ಎರಡು ಕವನಗಳು
– ನಾ ದಿವಾಕರ್
ಯಾವುದೋ ಅವ್ಯಕ್ತ
ಘಳಿಗೆಯಲಿ ಮೂಡಿದ
ವಾಂಛೆಯ ಕುಡಿ ನೀನು
ಪವಿತ್ರವಲ್ಲವೇ
ಒಡಳಾಲದಿಂ ಹರಿದ
ನೆತ್ತರ ಸುಳಿ !
ನಿನ್ನ ತೊದಲು ನುಡಿ
ತಪ್ಪು ಹೆಜ್ಜೆಗಳ ಗುರುತು
ಹೃನ್ಮನಗಳಲ್ಲಿ ಶಾಶ್ವತ ;
ಮುದ್ದಾಡಿದ ಅಧರಗಳು
ಎತ್ತಾಡಿಸಿದ ಕೈಗಳು
ದಿಗಂತದ ದಿಕ್ಸೂಚಿಗಳಂತೆ
ಅನಂತಾನಂತ !
ನಡೆವ ಕಾಲೇ
ಎಡವುವುದು ನುಡಿವವರೇ
ತೊದಲುವುದು
ಪಡೆದವರೇ ತ್ಯಜಿಸುವುದು
ಪ್ರಕೃತಿ ನಿಯಮ ;
ಬಾಳ ಪಯಣದಿ
ಕಾಣ್ವ ತಡೆಗಳನು
ತೊಡೆಯುವುದು
ಜೀವನದ ನಿಯಮ !
ಒಂಟಿ ಕಾಲಲಿ
ಓಡಲೆಣಿಸದಿರು ಮಗೂ ;
ತುಂಟ ನುಡಿಗಳಲಿ
ಕಥನ ಕಾವ್ಯ ಕಟ್ಟದಿರು
ಮಗೂ ! ಕೆಟ್ಟ ಘಳಿಗೆಯದು
ನಿತ್ಯಭಾವವ ಕೆಣಕಿ
ಮುಗ್ಗರಿಸುವುದು ಮನ
ತತ್ತರಿಸುವುದು ಯೌವ್ವನ !
ಭಾವನೆಗಳ ಮೆರವಣಿಗೆ
ಜೀವಾತ್ಮದಲಿ ಕಲೆತು
ಕಾಲ್ಪನಿಕ ಲೋಕದಲಿ
ಮನ ವಿಹರಿಸುವಾಗ
ಎತ್ತಲೋ ಹರಿವ ತಂಗಾಳಿ
ಅಗ್ನಿಶಿಖೆಯಾದೀತು ;
ನೆಲದ ಮೇಲಿನ
ಹೆಜ್ಜೆ ಮಲಿನವಾದೀತೆಂದು
ಎದೆಯೊಳಗೆ
ಹೆಜ್ಜೆ ಮೂಡದಿರಲಾದೀತೇ ?
ಕ್ಷಣಿಕ ಪಯಣವಿದು
ಆಗಂತುಕರೊಡನೆ ;
ಹಾದಿಯಲಿ ಎನಿತೋ
ಬದಿಯಲ್ಲಿ ಎನಿತೋ ;
ಲೆಕ್ಕಿಸದಿರು ಪಯಣಿಗರ
ದಿಕ್ಕು ಮಾತ್ರವೆ
ಅಮರ
ನೆತ್ತರೊಳಗಿನ ಬೆವರು
ಮುನ್ನಡೆಗೆ ಲಾಂಛನ !
ಅಳಿಯುತ್ತಲೇ ಇರುತ್ತದೆ
ನೆಲದ ಮೇಲಿನ ಹೆಜ್ಜೆ
ಮೊಳಗುತ್ತಲೇ ಇರುತ್ತದೆ
ಆಂತರ್ಯದ ಗೆಜ್ಜೆ ;
ವ್ಯಷ್ಟಿಯಲಿ ಕಾಣದ
ಸೌಂದರ್ಯ ಸಮಷ್ಟಿಯಲಿ
ಕಂಡೀತು ; ಸ್ವಪ್ರಜ್ಞೆ
ಇರಲಿ ಸುಪ್ರಜ್ಞೆ ಇರಲಿ
ಹೃದಯಾಂತರಾಳದಲಿ
ಮಾನವೀಯತೆ ಇರಲಿ ;
ಅದುವೆ ಅಂತಿಮ ಸತ್ಯ !
ದಕ್ಷಿಣಾಭಿಮುಖಿ
ಊರ ಜಾತ್ರೆಯಲಿ ಕಿರು ಬೆರಳು ಹಿಡಿದ
ಮುದ್ದಿನ ಕೂಸು
ಕೇಳುತ್ತಿತ್ತು, ಅಪ್ಪಾ ಆ ಬೊಂಬೆಯನ್ನೇಕೆ
ಕೊಡಿಸುವುದಿಲ್ಲ ?
ಮಗೂ, ಅದು ಸಿರಿವಂತರ ಸ್ವತ್ತು
ನಮಗೇಕೆ ಆ ಗತ್ತು !
ಎಂದು ತಲೆ ನೇವರಿಸುವಾಗ
ಕಣ್ಣಾವೆಗಳಲಿ ಹನಿಯಾಡುತ್ತಿತ್ತು !
ಇಂದೂ ಅದೇ ಕಣ್ಣೀರು
ಮನದಾಳದ
ನೆಪ್ಪುಗಳ ತೊಳೆಯುತಿದೆ ;
ಮೃದು ಕೈಗಳ ಸ್ಪರ್ಶ ಸುಖ
ಇನ್ನಿಲ್ಲವಾದಾಗ !
ಎಷ್ಟು ವರ್ಷಗಳಾದವು ಬಾಂಧವ್ಯ
ಹೊಸೆಯಲು ಮಧುರ ಪ್ರೀತಿ
ವಾತ್ಸಲ್ಯಗಳು ಬೆಸೆಯಲು ;
ಒಡಲ ಕುಡಿ ಮಗದೊಂದು
ಹೊಸಿಲ ಮೆಟ್ಟಲು !
ಆಗಲೂ ಅದೇ ಗೊಂದಲ
ಅಪ್ಪಾ ಸಿರಿವಂತರ ಗತ್ತು ಬೇಡಪ್ಪಾ !
ಹೆತ್ತೊಡಲ ತೊರೆದು ಅನ್ಯತೆಯಲಿ
ಬೆಸೆದುಕೊಳ್ಳುವುದು ಅನಿವಾರ್ಯವೇ ?
ಇರಲಿ ಮಗು ಉತ್ತರ
ದಕ್ಷಿಣಗಳು ಬಾಳ ಬುತ್ತಿಗಳು
ವಾತ್ಸಲ್ಯದ ಉತ್ತುಂಗವೇ
ಒಡಲ ಕುಡಿಯ ಸುಖ
ಮನದಾಳದಿ ನೆಲೆಸಿರುವೆ
ಕಂದರ ಇನ್ನೆನಿತು ಎಂದ ನೆನಪು !
ಹೆತ್ತೊಡಲ ಆಕಾಂಕ್ಷೆ ಸುಖ ಸಿರಿಯ
ವಾಂಛೆ ; ಏರುವ ಅಲೆಗಳ-
ನೆದುರಿಸಿ ಮುನ್ನಡೆವ ಛಲ
ಉತ್ತರದ ಪಯಣಕೆ ಲಾಂಛನ ;
ಕಂಡವರಾರು ಕಾಂಚಾಣದಿ
ಕರಗುವ ಸಿಂಧೂರವನು ;
ಕಂದಮ್ಮ ದಕ್ಷಿಣಾಭಿಮುಖವಾಗಿ
ಹಿಂದಿರುಗಿದಾಗ
ಅದೇ ಜಾತ್ರೆಯ ಕಿರು ಬೆರಳ
ನೆನಪು !
ಮೃದು ಸ್ಪರ್ಶದ ನೆನಪಿನಲಿ
ಮರೆತ ದೇಹದ ಭಾರ !







ಇಷ್ಟವಾಯಿತು…