ಇಳಿಸಂಜೆ, ಸೂರ್ಯ ಆಗಷ್ಟೆ ತನ್ನ ಕರ್ತವ್ಯ ಮುಗಿಸಿ ನಮ್ಮ ದೇಶದ ಜನರ ಕಣ್ತೆರೆಸಲು ಅಣಿಯಾಗುತ್ತಿದ್ದ ಹೊತ್ತು. ಒಮ್ಮೆ ಮೈಮುರಿದು ಸುತ್ತಲೂ ನೋಡಿದೆ, ಅಲ್ಲಲ್ಲಿ ಕಣ್ಣು ಕುಕ್ಕುವ ಬೆಳಕು, ನಿಮಿಷಕ್ಕೆರಡರಂತೆ ಹಾರಿ ಇಳಿಯುತ್ತಿರೋ ಲೋಹ ಪಕ್ಷಿಗಳು, ಸಮವಸ್ತ್ರಧಾರಿ ಪಹರೆ ಸಿಪಾಯಿಗಳು, ಗಜಿಬಿಜಿ ವರ್ಣ ರಂಜಿತ ಜನಗಳು. ನಮ್ಮೂರಿನಲ್ಲಿರದ ವಿಶೇಷತೆ ಇಲ್ಲೇನಿದೆ, ವಿಧಿ ವಿಧಾನಗಳೆಲ್ಲವು ಅದೇ ರೀತಿಯಿದೆಯಲ್ಲಾ. ಆದರೂ ಏನೋ ಇಲ್ಲದ ಭಾವ, ಮತ್ತೇನೋ ಇರುವ ಭಾವ. ಶುರುವಾಯ್ತು ಮನದ ತುಮುಲಗಳು. ಇರುವ-ಇಲ್ಲದ ತುಲನೆಗಳು.
ನಮ್ಮವರು ತಮ್ಮವರು, ಬಂಧು ಬಳಗ, ಭಾಂದವ್ಯಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಹಾತೊರೆದು ಬರುವ ಆಗಂತುಕರನು ಪ್ರೀತಿಯಿಂದಲೇ ಸ್ವಾಗತಿಸಿ ಸಲುಹಿ, ಬಿಟ್ಟು ಹೋಗದಂತೆ ಮಾಡೋ ಈ ದೇಶದ ಮಣ್ಣಿನ ಗುಣದಲ್ಲಿ ಅದೇನು ಮೋಡಿಯಿದೆಯೋ ತಿಳಿಯಲು ಪ್ರಯತ್ನಿಸಿ ಸೋತು ಕೊನೆಗೆ ತಾವೂ ಈ ನೆಲದ ಆಡಂಬರದ ಆಮಿಷಗಳಿಗೆ ಬಲಿಯಾಗಿ ಬಂಧಿಯಾಗಿಬಿಟ್ಟರೆಷ್ಟೋ ಜನ. ನನ್ನ ನಿಯತ್ತನ್ನು ಪ್ರಶ್ನಿಸಲು ಕಾಡು ಕುಳಿತಿದೆ ಈಗ.
ಏನಾಗುವೆ ನಾ ಇಲ್ಲಿಯ ನೆಲ ಜಲ ಸೋಕಿದ ಮೇಲೆ ಅರಿಯೆ?
ನಮ್ಮೂರ, ನಮ್ಮೋರ ಹಿತಾಸಕ್ತಿಗಳಿಗೆ ಉತ್ತರವಾಗಲು ನಾ ಹಿಂತಿರುಗಲೇ ಬೇಕು, ಹಣದ ಅಣೆಕಟ್ಟೆಯಿಂದ, ವಿಜ್ಞಾನದ ವೈಭವೀಕರಣದಿಂದ, ತಂತ್ರಜ್ಞಾನದ ಮಂತ್ರಗಳಿಂದ ತಡೆಯಬೇಡ ಅಂದು, ನಾ ಹೊರಟು ನಿಂತಾಗ. ಅಲ್ಲಿಯವರೆಗೆ ತಾವರೆಯ ಎಲೆಯಂತೆ ಅಂಟಿಯೂ ಅಂಟದ ಭಾವವಿರಲಿ ನನ್ನ ಮನಕ್ಕೂ- ಇಲ್ಲಿಯ ಮಣ್ಣಿಗೂ.
ಮೊದಲ ದಿನವೇ ಹೊರಡೋ ಮಾತೇಕೆ, ಮೌನದಿ ದಿನಗಳ ಕಳೆದರೆ ಕಾಲವೇ ಉತ್ತರವಾಗುವುದು ಬದುಕಿನ ತಿರುವುಗಳಿಗೆ. ಮಾತೃದೇಶದಿಂದ ಹೊರಬಂದ ಪ್ರಥಮ ದಿನ, ಮನಸ್ಸು ಭಾರವಾಗಿದೆ – ಹಗುರವೆನಿಸಿದಾಗ ಇಲ್ಲಿಯ ಅಂದದ ಹಂದರಗಳಾ ಹರಡುವೆ.
“ಹಾರಿ ಬಂದರೂ ಹರದೂರ
ಕಾಡುತಿದೆ ಕರೆಯುತಿದೆ
ಮಾತೃಭೂಮಿಯ ಮಮಕಾರ/
ಮರೆಯದಿರಲಿ ನನ್ನ ಜನ
ಮರಳಿ ಹೋಗೋ ತನಕ
ಅಳಿಯದಿರಲಿ ಮನದಿಂದ
ಮಧುರ ನೆನಪಿನ ತವಕ”/







ನಿಯತ್ತನ್ನು ಪ್ರಶ್ಸಿಸುವ ಆಡಂಬರ, ಆಮಿಷ. ನಿಮ್ಮ ತುಮುಲಗಳನ್ನು ಚೆನ್ನಾಗಿ ಚಿತ್ರಿಸಿದ್ದೀರಿ
Lines at the end are very good.
vary good
Dhanyavadagalu geleyare….!!!