ಕೆ ಎಸ್ ಎಸ್ ಕೆ ಕೊಪ್ಪ
ಆಗಸದಾಚಿನ ಆಗಸದಲ್ಲಿ
ದೃಷ್ಟಿ ನೆಟ್ಟು, ತದೇಕಚಿತ್ತದಿಂದ
ತಲ್ಲೀನನಾಗಿ ಹುಡುಕುತಲಿದ್ದೇನೆ…
ಯಾರಿಗೂ ಕಾಣದ್ದು ಎಂದಾದರೊಮ್ಮೆ
ನನಗೆ ಕಾಣಬಹುದೆಂದು….
ಪ್ರೀತಿ ಮರೀಚಿಕೆಯಾಗಿ ಇರಿದಾಗ,
ನಂಬಿಕೆಯೆಂಬ ಪದ ಅರ್ಥ ಕಳೆದುಕೊಂಡಾಗ
ಹಲವು ಬಾರಿ ಒಬ್ಬಂಟಿಯಾಗಿದ್ದೇನೆ….
ಹರಿವ ನದಿಯನ್ನು, ಬೀಸುವ ತಂಗಾಳಿಯನ್ನು
ಮಾತನಾಡಿಸಲು ಯತ್ನಿಸಿದ್ದೇನೆ….

ಯೌವ್ವನದ ಅಹಂಕಾರದಲಿ, ಅಜ್ಞಾನದಿಂದ
ಆ ಕ್ಷಣಕ್ಕೆ ಸರಿಯೆನಿಸಿ
ದೇವರನ್ನು ಎದುರು ಹಾಕಿಕೊಂಡಿದ್ದೇನೆ!!…
ತದನಂತರದ ಅನುಭವದ ಪಾಠದಿಂದ
ಅವನ ಪಾದಕ್ಕೇ ಎರಗಿದ್ದೇನೆ….
ಸರಿಯಾರು? ನಿಜವೇನು ಈ ಜಗದಲ್ಲಿ
ಎಂಬೆಲ್ಲಾ ಜಿಜ್ಞಾಸೆಯಿಂದ
ಹೊರಬರಲು ಸತತವಾಗಿ ಪ್ರಯತ್ನಿಸಿದ್ದೇನೆ…
ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೆಂದು
ಅರಿತು, ನಂತರ ಕೇಳದೇ ಸುಮ್ಮನಾಗಿದ್ದೇನೆ….
ಚಿಗುರುಗಳ, ಒಣಗೆಲೆಗಳ
ಮೊಳಕೆಗಳ ಹಾಗೂ ಸತ್ತ ಬಳ್ಳಿಗಳ ನೋಡಿ,ಬದಲಾವಣೆಗಳ ಗಮನಿಸಿದ್ದೇನೆ….
ಏನಾದರೂ ಆಗಲಿ ಇಂದಿಗೂ
ನಾನು ನಾನಾಗಿರಲು ಯತ್ನಿಸಿದ್ದೇನೆ….






ಚೆನ್ನಾಗಿದೆ