ಹೃದಯ ಶಿವ
ರಾಮ ಬೆಂಕಿಗೆ ನೂಕಿದರೆ
ಬುದ್ಧ
ನಡುರಾತ್ರಿ ಬಿಟ್ಟು ಹೋದ,
ಇವರಿಬ್ಬರಿಗಿಂತಲೂ
ನನಗೆ ಆದರ್ಶವಾಗೋದು
ತನ್ನ
ಬಾಳಿನ ಕೊನೆಯಕ್ಷಣದವರೆಗೂ
ತನ್ನ ಮಡದಿ ಮಾರಕ್ಕನನ್ನು
ಪ್ರೀತಿಯಿಂದ ನೋಡಿಕೊಂಡ
ನಮ್ಮೂರಿನನಕ್ಷರಸ್ಥ
ಬೋರಣ್ಣ.

ಬರಗಾಲದ ಮಧ್ಯಾಹ್ನ
ಬಡಕಲು ಮುದುಕ
ಏದುಸಿರು ಬಿಡುತ್ತ ನಡೆವುದ
ಕಂಡು
ಬೋಳುಮರ
ಅಸಹಾಯಕತೆಯಿಂದ
ಆಕಾಶ ನೋಡಿತು

ಈ ಜಗತ್ತಿನಲ್ಲಿ ಜಾಸ್ತಿ ಉಗಿಸಿಕೊಳ್ಳುವ ಗೌರವ
ಮೈಕಿಗೆ ಸಲ್ಲುತ್ತದೆ

ನೆಲದ ಮೇಲೆ
ನನ್ನ ನೆರಳು ಮಲಗಿತ್ತು,
ನಾನು ಮತ್ತು ಸೂರ್ಯ
ಅಚ್ಚರಿಯಿಂದ
ನೋಡುತ್ತಾ ನಿಂತಿದ್ದೆವು.

ಬದುಕು ತೆರೆದಿಟ್ಟ
ಸಾವಿರ ಅಚ್ಚರಿಗಳಲ್ಲಿ
ನಿನ್ನ
ಕಣ್ಣಂಚಿನ ಮಿಂಚಿಗೆ
ಮೊದಲ ಸ್ಥಾನ

ಉಣ್ಣಲು ಅನ್ನವಿಲ್ಲದೇ
ಸುಮ್ಮನೆ ಕಣ್ಮುಚ್ಚಿ ಕುಳಿತಿದ್ದ
ಆ ಶಾಪಗ್ರಸ್ತ ವ್ಯಕ್ತಿಯನ್ನು
ಲೋಕ
ತಪಸ್ವಿಯೆಂದು ಕರೆಯಿತು





0 Comments