– ದಿನೇಶ್ ಕುಮಾರ್
ಗಂಧ
ತೇಯುತ್ತಲೇ ಇದ್ದೇನೆ
ದೇಹಕ್ಕೆ ಆತ್ಮ…
ನುಣುಪು ನುಣುಪಾಗಿ
ಗಂಧದಂತೆ ಏನೋ ಹೊರಡುತ್ತಿದೆ
ಹಣೆಗೆ ಹಚ್ಚಿಕೊಳ್ಳಬೇಕು…
ನಿನ್ನ ಪಾದದ ಹೆಬ್ಬೆರಳು ಸ್ಪರ್ಶಿಸಬೇಕು
ಅಲ್ಲಿ ಚಕ್ರದಂತೆ ಸುಳಿಸುಳಿ ಸುತ್ತಬೇಕು
ಸಣ್ಣ ಬೆವರಿನ ಕಣವ ತಂದು ಎದೆಗಂಟಿಸಿಕೊಳ್ಳಬೇಕು
ಎದೆಯ ಸಾವಿರ ಕೋಗಿಲೆಗಳಿಗೆ ಗಂಟಲಾಗಬೇಕು
ಅರೆಕ್ಷಣವಾದರೂ ಸೈ
ಹೆಣ್ಣಾಗಬೇಕು
ಮುಡಿಯಲ್ಲಿ ನಿನ್ನ ಮುಖ ಹುದುಗಿಸಿ ಮಗುವಾಗಿಸಬೇಕು
ಮಡಿಲಲ್ಲಿ ಜಿನುಗಿಸಿ ನಿನ್ನ ಕಣ್ಣಾಗಬೇಕು
ಮೊಲೆಯೂಡಿಸಿ ನಿನ್ನ ಒಡಲಾಗಬೇಕು
ಬೆನ್ನ ಮೇಲೆಲ್ಲ
ನೀನು ಬರಸೆಳೆದು ಗೀರಿದ ಗುರುತು
ಪ್ರತಿ ಗಾಯದಲ್ಲೂ
ನಾನು ಮತ್ತೆ ಮತ್ತೆ ಹುಟ್ಟಿದ್ದೇನೆ
ತೇಯುತ್ತಲೇ ಇದ್ದೇನೆ
ದೇಹಕ್ಕೆ ಆತ್ಮ
ಗಂಧದಂತೆ ಹೊರಟಿದ್ದು ನೀನಾ?
ತೇಯ್ದು ತೇಯ್ದು ದೇಹವೂ ಆತ್ಮವೂ ಅಳಿದಾಗ
ಉಳಿಯುವುದು ಬರಿಯ ನೀನೇನಾ?
ಅಥವಾ ನೀನೆಂಬ ನಾನಾ?
ಅಗೋ,
ಮಿಂಚುಹುಳದ ಗರ್ಭದಲ್ಲಿ
ಚಂದಿರ ಹುಟ್ಟುತ್ತಿದ್ದಾನೆ
ಬಾ, ಅವನಿಗೊಂದು ಹೆಸರು ಇಡೋಣ]]>






ಚನ್ನಾಗಿದೆ
its fine
ಮಿಂಚು ಹುಳುವಿನ ಗರ್ಭದಲ್ಲಿ ಚಂದಿರನ ಹುಟ್ಟನ್ನು ಕಂಡು ಬೆರಗುಗೊ೦ಡ ಆ ಕ್ಷಣದ ಭಾವ ಶ್ರೇಷ್ಠವಾದುದು ಎಂದು ಭಾವಿಸುತ್ತೇನೆ. ಅಷ್ಟೊಂದು ಸೂಕ್ಷ್ಮ ಒರತೆಯನ್ನು ಕಂಡು ಸಂತೋಷವಾಗುವುದು. ಭರವಸೆಗೆ ಅಷ್ಟು ಸಾಕು. ತುಂಬಾ ಚೆನ್ನಾಗಿದೆ ಕವಿತೆ.