ರವಿ ಮೂರ್ನಾಡು, ಕ್ಯಾಮರೂನ್

ಹುಡುಕಾಡಿದೆ, ಸಿಗಲೇ ಇಲ್ಲ
ಮರಗಳ ಸ್ವರಗಳು
ಕಳೆದುಹೋದ ಸಮುದ್ರದ ಹಾಳೆಗಳು
ಹೆಬ್ಬಂಡೆ ಮೌನಗಳು |
ಎಲ್ಲವೂ ಅಲ್ಲೇ ಇದೆ
ಎಚ್ಚರವಿರದ ನಿದ್ದೆಗೆ ಬಿದ್ದಿವೆ |
ಮೇಲೆ ಸೇತುವೆಗೆ
ಕೆಳಗೆ ಹರಿವ ನದಿ ಮಾತಿಗಿಳಿದಿದೆ
ಕಿವಿ ನಿಮಿರಿ ಕಿನಾರೆಗಳು ಆಲಿಸುತ್ತಿವೆ |
ಎಲ್ಲೆ ಮೀರದ ಅಸುರಕ್ಷಿತ ಕೋಟೆ |
ಇದ್ಯಾವುದೂ ಸರಿ ಹೊಂದುವುದಿಲ್ಲ,
ಬಾಲ್ಯದ ಮನೆಯೊಳಗೆ ಎದ್ದ
ಕಾರಂಜಿಗಳಿಗೆ ಮಣ್ಣು ಮಗುಚಿದೆ
ಎಲೆಗಳು ಮುಚ್ಚಿವೆ |
ತಾಯ ನೀಳ ಬೆರಳುಗಳಿಗೆ
ಮನೆಯ ಕಲಹದ ಅರಗಿನ ಮಾತುಗಳು
ಕಗ್ಗಂಟಾಗುತ್ತಾ, ಮತ್ತೊಮ್ಮೆ ಬಿಚ್ಚುತ್ತಾ
ಕಸೂತಿ ಹೆಣೆಯುತ್ತಿವೆ ರಾತ್ರಿಗಳು |
ತಂದೆಯ ಸುಕ್ಕು ಕೈಗಳಲಿ
ರಾತ್ರಿಯ ನೆರಳೊಂದು
ನಶಿಸಿದ ಗಡಿಯಾರದ
ಪುನರುತ್ಥಾನಕೆ ಶ್ರಮಿಸುತ್ತಿದೆ |
ಅಥವಾ
ಬಂಧಮುಕ್ತಿಗೊಂಡು
ಅಸಂಖ್ಯ ಹಾರಾಟಕೆ ಹವಣಿಸುತ್ತಿದೆ |
ಹುಡುಕಾಡಿದೆ, ಸಿಗಲೇ ಇಲ್ಲ
ಪತ್ತೆಯಾಗದ ಮನೆಯೊಳಗೆ
ಕತ್ತರಿಸಿದ ರೆಕ್ಕೆಗಳ ಕಳಚಿದ ಗರಿಗಳು
ಕಳೆದುಹೋದ ಜೋಡಿ ಚಪ್ಪಲಿ
ಚದುರಿದ ಅ ಆ ಇ ಈ ಅಕ್ಷರಗಳು |
ಎಲ್ಲವೂ ಅಲ್ಲೇ ಇದೆ
ಎಚ್ಚರವಿರದ ನಿದ್ದೆಗೆ ಬಿದ್ದಿವೆ |
ಅದೋ ರಾತ್ರಿ ಚಲಿಸಿದೆ…
ಕಟ್ಟ ಕಡೆಯ ಶವಯಾತ್ರೆಗೆ ನೆನೆದು
ತಲೆ ಕತ್ತರಿಸಿದ ಮೊದಲ ಮಲ್ಲಿಗೆ-
ಹೂವಿನ ವಶದಲ್ಲಿರುವ
ಪರಿಮಳವ ಆಘ್ರಾಣಿಸುತ್ತಿದೆ |







ತಂದೆಯ ಸುಕ್ಕು ಕೈಗಳಲಿ
ರಾತ್ರಿಯ ನೆರಳೊಂದು
ನಶಿಸಿದ ಗಡಿಯಾರದ
ಪುನರುತ್ಥಾನಕೆ ಶ್ರಮಿಸುತ್ತಿದೆ
ಎಂತಹಾ ಅದ್ಬುತವಾದ ಸಾಲುಗಳು……ರಾತ್ರಿಯ ನೆರಳೇ ಒಂದು ಅದ್ಬುತ ಪ್ರತಿಮೆ..ಥ್ಯಾಂಕ್ಸ್ ರವಿ ಸರ್
ನನಗೆ ಬರವಣಿಗೆಯ ಪಾಠ ಹೇಳಿಕೊಟ್ಟ ರವಿಯಣ್ಣನ ಕವಿತೆ.
ಎಲ್ಲವೂ ಅಲ್ಲೇ ಇದೆ
ಎಚ್ಚರವಿರದ ನಿದ್ದೆಗೆ ಬಿದ್ದಿವೆ – ಕವಿತೆ ಓದುವಾಗ ಒಂದು ರೀತಿಯ ಮೌನ ಆವರಿಸಿಕೊಂಡರೂ, ಒಳಗೆ ಭಗ್ನತೆ ಇದೆ. ವಿಶಾಲಾರ್ಥವಿದೆ. ಪ್ರಪಂಚದ ನಾಗರೋಟದಲ್ಲಿ ಇದ್ದು ಇಲ್ಲದಂತಿರುವ ಆರ್ತಭಾವಗಳು ಒಳಗೊಳಗೆ ಬೇಯುತ್ತಿವೆ. ಒಂದು ಒಳ್ಳೆಯ ಕವಿತೆಯನ್ನು ಓದಿಸಿದ್ದಕ್ಕಾಗಿ ವಂದನೆಗಳು
ಮನುಷ್ಯ ತನ್ನ ಗತಕಾಲದ ಸ್ಥಿತ್ಯಂತರ ಮತ್ತು ಗತ್ಯಂತರಗಳನ್ನು ಮತ್ತೊಮ್ಮೆ ಹೊಕ್ಕಿ ನೋಡಿ ತಾನು ನಡೆದು ಬಂದ ಹಾದಿಯನ್ನೊಮ್ಮೆ ಅಳೆದಂತಿದೆ ಕವಿತೆ. ಕಾವ್ಯ ನುಡಿಯುವುದು ಮಾರ್ಮಿಕವಾಗಿ, ನುಡಿದದ್ದೊಂದಾದರೆ ವೇಧ್ಯವಾಗುವುದೊಂದಾಗುವಂತೆ! ಬಹಳ ಚೆಂದದ ಪ್ರಸ್ತುತಿ ರವಿಯಣ್ಣ.
– ಪ್ರಸಾದ್.ಡಿ.ವಿ.
ಕವಿತೆ ಓದುತ್ತ ಓದುತ್ತ ಹೃದಯ ಮೌನವಾಯಿತು. ಮಾತಿಲ್ಲ.. ಧನ್ಯವಾದ
ಮನದಾಳದ ಭಾವಗಳ ಮಾರ್ಮಿಕ ಅಭಿವ್ಯಕ್ತಿ…