ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬತ್ತಿದ ಬಾವಿಯಲ್ಲಿ ನೀರು ಚಿಮ್ಮಿದಾಗ..

ಎಲ್.ಸಿ.ನಾಗರಾಜ್

ನೀರು ಮೇಲು ಮೇಲಕ್ಕೆ ಏರಿದಂತೆ ನೀರಿಗೆ ಬಾಗಿದ ಹೂ

ಕಣ್ಣು ಮುಚ್ಚುವ ಮುಂಚಿನ ದಿನಗಳಲ್ಲಿ ಅಮ್ಮ ಕೇಳುತ್ತಿದ್ದಳು ‘ಬಾವಿಗೆ ನೀರು ತುಂಬಿತಾ!’ ಅಂತಾ

ತಮ್ಮನ ಹೆಂಡತಿ ವಿನೋದ, ತಂಗಿ ಸುಮಾ ಹೇಳಿದ್ದರು ‘ಅಮ್ಮ ಏನು ಕೇಳಿದರೂ ಹೂ ಅಂತಾನೇ ಹೇಳು’ ಅಂತಾ

ಭೂಮಿಯ ಮೇಲ್ಪದರದ, ಅಂದರೆ ಮಣ್ಣಿನ ಗುರುತ್ವಾಕರ್ಷಣ ರಂಧ್ರ ( Gravitational pores ) ಮೂಲಕ ಹಿಟ್ಟು ಕಲ್ಲಿನ ( weathered rocks ) ತನಕ ಜಿನುಗುವ ನೀರು ಕಗ್ಗಲ್ಲು ಸಿಕ್ಕ ನಂತರ ಅದರೊಳಗಿನ ಬಿರುಕುಗಳ ತಡಕುತ್ತ ಇಳಿಯುತ್ತದೆ; ಅಂದರೆ ಈ ತತ್ವದ ಪ್ರಕಾರ ತೆರೆದ ಬಾವಿಗಳ ಜಲಗಣ್ಣುಗಳ ಮತ್ತೆ ತೆರೆಸಬಹುದು ಅಂತಾ ಒಂದು ಪೂರ್ವಸಿದ್ದಾಂತ ( Hypotheses ) ಇಟ್ಟುಕೊಂಡು ಅಮ್ಮನ ಆಶಯದ ಪ್ರಕಾರ ಬಾವಿಗೆ ನೀರು ತರಬಹುದು ಅಂತಾ ಆಯಕಟ್ಟಿನ ತಾಣಗಳಲ್ಲಿ 10 ಮಳೆನೀರಿನ ಹೊಂಡಗಳನ್ನ ನಿರ್ಮಿಸಿದೆವು .

2016ರ ಒಂದು ಬೇಸಿಗೆಯಲ್ಲಿ ನಡೆದು ಬರುತ್ತಿರುವಾಗ 1996 ರಲ್ಲಿ ಕೊರೆದಿದ್ದ 180 ಅಡಿ ಆಳದ, ಒಣಗಿ ಹೋಗಿದ್ದ ಕೊಳವೆ ಬಾವಿಯಲ್ಲಿ ನೀರು ಧುಮುಕುತ್ತಿರುವ ಸದ್ದು ಕೇಳಿ ಬಂದಾಗ ಹತ್ತಿರ ಹೋಗಿ ಕಿವಿಗೊಟ್ಟು ಕೇಳಿಸಿಕೊಂಡೆ .

ಕ್ಯಾಮರಾ ಬಿಟ್ಟು ನೋಡಿದೆ, 71 ಅಡಿ ಆಳದಲ್ಲಿ ನೀರು ಧುಮ್ಮಿಕ್ಕುತ್ತಿತ್ತು ; 18,000 ರೂ. ಹಣ ಖರ್ಚು ಮಾಡಿ 2 ಅಶ್ವಶಕ್ತಿಯ ಸಿಂಗಲ್ ಫೇಸ್ ಪಂಪ್ ಅಳವಡಿಸಿದಾಗ ಸಿಹಿಯಾದ ನೀರು ಹೊರಬಂತು ; ನನ್ನ ಪೂರ್ವಸಿದ್ದಾಂತ ರೆಕ್ಕೆ ಬಿಚ್ಚಿ ಹಾರತೊಡಗಿತು. ಆದರೆ ನಾನು ಲೆಕ್ಕ ಮಾಡಿದ್ದು 30 ಅಡಿಗಿಂತಲೂ ಕಡಿಮೆ ಆಳದ ತೆರೆದ ಬಾವಿಗಳಲ್ಲಿ ಜಲದ ಕಣ್ಣು ಬಿಡಿಸುವ ಕುರಿತು..

ಅಪ್ಪನ ದಿನಚರಿ ತೆಗೆದು ನೋಡಿದಾಗ ಈ ತೆರೆದ ಬಾವಿಯ ಒಳಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊರೆದಿದ್ದ 3 ಕೊಳವೆ ಬಾವಿಗಳ ವಿವರ ಸಿಕ್ಕಿತು; ಅವುಗಳ ಪೈಕಿ 80 ಅಡಿ ಮತ್ತು 120 ಅಡಿ ಆಳದ ಕೊಳವೆ ಬಾವಿಗಳಲ್ಲಿ ಜಲದ ಸೆಲೆಗಳಿದಾವೆ. ಈಗ ತೆರೆದ ಬಾವಿಯೊಳಗಿನ ಕೊಳವೆ ಬಾವಿಗಳು ಮಣ್ಣಿನಿಂದ ಮುಚ್ಚಿಹೋಗಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೊರೆಯುವ ಮತ್ತು ಮಣ್ಣನ್ನ ಹೊರಹೊಮ್ಮಿಸುವ ಯಂತ್ರಗಳಿಗೆ ಯಾವ ಗತಿ ಬಂದಿದೆಯೋ ಗೊತ್ತಾಗುತ್ತಿಲ್ಲ .

ಅಥವಾ ಖಾಸಗಿ ಒಡೆತನದ ಯಂತ್ರ ತಂದು ಈ ತೆರೆದ ಬಾವಿಯೊಳಗಿನ ಎರಡು ಕೊಳವೆ ಬಾವಿಗಳಲ್ಲಿ ತುಂಬಿರುವ ಮಣ್ಣನ್ನ ಹೊರಚಿಮ್ಮಿಸಿದರೆ ಬಾವಿಗೆ ತಳದ ಜಲಕಣ್ಣುಗಳು ತೆರೆದುಕೊಳ್ಳಬಹುದು ಅಂತಾ ಮತ್ತೊಂದು ಪೂರ್ವಸಿದ್ಧಾಂತ ರೆಕ್ಕೆ ಬಿಚ್ಚಿ ಹಾರಾಡುತ್ತಿದೆ.

ನಂದಿ ಬೆಟ್ಟ , ಹುಲುಕುಡಿ ಬೆಟ್ಟ , ಶಿವಗಂಗೆ , ಸಾವನದುರ್ಗ, ನಾರಾಯಣ ಗಿರಿ, ರೇವಣಸಿದ್ದೇಶ್ವರ ಬೆಟ್ಟ, ಶಿವಾಲದಪ್ಪನ ಬೆಟ್ಟ ಈ ಇಷ್ಟೂ ಬೆಟ್ಟಸಾಲುಗಳು ಮುಕ್ಕಾಗದಂತೆ ಎಚ್ಚರ ವಹಿಸಿ ; ಈ ಬೆಟ್ಟಗಳ ಸುತ್ತಲೂ ಕನಿಷ್ಟ 2 ಕಿಮೀ ವ್ಯಾಸದಲ್ಲಿ ಅರಣ್ಯ ಕೃಷಿ ( Agro forestry ) ಮಾಡುವಂತೆ ನಮ್ಮ ರೈತರ ಮನ ಒಲಿಸಿದರೆ ಮೋಡಗಳು ಘನೀಭವಿಸಿ, ಮಳೆ ಲಯಬದ್ಧವಾಗಿ ಸುರಿಯುವುದು , ಅರ್ಕಾವತಿ ತೊರೆ ಮತ್ತೆ ಅಬ್ಬರಿಸಿ ಓಲಾಡುತ್ತ. ತೆರೆದ ಬಾವಿಗಳ ಜಲದ ಕಣ್ಣು ತೆರೆಸಿ ಸಂಗಮದ ಹತ್ತಿರ ಕಾವೇರಿಯನ್ನ ಕೂಡಿಕೊಳ್ಳುವಳು ಎಂಬ ಇನ್ನೊಂದು ಪೂರ್ವಸಿದ್ದಾಂತ ಕೂಡ ಆಗಾಗ ರೆಕ್ಕೆ ಬಿಚ್ಚಿ ಲಕಲಕಿಸುತ್ತಿದೆ

ಆದರೆ …..‌ ?

‍ಲೇಖಕರು avadhi

20 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading