ಅಮೀನ್ ಮ ಅತ್ತಾರ
ಚಂದ್ರ : ನನಗೆ ನೀನು
ನಿನಗೆ ನಾನು
ಇಬ್ಬರೂ ಭುವಿಗೆ ಬೆಳಕಲ್ಲವೇ?
ಬುದ್ದ: ಇಬ್ಬರಲ್ಲ ಒಬ್ಬರಲ್ಲ
ಎಲ್ಲರಲ್ಲೂ ಬೆಳಕಿದೆ
ಸತ್ಯದ ದಾರಿಯಲ್ಲಿ
ಸಂಭ್ರಮದ ಸೊಗಸಿದೆ
ಚಂದ್ರ :
ರಾತ್ರಿ ಬಿಚ್ಚಿಡುವ ಬಚ್ಚಿಡುವ
ಮನಸ್ಸು ಮನುಷ್ಯ
ಬದಲಾಗುವ ಪರಿಯ ಶತಮಾನಗಳಿಂದ
ನೋಡುತ್ತಲೇ ಬಂದಿರುವ ನಾನು!

ಬುದ್ಧ : ವ್ಯಾಮೋಹವೆಂಬ ನಿತ್ಯ ಮಿಥ್ಯವಿದೆ
ಜಗದ ಜಂಜಡದಾಚೆ ಸತ್ಯವಿದೆ
‘ನಾ’ ಹೋದರೆ ಬದಲಾವಣೆ ಸತ್ವವಿದೆ
ಎಲ್ಲ ಕಳಚಿ ಖಾಲಿಯಾಗಿ
ಹೊಸ ‘ಅರಿವೆ’ ತೊಟ್ಟ ಪಯಣಿಗನಾಗಬೇಕಿದೆ
ಚಂದ್ರ : ನಿನ್ನೊಳಗೆ ಬೆಳಕಿತ್ತು ಚೆಲ್ಲಿದೆ
ಕಸುವಿನ ತುಸು ಬೆಳಕಿನಲಿ
ಹಲವರ ಕತ್ತಲೆಯ ಪೊರೆ ಕಳಚಿದೆ
ಆಸೆಗೆ ಹೊಸ ಭಾಷೆ ಬರೆದೆ
ಸಾವಿಲ್ಲದ ಮನೆಯ ಸಾಸಿವೆ ತೋರಿದೆ
ಬುದ್ಧ : ನಾನೊಬ್ಬನೇ ಬುದ್ಧನಲ್ಲ
ಬೆಳಕಲ್ಲ
ನೀನೊಬ್ಬನೆ ಬೆಳಕಿನ ಚಂದ್ರನಲ್ಲ
ಜಗದ ಅಣು ಅಣುವಿನಲೂ ಬೆಳಕಿದೆ
ಎಲ್ಲರೊಳಗೂ
ಬೆಳಕಿನ ಬುದ್ದ ಚಂದ್ರನಿದ್ದಾನೆ

ಕಿಡಿ ಬೆಳಗುವುದಿಲ್ಲ
ದೀಪವಾಗಬೇಕು
ಹಗೆಯ ಹೊಗೆಯು ಕೆಡವಲು
ಚಂದ್ರ : ಹಾಲಿನಂತ ಬೆಳದಿಂಗಳೀಗ ಜಗದಾತ್ಮದ ಹೃದಯಂಗಳದಲ್ಲಿ ಆಹ್ವಾನಿಸಲಿ
ನನಗೆ ನಾನು ನಿನಗೆ ನೀನು
ಮೌನದಲ್ಲೇ ಸಂಭಾಷಣೆ
ಬುದ್ದನೆಂದರೆ ತಿಳಿವಿನೆಚ್ಚರದ ಬದಲಾವಣೆ






ವಿಶೇಷವಾಗಿದೆ.