವನದ ಧ್ಯೇಯ ವನ್ನಾಗಿಸಿಕೊಂಡ, ಅವರ ವ್ಯಕ್ತಿತ್ವದ ರೂಪಣೆಯಲ್ಲಿ ತಮ್ಮನ್ನು ಅರ್ಪಿಸಿಕೊಂಡ ಇಬ್ಬರು ಪ್ರಾಧ್ಯಾಪಕರನ್ನು ಕುರಿತು ಇಲ್ಲಿ ಅತ್ಯಂತ ಕೃತಜ್ಞತಾಭಾವದಿಂದ ಕಂಡಿರಿಸಿದ್ದಾರೆ.

ಅವರು : ಅವರ ಕಾಲೇಜು ಪ್ರಾಧ್ಯಾಪಕರಾದ ಪ್ರೊ.ವಿರೂಪಾಕ್ಷಪ್ಪ ರಾಂಪೂರ ಮತ್ತು ಅವರ ಪಿಎಚ್ ಡಿ ಮಾರ್ಗದರ್ಶನ ಮಾಡಿದ ‌‌ ಡಾ.ಎಂ.ಎಸ್ ಲಠ್ಢೆ . ಅದರಲ್ಲೂ ಮೊದಲ ಪ್ರಾಧ್ಯಾಪಕರಾದ ವಿರೂಪಾಕ್ಷಪ್ಪ ರಾಂ‌ಪೂರ ಅವರು ಇಡಿಯಾಗಿ ಇವರ ಮೇಲೆ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದ ಬಗೆಯನ್ನು ಅನನ್ಯವಾಗಿ ಅನಾವರಣಮಾಡಿದ್ದಾರೆ. ಪಾಠವನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದುದಲ್ಲದೆ, ಭಾಷಣ ಕಲೆ, ವಚನಗಳ ಬಾಯಿಪಾಠ, ಅಧ್ಯಾಪನಗಳನ್ನು ಕಲಿಸುತ್ತಿದ್ದರು.

ಇದರೊಂದಿಗೆ ಅವರ ಭವಿಷ್ಯದ ದಾರಿಯಲ್ಲಿ ನಡೆಯಲು ಮಾರ್ಗದರ್ಶನ ಮಾಡಿದರು. ಅವರಿಂದ ಮಾರ್ಗದರ್ಶನ ಪಡೆದ ಹಲವರು ಇಂದಿಗೂ ಅವರ ಪ್ರಭಾವವನ್ನು ನೆನಪು ಮಾಡಿಕೊಳ್ಳುತ್ತಾರೆ. ಅವರ ಆಡುತ್ತಿದ್ದ ಮಾತುಗಳೆಲ್ಲ ನಿಜವಾಗುತ್ತಿದ್ದುದನ್ನು ತಮ್ಮ, ತಮ್ಮ ಸಂಪರ್ಕದ ಹಲವರ ಅನುಭವಗಳಿಂದ ಧೃಡ ಪಡಿಸಿದ್ದಾರೆ. ಇದೊಂದು ವಿಸ್ಮಯಕಾರಿ ಸಂಗತಿ ಯಾಗಿಯೆ ಉಳಿಯುತ್ತದೆ. ಒಟ್ಟಿನಲ್ಲಿ ಇವರ ಇಡೀ ವ್ಯಕ್ತಿತ್ವವನ್ನು ರೂಪಿಸಿದ ಶ್ರೇಯಸ್ಸು ಅವರದು.

ಡಾ. ಎಂ.ಎಸ್‌ ಲಠ್ಢೆ ಅವರು ಇವರ ಮಾರ್ಗದರ್ಶಕರಾಗಿ ಇವರ ಮೇಲೆ ಪ್ರಭಾವ ಬೀರಿದ್ದನ್ನು ಆತ್ಮೀಯವಾಗಿ ತೆರೆದಿಟ್ಟಿದ್ದಾರೆ. ಇವರು ಸೊಲ್ಲಾಪುರದ ಕಾಲೇಜ್ ನಲ್ಲಿ ಸೇರಿ ಇತರ ಕಾರ್ಯಗಳಲ್ಲಿ ಮಗ್ನರಾಗಿ, ತಮ್ಮ ಪಿ.ಎಚ್.ಡಿ ಕೆಲಸವನ್ನು ಮುಂದೂಡುತ್ತಿದ್ದುದನ್ನು ಗಮನಿಸಿ ಒಮ್ಮೆ ಅವರ ಊರಿಗೆ ಹೋದಾಗ, ಇವರನ್ನು ಅವರ ಮನೆಯಲ್ಲಿ ಕೂಡಿಸಿ, ಒಂದು ತಿಂಗಳ ಕಾಲ ಒಂದೇ ಸಮನೆ ಮಹಾಪ್ರಬಂಧ ಬರೆಸಿ ಕಡೆಗೆ ಇವರು ತುಂಬಬೇಕಾದ ಪರೀಕ್ಷಾ ಶುಲ್ಕವನ್ನು ಅವರೆ ತುಂಬಿ, ವಿ.ವಿ.ಗೆ.ಮಹಾಪ್ರಬಂಧ ಸಲ್ಲಿಸುವಂತೆ ಮಾಡಿದರು.

ಪಿ.ಎಚ್.ಡಿ ದೊರೆತ ಮೇಲೆ ಇವರು ಕೃತಜ್ಞತೆ ಸಲ್ಲಿಸಲು ಎರಡು ಬೆಡಷೀಟ್ ಗಳನ್ನು ಒಯ್ದು ಉಡುಗೊರೆ ಕೊಟ್ಟರೆ, ಅವರು ಅದನ್ನು ಸ್ವೀಕರಿಸಿ ಇವರ ಜೇಬಿಗೆ ಕವರ್ ತುರುಕಿ ಮನೆಗೆ ಹೋಗಿ ನೋಡುವಂತೆ ತಾಕೀತು ಮಾಡಿದರು. ಬಂದು ನೋಡಿದರೆ ಅದರಲ್ಲಿ ಎರಡು ಸಾವಿರ ರೂಪಾಯಿ. ಇವರು ಬೆಡಷೀಟ್ ಗೆ ಕೊಟ್ಟದ್ದು ಆರು ನೂರು ರೂಪಾಯಿ. ಇಂದಿನ ಪಿಎಚ್ಡಿ ಮಾರ್ಗದರ್ಶನ ಮಾಡುವವರು ಮಾಡುವ ಹಗರಣ ಕಂಡರೆ ಇದೊಂದು ಪವಾಡ ಸದೃಶ ಘಟನೆಯಾಗಿ ಕಾಣಿಸುತ್ತದೆ.

ಇಂತಹ ಗುರು ಶಿಷ್ಯ ಅಂತಃಕರಣ ಸಂಬಂಧವನ್ನು ಅನನ್ಯವಾಗಿ ಈ ಕೃತಿ ಅನಾವರಣ ಮಾಡುತ್ತದೆ. ಒರಟು ಕಲ್ಲಾಗಿದ್ದ ತನ್ನನ್ನು ಕಟೆದು ಮೂರ್ತಿಯನ್ನಾಗಿ ಮಾಡಿದ ಶ್ರೇಯಸ್ಸು ಮೊದಲ ಗುರು ಧೂಳಪ್ಪನವರಿಂದ ಹಿಡಿದು ಪಿಎಚ್ಡಿ ಮಾರ್ಗದರ್ಶನ ಮಾಡಿದ ಎಂ.ಎಸ್. ಲಠ್ಠೆಯವರೆಗೆ ಎಲ್ಲರಿಗೂ ಸಲ್ಲುತ್ತದೆ ಎಂದು ಕೃತಜ್ಞತಾಪೂರ್ವಕ ನೆನಪು ಮಾಡಿ ಕೊಳ್ಳುತ್ತಾರೆ. ಆರಾಧನಾ ಭಾವ ಈ ಕೃತಿಯ ಪ್ರಧಾನ ಲಕ್ಷಣವಾಗಿದೆ. ಇದೊಂದು ಅಪರೂಪದ ಗುಣ- ಗುರು-ಶಿಷ್ಯ ಸಂಬಂಧ ವ್ಯಾವಹಾರಿಕವಾಗಿ ಮಾರ್ಪಟ್ಟಿರುವ ಈ ಸಮಕಾಲೀನ ಸ್ಥಿತಿಯಲ್ಲಿ.

ಪ್ರಸಿದ್ಧ ಮರಾಠಿ ಲೇಖಕರಾದ ಪು.ಲ.ದೇಶಪಾಂಡೆಯವರು ತಮ್ಮ ಮಾಸ್ತರ್ ಕುರಿತು ಬರೆದ ಇದೆ ಬಗೆಯ ಪ್ರಬಂಧವನ್ನು ನೆನಪಿಗೆ ತರುತ್ತದೆ. ಇಂತಹ ಕೃತಿಯನ್ನು ರಚಿಸಿ ತಾವು ಗುರುಗಳಿಂದ ಕಲಿತದ್ದಕ್ಕೆ ಋಣಸಂದಾಯ ಮಾಡಿದ ಗೆಳೆಯರಾದ ಪ್ರೊ.ಬಿ.ಬಿ‌.ಪೂಜಾರಿಯವರನ್ನು ಅಭಿನಂದಿಸುತ್ತೇನೆ. ಪುಸ್ತಕ ಕಳಿಸಿದ ಅವರ ಸೌಜನ್ಯಕ್ಕೆ ಕೃತಜ್ಞತೆ.

‍ಲೇಖಕರು Admin

29 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading