
ಕೆಲಸದ ಒತ್ತಡದಲ್ಲಿ ಬೆಂಡಾದ ಮನಸ್ಸನ್ನು , ಹಳೆಯ ಸುಂದರ ಲೋಕಕ್ಕೆ ಒಯ್ಯುವ ಕೆಲ ಸಾಲುಗಳು..
ಅಂದು ಬಡತನವಿತ್ತು.
ಹಸಿವು ಸೋಲಿಸುತ್ತಿತ್ತು.
ಒಮ್ಮೊಮ್ಮೆ ತಂಗಳನ್ನವಿತ್ತು.
ಆಟಿಕೆಗೂ ಬರವಿತ್ತು, ಆಟ ಸಾಗುತಲಿತ್ತು!
ವರ್ಷಕ್ಕೊಂದೇ ಹಬ್ಬವಿತ್ತು.
ದುಂಡಾದ ಇಡ್ಲಿಯಿತ್ತು.
ರುಚಿಸುತ್ತಿದ್ದ ಸಾರಿತ್ತು.
ಅಪ್ಪ ಕೊಡಿಸುತ್ತಿದ್ದ ಹಬ್ಬದ ಬಟ್ಟೆಯಿತ್ತು.
ಸಂಬಂಧ ಬೆಸೆಯುವ ಭೇಟಿಗಳಿತ್ತು.
ಹಬ್ಬದಂದು ಎಂಟತ್ತು ನಾಣ್ಯಗಳಿತ್ತು!
ಆಟವಾಡಲು ಅಜ್ಜನ ಆಲದಮರವಿತ್ತು.
ಹೂಂಗುಟ್ಟುತ್ತಾ ಮಲಗಲು ಅಜ್ಜಿಯ ಕತೆಯಿತ್ತು!
ಒಂದೇ ಹಲಸನು ಹಂಚಿ ತಿನ್ನುವ
ಹಲಸದ ಬಂಧಗಳಿತ್ತು!
ಜಾತ್ರೆಯಲಿ ಕೊಂಡ ಪ್ಲಾಸ್ಟಿಕ್ ಚೆಂಡಿತ್ತು.
ತುಟಿ ಕೆಂಪಾಗಿಸುತಿದ್ದ ಪೆಪ್ಪರ್ಮೆಂಟಿತ್ತು.
ಕೈಗೆ ಕಟ್ಟಲು ತೆಂಗಿನಗರಿಯ ವಾಚಿತ್ತು.
ಕೇರಿ ಸುತ್ತಾಟಕ್ಕೆ ಬಂಡಿಯಾಟವಿತ್ತು
ಮಳೆಗಾಲದಲಿ ಹರಿದ ಛತ್ರಿಯಿತ್ತು.
ನೆನೆದು ಒದ್ದೆಯಾಗುವ ಹುಚ್ಚುತನವಿತ್ತು.
ಜ್ವರ ಬಂದರೆ ರಜೆಯೆಂಬ ಖುಷಿಯಿತ್ತು.
ಬದುಕು ಕಲಿಸುತ್ತಿದ್ದ ಹಳ್ಳಿಯ ಸ್ಕೂಲಿತ್ತು.
ಶಾಲೆಗೆ ನಡೆಯಲು ಗದ್ದೆಯ ದಾರಿಯಿತ್ತು.
ದಾರಿಯ ಮರಗಳಲೂ ಪ್ರೀತಿಯಿತ್ತು.
ತಿನ್ನಲು ಗೇರು, ಮಾವು,ನೇರಳೆಗಳಿತ್ತು.
ಉದಾಸೀನದ ವ್ಯಾಯಾಮವಿತ್ತು.
ರಾಗದಿ ಹೇಳುತ್ತಿದ್ದ ಮಗ್ಗಿಯಿತ್ತು.
ಮಾತಾಡಲು ಕ್ಲಾಸ್ಲೀಡರ್ ಭಯವಿತ್ತು.
ಖುಷಿಕೊಡುತ್ತಿದ್ದ ಲಾಂಗ್-ಬೆಲ್ ಇತ್ತು.
ಚೀಲೆಯಲಿ ಕದ್ದ ಬಣ್ಣದ ಬಳಪವಿತ್ತು.
ಮತ್ತೆ ಮತ್ತೆ ತಪ್ಪುತ್ತಿದ್ದ ಉಕ್ತಲೇಖನವಿತ್ತು.
ಬರೆದು ಮುಗಿಯದ imposition ಇತ್ತು.
ಸ್ವತಂತ್ರದಂದು ಎರಡು ಬಾವುಟವಿತ್ತು.
ಲಾಡುಕೊಡುವ ಸರದಿಯಲಿ ಜಗಳವಿತ್ತು.
ಖುಷಿಕೊಡುವ ಲಗೋರಿಯಾಟವಿತ್ತು.
ಕಣ್ಣೀರು ತರಿಸುವ ಇಂಜೆಕ್ಷನ್ಗಳಿತ್ತು.
ತಪ್ಪಿಗೆ ಮೈದಾನ ಸುತ್ತುವ ಶಿಕ್ಷೆಗಳಿತ್ತು.
ಏನಿಲ್ಲ ಎನ್ನುತ್ತಿದ್ದ ನನಗಾಗ ಎಲ್ಲಾ ಇತ್ತು.
ಎಲ್ಲಕ್ಕೂ ಮಿಗಿಲಾದ ಮುಗ್ಧತೆಯಿತ್ತು.
ಸ್ನೇಹದ ಅರ್ಥ ತಿಳಿದಿರಲಿಲ್ಲ.
ಮಾನವತೆಯ ಹೃದಯವಿತ್ತು.
ಹೃದಯದ ಮಾತುಗಳಿತ್ತು.
ಓ ಬಾಲ್ಯವೇ….
ನೀ ಮತ್ತೆ ಬಂದುಬಿಡು…





ಓ ಬಾಲ್ಯವೇ ನೀ ಮತ್ತೆ ಬಂದು ಬಿಡು ಎಂದು ಹೇಳಿರುವ ಒಂದು ಸಾಲು ನನ್ನ ಬಾಲ್ಯವನ್ನು ಮೆಲುಕು ಹಾಕುವಂತೆ ಮಾಡಿತು. ಚೆನ್ನಾಗಿದೆ . ವಂದನೆಗಳು.