
ಪ್ರಸನ್ನ ನೇತೃತ್ವದಲ್ಲಿ ಸಮುದಾಯ ಸಾಂಸ್ಕೃತಿಕ ಜಾಥಾ ಆರಂಭವಾಗಿತ್ತು. ಬೀದಿಬೀದಿಯಲ್ಲಿ ನಾಟಕಗಳ ಹಬ್ಬ. ತಮಟೆ ಬಡಿದರೆ ಸಾಕು ಜನ ಗುಂಪುಗಟ್ಟಿ ನಿಂತು ಬಿಡೋರು. ಅದ್ಯಾವ ಆವೇಶವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದರೋ. ಯುವಕರ ದಂಡೊಂದು ಸಿಟ್ಟಿನಿಂದ ‘ತುರ್ತುಪರಿಸ್ಥಿತಿ ಕರಾಳ ರಾಣಿಯ ಕಥೆಯನು ಹೇಳ್ತೀವಿ, ಜನಗಳ ಸಾವಿರ ಸಂಕಟವನ್ನು ಜೊತೆಯಲಿ ಹೇಳ್ತೀವಿ, ಭಾರತ ದೇಶವ ಜೈಲನು ಮಾಡಿ, ಜನಗಳ ಬಾಯಿಗೆ ಬೀಗವ ಹಾಕಿ, ಮನೆ ಮನೆಯಲ್ಲೂ ಕೊಲೆಗಳ ಮಾಡಿ ..’ ಅಂತ ಸಿದ್ಧಲಿಂಗಯ್ಯನವರ ಕವಿತೆಯನ್ನು ದೊಡ್ಡ ಗಂಟಲಲ್ಲಿ ಹಾಡುತ್ತಿದ್ದರು. ಅದೊಂದು ಕವಿಗೋಷ್ಟಿ. ಎಮರ್ಜೆನ್ಸಿಯಲ್ಲಿ ಜೈಲಿನೊಳಗಿದ್ದು ಬಂದ ಚಂಪಾ ಮುಖದಲ್ಲಿ ನಗು ತುಳುಕಿಸುತ್ತಾ ಮೈಮೇಲಿನ ಕೊಳೆಯನ್ನೇ ಉಂಡೆ ಮಾಡಿ ಮಗನನ್ನು ಸೃಷ್ಟಿಸಿದ ಪಾರ್ವತಿ ಕುರಿತ ಕವನ ವಾಚನಕ್ಕೆ ಮುಂದಾಗುತ್ತಿದ್ದರು. ‘ಎಲ್ಲರೂ ಹೇಳುತಾರೆ ಪಾರೋತಿ, ಇತ್ತಿತ್ಲಾಗೆ ನೀ ಬಾಳಾ ನಾರೂತಿ’ ಅಂತಂದಾಗ ಕೇಳುವವರೆಲ್ಲರೂ ಬಿದ್ದು ಬಿದ್ದು ನಗುತ್ತಿದ್ದರು.
ಜಿ ಎಸ್ ಸದಾಶಿವ ಅವರ ಕಥಾಸಂಕಲನ ಕೈಗೆತ್ತಿಕೊಂಡಿದ್ದೆ. ಅದರಲ್ಲಿ ‘ಮೀಸೆಯವರು’ ಅನ್ನೋ ಕಥೆ. ಮೀಸೆ ಬೆಳೀತಾ ಹೋಗ್ತಾ ಇದೆ. ‘ಏನಾ ಹೇಳಲವ್ವಾ ಭಾರತಿ , ಇಡಿ ಜಗದಾಗೆಲ್ಲಾ ಹೆಚ್ಚೇತವ್ವ ನಿನ್ನಾ ಕೀರುತಿ’ ಅಂತ ಚಂದ್ರಶೇಖರ ಕಂಬಾರರು ಕ್ಯಾಸೆಟ್ ನೊಳಗೆ ಹಾಡುತ್ತಿದ್ದರು. ಕ್ಲಿಕ್..ಕ್ಲಿಕ್..ಕ್ಲಿಕ್.. ಕ್ಲಿಕ್..ಎಷ್ಟೊಂದು ಬಿಂಬಗಳು ಮನಸ್ಸಿನೊಳಗೆ ಶೇಖರವಾಗುತ್ತಾ ಹೋಯ್ತು.
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್






0 Comments