ವಿದ್ವಾನ್ ಮಂಜುನಾಥ ಎನ್ ಪುತ್ತೂರು
ಅಲ್ಲೊಂದು ಶವ ಸಂಸ್ಕಾರದ ಮೆರವಣಿಗೆ
ಶವಕ್ಕೆ ವಿಧ – ವಿಧದ ಹೂವುಗಳು ಅಪ್ಪಿಕೊಂಡು ಕೊನೆಯ ವಿದಾಯ ಸಾರಿದ್ದವು
ನಗಾರಿಯ ಇಂಪು, ಡೋಲಿನ ಆರ್ಭಟ
ಬದುಕಿದ್ದ ನರರು ಮೌನದಲ್ಲೇ ಮಾತಾಗಿ ಹೋಗಿದ್ದರು
ಶವದ ಸಂಸ್ಕಾರದ ಬಗ್ಗೆಯಲ್ಲ, ಶವದ ಆಸ್ತಿಯ ಮೌಲ್ಯ,ಕಾಂಚಾಣದ ಕುರಿತು
ಶವವಾಗಿಹ ನರನ ನೆನಪು ನೆನಪಾಗಿಯೇ ಉಳಿಯಿತು
ಇನ್ನೆಲ್ಲಿಯ ಗೋರಿ, ಕ್ರಿಯಾ – ವಿಧಿಗಳು, ಎಲ್ಲವೂ ತೋರಿಕೆಯ ಬಂಧಗಳು
ಶವಕ್ಕೆ ಸದ್ಗತಿಯ ಕರುಣಿಸುವುದೂ ನೆಪವಷ್ಟೇ, ಬದುಕಿದ ಜೀವಗಳ ಮನ
ಕದ್ದಿರುವುದು ಮಾತ್ರ ಶವ ಮಾಡಿಟ್ಟ ಐಶ್ವರ್ಯವನ್ನಷ್ಟೇ

ಶವದ ಕೈಗೆಟುಕುವುದೇ? ಆಸ್ತಿಪಾಸ್ತಿ,
ಇನ್ನೆಲ್ಲಿಯ ವೈಭೋಗ, ವಿಲಾಸ
ಶವಕ್ಕೆ ಮಣ್ಣಾಗುವುದರಲ್ಲೇ ಆಸಕ್ತಿ
ಮಣ್ಣಿನೊಳಸೇರಿ ಪುನಃ ಬೀಜವಾಗಿ ಮೊಳಕೆಯೊಡೆಯುವ ಕನಸು,
ಚಂದಿರನು ಸೂರ್ಯೋದಯವ ಬಯಸಿದಂತೆ
ಶವಪೆಟ್ಟಿಗೆಯ ಮೇಲೆ ಜನರ ಹೊರಳಾಟ,ನರಳಾಟ
ಆಕ್ರಂದನವು ಆಗಸವ ತಲುಪುವಂತೆ
ಇವೆಲ್ಲಾ ಸತ್ಯವೇ? ಶಾಶ್ವತವೇ? ಮನಸ್ಸಿನ ತುಂಬೆಲ್ಲಾ ಕ್ರೂರ ರಕ್ಕಸರ
ಸಲುಹಿ,ಎದುರಿನಿಂದ ದೇವ ಮಾನವರಂತೆ ನಟಿಸುವ ತೋರಿಕೆಯಲ್ಲವೇ?!






ನಿಜಕ್ಕೆ ಹಿಡಿದ ಕನ್ನಡಿ