ಗೀರ್ವಾಣಿ
ಹೀಗೆ ಒಂದಿಷ್ಟು ಹೊತ್ತು ಇದ್ದು ಬಿಡಬಹುದಿತ್ತು
ನಾನು ನನ್ನ ತುಮುಲಗಳ ಜೊತೆ !
ಕಣ್ಣೀರು ಕೆನ್ನೆ ಮೇಲೂ ಆರುತ್ತಿತ್ತು,
ಮಾತು ಗಂಟಲಲ್ಲೂ ಉಳಿಯುತ್ತಿತ್ತು.
ಭಾವಗಳ ದಿಬ್ಬಣ ಹೊರಡಿಸಿದೆ,
ನೋವುಗಳ ಹೊಸ ಖಾತೆ ತೆರೆದೆ,
ತಕರಾರುಗಳ ಪಟ್ಟಿ ಉದ್ದ ಮಾಡಿದೆ
ಕೊಟ್ಟಿದ್ದಕ್ಕೂ ರಶೀದಿ ಮರೆತೆ
ತಿಕ್ಕಿ ತೊಳೆದು ಉಜ್ಜಿದ್ದು ಬರೀ ಪಾತ್ರೆಗಳನ್ನಲ್ಲ !
ತುಕ್ಕು ಹಿಡಿದ ಸಂಬಂಧಗಳನ್ನು,
ರಚ್ಚೆ ಹಿಡಿದ ಮೌನಗಳನ್ನು.
ಒಂದಿಷ್ಟು ಹಿಡಿ ಮಣ್ಣು ಕೊಟ್ಟಿದ್ದರೆ
ಹೂತು ಬಿಡುತ್ತಿದ್ದೆ
ತಿರಸ್ಕಾರಗಳನ್ನು !
ಈಗ್ಯಾಕೋ ಎಲ್ಲದಕ್ಕೂ ಲೆಕ್ಕ ಕೇಳಿದ ಭಾವ.
ಏನು ಲೆಕ್ಕ ಕೊಡಬಲ್ಲೆ ನಾನು?
ಕೇಜಿಗಟ್ಟಲೆ ದೂರು
ಮಣ ಭಾರದ ಅಪಮಾನ
ಕಿಲೋ ಮೀಟರ್ ಉದ್ದದ ನಿಟ್ಟುಸಿರು ಹಾಗೂ
…….
ಬೇಕಿತ್ತಾ ಗಾಯ ಕೆರೆಯುವ ಕೆಲಸ ???





0 Comments