`ಈಶ್ವರ ಅಲ್ಲಾ` ಒಂದು ಪ್ರಾರ್ಥನಾ ಗೀತೆ

ಕೇಶವ ಕುಲಕರ್ಣಿ
(ಜಾವೇದ್ ಅಖ್ತರ್ 1947-EARTH ಚಿತ್ರಕ್ಕೆ ಬರೆದು, ಎ ಆರ್ ರೆಹಮಾನ್ ಸಂಗೀತ ನೀಡಿದ ಹಾಡಿದು,
ಕನ್ನಡ ಭಾವಾನುವಾದ, ಅದೇ ಧಾಟಿಯಲ್ಲಿ ಹಾಡಬಹುದು)
ಈಶ್ವರ ಅಲ್ಲಾ ನಿನ್ನಯ ಜಗದಿ
ದ್ವೇಷವಿದೇಕೆ ಛಲವೇಕೆ? ।ಪ!
ನಿನ್ನಯ ಮನವು ಆಲದ ಮರವು
ಮನುಜನ ಮನವು ತೃಣವೇಕೆ? ।ಅ.ಪ।
ಅಡಿಗಡಿಗೊಂದು ಗಡಿಗಳು ಏಕೆ
ನಿನ್ನದೇ ಅಲ್ಲವೇ ಜಗವೆಲ್ಲಾ?
ನೇಸರ ನಮ್ಮನು ಸುತ್ತುತಲಿದ್ದರೂ
ಕತ್ತಲೆ ನಮ್ಮಯ ಬದುಕೆಲ್ಲಾ
ಭೂಮಿಯ ಸೀರೆಯ ಅಂಚಿನ ತುಂಬ
ಮನುಜನ ರಕುತದ ಕಲೆ ಏಕೆ? (೧)
ಕಿವಿಗಪ್ಪಳಿಸಿವೆ ಹಾಹಾಕಾರ
ಒಲುಮೆಯ ಮಾತು ಕೇಳಿಸದು
ಚೂರ್ಚೂರಾದವು ಸಾವಿರ ಕನಸು
ಜೋಡಿಪರಾರೋ ಕಾಣಿಸದು
ಮನ ಬಾಗಿಲಿಗೆ ಬಿದ್ದಿದೆ ಬೀಗ
ಬೀಗಕೆ ಹಿಡಿದಿದೆ ತುಕ್ಕೇಕೆ? (೨)





0 Comments