ಮನಸ್ಸಿಗೆ ತೋಚಿದ್ದು.. ಕನ್ನಡ ಭಾಷೆಯ ಬಗ್ಗೆ..
ಶ್ರೀವಿದ್ಯಾ
‘ಈಟಿವಿ’ ಸುದ್ದಿವಾಹಿನಿಗೆ ಸೇರಿದ ಸಮಯ. ತುಂಬಾ ಸುಂದರವಾದ ಕ್ಷಣಗಳು. ಯಾವುದೇ ಹೇಳಿಕೊಳ್ಳುವಂತಹ ಬದ್ಧತೆ, ಜವಾಬ್ದಾರಿಗಳು, ಇರಲಿಲ್ಲ. ನಾನು ಮಂಗಳೂರಿನವಳು ಆದ ಕಾರಣ, ಈಟಿವಿ ವಾಹಿನಿ ಬಳಸುತ್ತಿದ್ದ ಭಾಷೆಯಲ್ಲಿ ನನಗೆ ಅಷ್ಟೊಂದು ವ್ಯತ್ಯಾಸ ಕಂಡು ಬಂದಿರಲಿಲ್ಲ.
ವಿಷಯದ ಮೇಲಿನ ಜ್ಞಾನ ಹಾಗೂ ಅಕ್ಷರಗಳ ಮೇಲಿನ ಹಿಡಿತ ಬಿಟ್ಟರೆ ಬೇರೆ ರೀತಿಯಲ್ಲಿ ಬದಲಾವಣೆಯ ಅಗತ್ಯ ಇರಲಿಲ್ಲ. ಇಲ್ಲಿ ಬಳಸುತ್ತಿದ್ದ ಭಾಷಾ ಶೈಲಿಯಿಂದಾಗಿಯೇ, ದಕ್ಷಿಣ ಕನ್ನಡದವರಿಗೆ ಈಟಿವಿ ಕನ್ನಡ ವಾಹಿನಿಯ ಮೇಲೆ ಬಹಳ ಅಭಿಮಾನವಿತ್ತು. ಒಟ್ಟಾಗಿ 3 ವರ್ಷಗಳಲ್ಲಿ ಪತ್ರಿಕೋದ್ಯಮದ ಪ್ರಾಥಮಿಕ ಹಂತವನ್ನು ದಾಟುವ ಹಾಗೆ ಮಾಡಿತು.
ಅದಾಗಿ ಮತ್ತೆ ಪ್ರಯಾಣ ಬೆಳೆಸಿದ್ದು ಬೆಂಗಳೂರಿನ ಟಿವಿ9 ಗೆ. ಅಯ್ಯೋ ಶಿವ, ಎಷ್ಟೊಂದು ಚೇಂಜಸ್ ಕನ್ನಡದಲ್ಲಿ. ಈಟಿವಿಯ ಒಂದು ಪೂರ್ಣ ವಾಕ್ಯ, ಟಿವಿ 9 ನಲ್ಲಿ ಬರೀ ಅರ್ಧಕ್ಕೆ ಸಮ. ಅದು ಆಡು ಭಾಷೆ. “ರೀ ಈಟಿವಿ ತರ ಅಲ್ಲಾರೀ ನಮ್ಮ ಚ್ಯಾನೆಲ್” ಅನ್ನೋರು ಎಲ್ರೂ. ಯಾರಿಗೆ ಬರ್ತಿತ್ತು.
ಸ್ಟಾರ್ಟಿಂಗ್ ಅಂತೂ, ನ್ಯೂಸ್ ವಿಷಯ ಬಿಟ್ರೆ ಮತ್ತೆಲ್ಲಾ ಎಡಿಟ್ ಆಗೋದು. ತಗೋ ಮತ್ತೆ ಬರಿಯೋ ಕೆಲ್ಸ. ಆಯಿತು ಮುಗೀತು ಕಥೆ ಅನ್ನೋಷ್ಟರಲ್ಲಿ, ಸಹಾಯಕ್ಕೆ ಬಂದಿದ್ದು, ಎಫ್ ಎಮ್ ರೇಡಿಯೋ ಚ್ಯಾನೆಲ್ ಗಳು. ಕೊನೆಗೂ, ಹಂಗೂ.. ಹಿಂಗೂ.. ಹೆಂಗೋ ಬದುಕಿತು ಬಡ ಜೀವ.
ಇವುಗಳ ಮಧ್ಯೆ , ನಾನು ಬಯಸುವ ಮತ್ತೊಂದು ಕನ್ನಡ… ಯಕ್ಷಗಾನದಲ್ಲಿ ಕಲಾವಿದರು ಬಳಸುವ ವೈಖರಿ.
ಸಣ್ಣ ಪ್ರಯತ್ನ..
ನಮ್ಮ ಕರ್ನಾಟಕ ರಾಜ್ಯದಲ್ಲಿ ಚುನಾವಣೆಯ ಕಹಳೆ ಮೊಳಗಿದೆ. ನಿಷ್ಠೆಯಿಂದ ಕೆಲಸ ಮಾಡಿದ್ದ ಹಾಗೂ ಮುಂದೆ ಮಾಡಲಿರುವ ಯೋಗ್ಯ ವ್ಯಕ್ತಿಯನ್ನು ರಾಜ್ಯದ ಮಂದಿಗಳು ನಿರ್ಧರಿಸಲಿದ್ದಾರೆ. ಚುನಾವಣೆ ಎಂಬ ಯುದ್ಧದಿಂದಲೇ, ಸಿಂಹಾಸನಕ್ಕೆ ಯೋಗ್ಯರ ಆಯ್ಕೆ ನಡೆಯಲಿದೆ.
ಯುದ್ಧಕ್ಕಾಗಿ, ವಿವಿಧ ಪಕ್ಷಗಳ ಅಪೇಕ್ಷೆಗಳು, ನಿರೀಕ್ಷೆಗಳು ಹೆಚ್ಚಾಗತೊಡಗಿವೆ. ಅಧಿಕಾರದ ಅಮಲಿನಿಂದ , ಸಿಂಹಾಸನವನ್ನು ಏರುವ ಸಲುವಾಗಿ ಅನೇಕ ತಂತ್ರ – ಪ್ರತಿತಂತ್ರಗಳು ಗುಟ್ಟಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈಗಾಗಲೇ ಆಡಳಿತದಲ್ಲಿರುವ ಪಕ್ಷ, ತನ್ನ ಜಾಗವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ನಾನಾ ವಿಧವಾದಂತಹ ಉಪಾಯಂತರಗಳನ್ನು ಬಳಸತೊಡಗಿದೆ. ಒಟ್ಟಿನಲ್ಲಿ ಸಾಮಾನ್ಯ ಜನರ ಹಿತದೃಷ್ಟಿಯಿಂದ ಕಾಲವರಿತು ವ್ಯವಹರಿಸುವ ಮತಿ ಹೊಂದಿದ ಮುಖಂಡ ಮಾತ್ರ, ಸಿಂಹಾಸನದ ಮೌಲ್ಯಕ್ಕೆ ಸಾಟಿಯಾಗಬಲ್ಲ.






0 Comments