ಹುಡುಕಾಟ
-ಸುಬ್ರಾಯ ಚೊಕ್ಕಾಡಿ
ದೂರದಲ್ಲಿ ಯಾರೋ ದಂಟೆ ಕುಟ್ಟುತ್ತಿರುವ ಸದ್ದು!
ಯಾರಿರಬಹುದು?
ಕಣ್ಣು ಕಿರಿದುಗೊಳಿಸಿ ನೋಡಿದರೆ
ಬಾಗಿದ ಬೆನ್ನು,ಬೋಳು ತಲೆ
ಮೊಣಕಾಲ ತನಕದ ಕಚ್ಛೆ ಪಂಚೆ
ಮೈಯನ್ನು ಆವರಿಸಿದ ತುಂಡು ಬಟ್ಟೆ…
ಸಮೀಪಿಸಿ ಕೇಳಿದೆ:ಅಜ್ಜಾ
ಯಾರು ನೀನು?
ಅಜ್ಜ ಬೊಚ್ಚು ಬಾಯಿಯನಗಲಿಸಿ ನಕ್ಕು
ಹೇಳಿದ:ನಾನು ಮೋಹನದಾಸ.
ನಕ್ಕೆ. ಹೇಳಿದೆ:ಅಜ್ಜಾ,
ತಮಾಷೆಯಾಗಿದೆ ನಿನ್ನ ಹೆಸರು.ಇಲ್ಲಿರುವ
ನಾವೆಲ್ಲಾ ಮೋಹದ ದಾಸರು.
ನೀನೊಬ್ಬನೇ ಯಾಕೆ ಹೀಗೆ? ..
ಅಜ್ಜ ನಕ್ಕು, ಮುಂದೆ
ಹೊರಟಾಗ ಹೇಳಿದೆ:ಅಜ್ಜಾ,
ಆ ದಾರಿ ಬೇಡ. ಪೂರ್ತಿ ಹಾಳಾಗಿದೆ
ಬರೀ ಕಲ್ಲು ಮುಳ್ಳುಗಳಿಂದ ತುಂಬಿದೆ
ವಯಸ್ಸಾದ ನಿನಗೆ ಕಷ್ಟ..
ಅಜ್ಜ ಹೇಳಿದ ನಕ್ಕು, ಇಲ್ಲೇ ಹುಡುಕಬೇಕು ನಾನು
ಕಳೆದುದನ್ನು!
ಏನನ್ನು? ಕೇಳಿದೆ ನಾನು ಕುತೂಹಲದಿಂದ.
ಅಜ್ಜ ಹೇಳಿದ:ಸತ್ಯವನ್ನು!
ಸತ್ಯವನ್ನು?
ನಾನು ಅವಾಕ್ಕಾಗಿ ನಿಂತೆ
ಅಜ್ಜ ಹೆಜ್ಜೆ ಹಾಕಿದ ಮುಂದೆ
ಕಲ್ಲು ಮುಳ್ಳುಗಳ ಪಕ್ಕಕ್ಕೆ ಸರಿಸುತ್ತಾ
ದಂಟೆ ಕುಟ್ಟುತ್ತಾ…






0 Comments