ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತು ಜನರು ಮನೆಯಲ್ಲೇ ಇದ್ದರು..

ಬೆಳಿಗ್ಗೆ ಹಿರಿಯರಾದ ಛಾಯಾಗ್ರಾಹಕ ಕುಮಾರ್ ಗೌಡ ಅವರು ವಾಟ್ಸಪ್ ಗೆ ಈ ಕವಿತೆಯನ್ನು ಕಳಿಸಿದರು. ಯಾಕೋ ಮನಸೆಳೆಯಿತು.

ಇಂಗ್ಲೀಷ್ ನಲ್ಲಿದ್ದ ಈ ಕವಿತೆಯನ್ನು ಓದುತ್ತಿದ್ದಂತೆ ಇದನ್ನು ಬರೆದವರಾರು ಎಂದು ಹುಡುಕಿದೆ. ಇದರ ಕವಿಯತ್ರಿ ಕ್ಯಾಥಲೀನ್ ಓ ಮೀಯರಾ (1839-1888) ಎಂಬ ಕ್ಯಾಥೊಲಿಕ್ ಐರಿಶ್- ಫ್ರೆಂಚ್ ಬರಹಗಾರ್ತಿ. ” ದಿ ಟ್ಯಾಬ್ಲೆಟ್ ” ಎಂಬ ವಾರಪತ್ರಿಕೆಯ ಪ್ಯಾರಿಸ್ ನ ವರದಿಗಾರ್ತಿ. ಈಕೆಯ ಕಾದಂಬರಿಗಳು, ಬರಹಗಳು, ಜೀವನಚರಿತ್ರೆ ಪ್ರಸಿದ್ಧಗೊಂಡಿವೆ.

ಈಕೆಯ Iza’s Story ಕಾದಂಬರಿಯಲ್ಲಿ ಈ ಕವಿತೆ ಬರುತ್ತದೆ. ಕಾದಂಬರಿಯು ಪೊಲೀಶ್ ಹೋರಾಟಗಾರರು ತಮ್ಮ ನೆಲದಲ್ಲಿ ರಶಿಯನ್, ಆಸ್ಟ್ರಿಯನ್, ಜರ್ಮನರ ಅಸ್ತಿತ್ವದ ವಿರುದ್ಧ ಹೋರಾಡಿದ ಕತೆಯಿದೆ. ಈಗಾಗಲೇ ಈ ಕವಿತೆ Instagram, Whatsapp, Facebookಗಳಲ್ಲಿ ಸಾಕಷ್ಟು ಹರಿದಾಡಿದೆ. ಅದನ್ನೇ ಇಲ್ಲಿ ನನಗೆ ತಿಳಿದಷ್ಟು ಅನುವಾದಿಸಿ ಕೊಟ್ಟಿರುವೆ.

-ಸಿದ್ಧರಾಮ ಕೂಡ್ಲಿಗಿ

ಮತ್ತು ಜನರು ಮನೆಯಲ್ಲೇ ಇದ್ದರು……
(And people stayed home)

ಮತ್ತು ಜನರೆಲ್ಲ ಮನೆಯಲ್ಲೇ ಇದ್ದರು
ಮತ್ತು ಪುಸ್ತಕಗಳನ್ನು ಓದಿದರು, ಆಲಿಸಿದರು
ಮತ್ತು ವಿಶ್ರಾಂತಿ ಪಡೆದರು, ವ್ಯಾಯಾಮ ಮಾಡಿದರು
ಮತ್ತು ಚಿತ್ರ ಬಿಡಿಸಿದರು, ಆಟ ಆಡಿದರು
ಬದುಕಲು ಹೊಸ ದಾರಿಗಳನ್ನು ಕಲಿತರು
ಬದುಕಿನ ಬಗ್ಗೆ ಸುದೀರ್ಘವಾಗಿ ಕೇಳಿದರು
ಕೆಲವರು ಧ್ಯಾನ ಮಾಡಿದರು
ಕೆಲವರು ನರ್ತಿಸಿದರು
ಕೆಲವರು ತಮ್ಮ ನೆರಳನ್ನೇ ಭೇಟಿ ಮಾಡಿದರು
ಸರಿಯಲ್ಲದ ದಾರಿಯಲ್ಲಿದ್ದ, ಅಪಾಯಕಾರಿಯಾಗಿದ್ದ
ಅರ್ಥಹೀನರಾಗಿದ್ದ, ಹೃದಯಶೂನ್ಯರಾಗಿದ್ದ ಜನರ ಅನುಪಸ್ಥಿತಿಯಲ್ಲಿ

ಜನರು ವಿಭಿನ್ನವಾಗಿ ಯೋಚಿಸಲು ತೊಡಗಿದರು
ಯಾವಾಗ ಅಪಾಯ ಮುಕ್ತಾಯಗೊಂಡಿತೊ
ಭುವಿಯೂ ಸಹ ಗುಣಮುಖವಾಗತೊಡಗಿತು
ಜನರೂ ಸಹ ಒಬ್ಬರನ್ನೊಬ್ಬರು ಕಾಣತೊಡಗಿದರು
ಸಾವಿಗೀಡಾದ ಜನರಿಗಾಗಿ ದು:ಖಿಸತೊಡಗಿದರು
ಅವರು ಹೊಸ ಆಯ್ಕೆಗಳನ್ನು ಕಂಡುಕೊಂಡರು
ಹೊಸ ನೋಟದ ಕನಸುಗಳನ್ನು ಕಾಣತೊಡಗಿದರು
ಬದುಕಿನ ಹೊಸ ಮಾರ್ಗಗಳನ್ನು ಹುಟ್ಟುಹಾಕಿದರು
ಮತ್ತು ಭೂಮಿಯನ್ನು ಸಂಪೂರ್ಣ ಗುಣಪಡಿಸಿದರು
ಇಷ್ಟೇ-
ತಾವು ಹೇಗೆ ಗುಣಮುಖರಾದರೋ ಆ ರೀತಿಯಲ್ಲಿ.

-ಕ್ಯಾಥಲೀನ್ ಓ ಮೀಯರಾ
ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ

‍ಲೇಖಕರು avadhi

24 March, 2020

1 Comment

  1. Sudha Hegde

    ಎಷ್ಟು ಸಕಾಲಿಕ ಮತ್ತು ಚಂದವಾಗಿದೆ
    ನಾವೂ ಮನೆಯಲ್ಲಿರೋಣ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading