ಕು.ಸ. ಮಧುಸೂಧನ ನಾಯರ್
ಕತ್ತಲಲ್ಲಿರುವೆ ನಾನು
ಎಷ್ಟು ಕತ್ತಲಲ್ಲಿ?
ಸೂರ್ಯರಶ್ಮಿಗಳೂ ಸೋಕಲಾರದಷ್ಟು
ದೂರದಲ್ಲಿರುವೆ ನಾನು
ಎಷ್ಟು ದೂರ?
ಹಕ್ಕಿಗಳೂ ಹಾರಿ ಸನಿಹ ಬರಲಾರದಷ್ಟು.
ನೀನು ಇದ್ದದ್ದು ನಿಜ ಅವತ್ತಿಗೆ
ಪರಕೀಯವೆನಿಸಿ ನನಗೆ ನಾನೇ ಆ ಕ್ಷಣಕೆ
ಹುಚ್ಚೆದ್ದು ಹರಿಯುವ ನದಿ ದಂಡೆಗಳ
ಆತು ನಿಂತ ಕಪ್ಪು ಬಂಡೆಗಳ
ಮೇಲೆ ಯಾವುದೋ ಅಪರಿಚಿತ ಹೆಸರು ಉಚ್ಚರಿಸಲಾಗದಂತಹುದು
ಏನೆಲ್ಲ ಆಗಿದ್ದೆ ನೀನು
ಆಕಾಶ,ಸೂರ್ಯ ಚಂದ್ರ ತಾರೆ
ಭೂಮಿ ಹಸಿರು ಒಡಲ ಉಸಿರು
ಯಾವ ಸತ್ಯವೂ ಅಂತಿಮವೇನಲ್ಲ
ಯಾವ ಸಂಬಂದವೂ ಶಾಶ್ವತವೇನಲ್ಲ
ಪಡೆಯಲಾದೀತೆ ಕಳೆದ ಕಾಲವ
ಸೋಸಿ ತೆಗೆಯಲಾದೀತೆ ಮರಳುರಾಶಿಯೊಳಗೆ ಚೆಲ್ಲಿಹೋದ ಜೀವಜಲವ
ಕಿತ್ತೆಸೆದಿರುವೆನೀಗ ಕಚ್ಚಿಕೊಂಡ ಬೇರುಗಳ
ಆಹಾ! ಎಂತಾ ಹಗುರ ಆನಂದ
ಬುಡವಿರದೆ ಗಾಳಿಯೊಳು ತೇಲುವ ಸುಖ
ತರಗೆಲೆಯಂತೆ
ಬರೆದು ಬಿಸಾಕಿದ ಕವಿತೆಯ ಕಾಗದದ ಚೂರಂತೆ
ತೇಲುವೆ,ತೇಲುವೆ
ತೇಲುತ್ತಲೇ ಇರುವೆ!






yaava satyavoo……Aaha entha ananda..
bahala ishtavada salugalu..