ಇತತ್ತೀಚೆಗೆ ಬಿಡುಗಡೆಯಾದ ನಟರಾಜ್ ಹುಳಿಯಾರ್ ಅವರ ‘ಕವಿಜೋಡಿಯ ಆತ್ಮಗೀತ’ ಕಥಾಕಾವ್ಯದ ಪುಸ್ತಕವನ್ನು ಓದಿದ ನಿವೇದಿತಾ ಮುಖಪುಟದ ಭಾವಚಿತ್ರಕ್ಕೆ ಆಕರ್ಷಿತರಾಗಿ ಅದರ ಮೇಲೆ ಬರೆದಿರುವ ಈ ಕವನ ಇಲ್ಲಿದೆ.
ನಿವೇದಿತಾ ಎಚ್
ನಿನಗೆ ಗೊತ್ತೇ…
ಪ್ರೀತಿ, ಮೃದು-ಮಧುರ ಎಂದಷ್ಟೇ ಅಂದುಕೊಂಡಿದ್ದೆ
ಅದು, ಕಾಡುವ ಕಾಡಿಸುವ ಅಮಲೆಂದು ತಿಳಿದಿರಲಿಲ್ಲ!
ಒಲವಿನ ಸವಿ
ನೆಮ್ಮದಿಯ ನಿದ್ರೆಗೆ ಎಡೆಯೆಂದುಕೊಂಡಿದ್ದೆ,
ಇರುಳಿನಲಿ ಹೆಡೆಯೆತ್ತಿ ಎರವಾಗುತ್ತದೆ ಎಂದುಕೊಂಡಿರಲಿಲ್ಲ!
ಪ್ರೇಮ,
ಮೈಮರೆಸಿ, ಬುದ್ಧಿ ಮಸುಕಾಗಿಸಿ,
ಮರುಳು ಮಾಡುವ ಮಾಯೆ ಎಂದೆಣಿಸಿದ್ದೆ,
ಆದರೆ
ಜೀವಕುದ್ದಿಶ್ಯದ ಸೆಲೆ ನೀಡುವ ಅಮೃತವದು!
ಪ್ರಿಯನ ನೆನಪು,
ಕೆನ್ನೆ ರಂಗೇರಿಸಿ ಪುಳಕವನ್ನಷ್ಟೇ ನೀಡುತ್ತದೆ ಎಂದು ಭಾವಿಸಿದ್ದೆ
ಇಲ್ಲ…
ಅವನಿಲ್ಲದ ಚಣ ಚಣದ ಖಾಲಿತನ ಬಿಕ್ಕುವಂತೆ ಮಾಡುತ್ತಿದೆ!
ಸಂತಸದುದ್ಗಾರ ಮಾತ್ರ
ಪ್ರಣಯದ ಉತ್ಕಟತೆ ಎಂಬ ಕಲ್ಪನೆಯಿತ್ತು
ಮರುಳು ನಾನು…
ತೆಕ್ಕೆಬಿದ್ದು ಭೋರೆಂದು ಅಳುವ ಶಬ್ದ
ಅದರ ನಿಜ ಮುಖವೆಂದು ನಾನರಿತಿರಲೇಲ್ಲ
ನೀ ಸಿಕ್ಕೆ…
ಪ್ರೀತಿ ಅವಿರ್ಭವಿಸಿತು
ಸೆಲೆಯೊಡೆಯಿತು
ಭೋರ್ಗರೆಯಿತು
ತಣ್ಣಗೆ ಪ್ರವಹಿಸಿತು
ಪ್ರೇಮ ಸಾಕ್ಷಾತ್ಕಾರದ
ಭ್ರಮೆ ಹುಟ್ಟಿಸಿತು!
0 ಪ್ರತಿಕ್ರಿಯೆಗಳು