ಸುಷ್ಮಾ ಗೌಡ
ಮಗುವೊಂದು ಹರಾಜಿಗಿದೆ
ಕೊಳ್ಳುವವರೆಲ್ಲ ಸಂತೆಬೀದಿಗೆ ಬಂದುಬಿಡಿ
ನಾನೆ ಹಡೆದವ ಇವ ಆದರೂ
ರಸ್ತೆಯಲ್ಲಿ ಸಿಕ್ಕಿದ ಅನಾಥನೆಂದು
ಬಿಕರಿಗಿಡುತ್ತೇನೆ ನಿಮ್ಮ ಮುಂದೆ
ಹೆಚ್ಚು ತಕರಾರು ಮಾಡಬೇಡಿ
ಲಾಭ ಮಾಡುವ ಲೋಭವಿಲ್ಲ
ಆಸರೆ ಅಕ್ಕರೆಯಷ್ಟೇ ಬೇಕಿರುವುದು
ನನ್ನ ಕಂದನ ಹೊಟ್ಟೆ ತುಂಬಿಸುವಿರೆಂದು
ನಂಬಿಕೆ ಕೊಡಿ, ಪಾವಾಲು, ತುತ್ತನ್ನ ಅಷ್ಟೇ.

ಮಮತೆ ಧಾರೆಯೆರೆಯಲು ನನಗುಳಿದಿರುವ
ಕಾಲ ಹೆಚ್ಚೆಂದರೆ ಹತ್ತು ದಿನವಷ್ಟೆ ಎರಡ್ಹೊತ್ತಿನ
ಕೂಳಿಗೆ ದುಡಿಯಲಾಗದವಳು ಔಷಧಿ ಇನ್ನೆಲ್ಲಿ ತರಲಿ
ನನ್ನ ನೆನೆದು ಕಂದ ಅಳುವಾಗ ಸಂತೈಸುವಿರೆಂಬ ಭರವಸೆ ಕೊಟ್ಟುಬಿಡಿ ಅಷ್ಟೇ
ನಾ ಪಟ್ಟ ಪಾಡುಗಳು ಎಂದೂ ಬಾಧಿಸದಿರಲಿ
ರಟ್ಟೆ ಬಲಿಯುವ ಮುನ್ನವೇ ಜೀತಕ್ಕೇ ದೂಡಿ ಬಿಡಿ
ಯಾರಿಲ್ಲದೆಯೂ ಅವ ಅನ್ನ ತಿನ್ನುವಂತೆ ಬೆಳೆಯಲಿ,
ಅಕ್ಷರ ಬದುಕು ಕಲಿಸುವುದು
ಕರುಳ ಬಳ್ಳಿ ಕತ್ತರಿಸಿ ನಿಮ್ಮ ಕೈಗಿಡುತ್ತಿರುವೆ
ದಯಮಾಡಿ ನುಡಿದಂತೆಯೇ ನಡೆದುಬಿಡಿ






0 Comments