ಅಭಿಷೇಕ್ ವೈ ಎಸ್
ಅಜ್ಜ
ಇದ್ದಾಗ
ಊರ ಮಧ್ಯದಲ್ಲಿದ್ದ
ನಮ್ಮನೆಲ್ಲ ಸೇರಿಸದ
ಗುಡಿಯ
ನೆತ್ತಿಯನ್ನು
ವರ್ಷಕೊಮ್ಮೆಯಾದರೂ
ಹಸಿರು ಮಾಡುತ್ತಿದ್ದ
ಕಾಲುಗಳು
ಸೋತು ಒಣಗಿದ
ಕಡ್ಡಿಯಂತಾದ ಮೇಲೂ

ಆಮೆನಡಿಗೆಯಲ್ಲೇ ಸಾಗಿ
ಗುಡಿಯಾಚೆ ಕೂತು
ಯಾರನ್ನೋ ಬಯ್ಯುತ್ತಾ
ತೆಂಗಿನ
ಗರಿಗಳನ್ನು ಹೆಣೆದು
ಚಪ್ಪರ ಹಾಕುವವರಿಗೊಪ್ಪಿಸಿ
ದೂರದಲ್ಲೇ ನಿಂತು
ಕೈಮುಗಿಯುತ್ತಿದ್ದ
ಮುಗ್ಧ ಅಜ್ಜನ
ನೋಡುತ್ತಿದ್ದ ನೆನಪು
ಇನ್ನೂ ಅಳಿಸಿಹೋಗಿಲ್ಲ
ಕೊನೆಗೊಂದು ದಿನ
ಅಜ್ಜ
ಸತ್ತ..!

ಅವನ
ಕಾಯಕವನ್ನು
ಚಿಕ್ಕಪ್ಪ ಮುಂದುವರಿಸಿದ,
ಎಷ್ಟು ನಿಷ್ಠನೆಂದರೆ
ಗರಿಗಳನ್ನು ಹೆಣೆದ,
ವಪ್ಪತ್ತು ಬಿಟ್ಟು
ನೆಲದ ಮೇಲೆ
ಉಂಡಿದ್ದ,
ಓದು-ಬರೆಯಲು ಬಾರದ
ಐನೋರು ಬರೆದುಕೊಟ್ಟ
ತಾಯತ ಕಟ್ಟಿಸಿಕೊಂಡಿದ್ದ,
ಬಾಯಿಬೀಗ
ಜಡಿಸಿಕೊಂಡಿದ್ದ
ಇಷ್ಟಾದರೂ
ಮೂಗ ಚಿಕ್ಕಪ್ಪನ
ಬಾಯಿ
ಇನ್ನೂ
ಬಂದಿಲ್ಲ..!!






ಬಾಯಿಗೆ ಬೀಗ ಹಾಕಿಸಿಕೊಂಡವರ ನೋವಿನ ಹಾಡು