
ಎಚ್ ಕಾವ್ಯಶ್ರೀ
ಬಂದುಬಿಡು ಮಳೆಯೇ
ಸಾಕಿನ್ನು ಸತಾಯಿಸಿದ್ದು
ಎಷ್ಟೆಲ್ಲಾ ಜೀವಗಳು ಕಾತರಿಸಿ ಕನವರಿಸಿವೆ
ಬಂದುಬಿಡು ಮಳೆಯೇ
ಸಾಕಿನ್ನು ಕಾಯಿಸಿದ್ದು
ಬರಡು ಎದೆಗಳಿಗೆ
ನಿನ್ನೊಲವ ಹನಿಸಿ
ಮರೆತ ಮಾತುಗಳ ಮತ್ತೊಮ್ಮೆ
ಚಿಗುರಿಸಿಬಿಡು

ಪ್ರತಿ ಮಳೆಹನಿಗೂ ಎಂತಹ ರಕ್ಕಸ ಶಕ್ತಿ
ನೂರಾರು ನೆನಪ ಹೆಕ್ಕಿ
ಹೆಸರಿಸಲಾಗದ ಭಾವಗಳುಕ್ಕಿಸಿ
ನನ್ನೊಳು ನನ್ನನೇ ಕಳೆದು ಕೂಡಿಸಿ
ಮನರಂಗದೊಳು ರುದ್ರತಾಂಡವ
ಈ ಮಳೆ ಬೀಜಾಸುರರ
ಶಮನಕ್ಕೂ ಉಪಶಮನಕ್ಕೂ
ನಿನ್ನದೇ ಮಂತ್ರ





ಧನ್ಯವಾದಗಳು ಅವಧಿ ಬಳಗಕ್ಕೆ