ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಿಯ ಶಿವಣ್ಣ,

                    ಡಬ್ಬಿಂಗ್ ಬರದಂತೆ ತಡೆಯಲು ಪ್ರಾಣತ್ಯಾಗದ ಮಾತುಗಳನ್ನು ಆಡಿರುವ ಶಿವರಾಜ ಕುಮಾರ್ ಅವರಿಗೆ ನನ್ನದೊಂದು ಪ್ರೀತಿಯ ಕಿರುಪತ್ರ. ನೀವಂದ್ರೆ ನಮಗೆ ಇಷ್ಟ. ನಿಮ್ಮ ಅಪ್ಪಾಜಿ ಅಂದ್ರೆ ಮತ್ತೂ ಇಷ್ಟ. ಅವರು ಇಡೀ ಕನ್ನಡ ಜನಸಮೂಹದಿಂದ ಅಣ್ಣಾವ್ರು ಅನಿಸಿಕೊಂಡವರು. ಅವರನ್ನು ಯಾರೂ ತಮ್ಮ ಇಷ್ಟಾನಿಷ್ಟಗಳಿಗೆ ಕಟ್ಟಿಹಾಕಿಕೊಳ್ಳಬಾರದು. “ಇದೇ ರೀತಿ ಇನ್ನೂ ಮುಂದುವರಿದರೆ ಚೆನ್ನಾಗಿರುವುದಿಲ್ಲ. ಅಪ್ಪಾಜಿ ಆಶಯಕ್ಕೆ ವಿರುದ್ಧವಾಗಿ ಹೋದರೆ ಸುಮ್ಮನಿರಲ್ಲ. ಎಲ್ಲಾ ಭಾಷೆ, ಎಲ್ಲಾ ನಟರ ಚಿತ್ರಗಳ ಮೇಲೆ ನಮಗೆ ಅಭಿಮಾನವಿದೆ. ಆದರೆ ಇತ್ತೀಚಿಗೆ ಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ತೀವ್ರ ಅಸಮಾಧಾನವಾಗಿದೆ. ಅಪ್ಪಾಜಿಯ ಮೇಲೆ ಆಣೆ ಮಾಡುತ್ತೇನೆ, ನಾನು ಜೀವ ಹೋಗುವವರೆಗೂ ಹೋರಾಟಕ್ಕೆ ಸಿದ್ಧ. ನಾನು ಹೋದರೆ ತಮ್ಮ, ತಮ್ಮನ ಮಕ್ಕಳು ಇದ್ದಾರೆ. ನಾನು ಯಾರಿಗೂ ಕೇರ್ ಮಾಡೊಲ್ಲ” ಅಂತ ನೀವು ಹೇಳಿದ್ದೀರಿ. ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಂಡು ಸತ್ತಾಗ, ನೆರೆ ಬಂದು ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದಾಗ, ಬೆಂಗಳೂರು ಜನರು ಒಳಚರಂಡಿ ನೀರನ್ನೇ ಶುದ್ಧಗೊಳಿಸಿ ಕುಡಿಯಬೇಕು ಎಂದು ಕಾವೇರಿ ನ್ಯಾಯಮಂಡಳಿ ಆದೇಶ ಹೊರಡಿಸಿದಾಗ, ಕನ್ನಡದ ಮಕ್ಕಳ ಉದ್ಯೋಗವನ್ನು ಇನ್ಯಾವುದೋ ರಾಜ್ಯಗಳ ಜನರು ಅಕ್ರಮವಾಗಿ ಕಿತ್ತುಕೊಂಡಾಗ ಹೀಗೆ ಪ್ರಾಣತ್ಯಾಗದ ಮಾತನ್ನು ಚಿತ್ರೋದ್ಯಮದವರು ಆಡಿದ ಉದಾಹರಣೆ, ನಡೆದುಕೊಂಡ ಉದಾಹರಣೆಯೂ ಇಲ್ಲ. ಅದು ಹಾಗಿರಲಿ, ಅಣ್ಣಾವ್ರು ಗೋಕಾಕ್ ವರದಿ ಜಾರಿಗಾಗಿ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡಿದರು. ಕನ್ನಡವೇ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಿರಬೇಕು ಎಂಬುದು ಆ ಆಂದೋಲನದ ಮೂಲಗುರಿಯಾಗಿತ್ತು. ಇವತ್ತು ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಎಗ್ಗಿಲ್ಲದೆ ಮೆರೆಯುತ್ತಿವೆ. ಅಣ್ಣಾವ್ರು ಬದುಕಿದ್ದರೆ, ಇವತ್ತಿನ ಸ್ಥಿತಿಯಲ್ಲಿ ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಇರಲಿ ಎಂದು ಹೇಳುತ್ತಿದ್ದರೇನೋ, ಇದು ಅಣ್ಣಾವ್ರ ಅಭಿಮಾನಿಗಳಾದ ನನ್ನಂಥವರ ಅನಿಸಿಕೆ. ಯಾಕೆ ಡಬ್ಬಿಂಗ್ ವಿಷಯ ಬಂದಾಗಲೆಲ್ಲ ಕನ್ನಡ ಚಿತ್ರರಂಗದವರು ಇಷ್ಟೊಂದು ಕೆರಳುತ್ತಾರೆ ಶಿವಣ್ಣ? ಈಗ ನೋಡಿ, ನೀವು ಕೂಡ ನೂರು ಸಿನಿಮಾ ಮಾಡಿದ್ದೀರಿ. ಅದರಲ್ಲಿ ಕನ್ನಡದ ಕಥೆಗಳೆಷ್ಟು, ರೀಮೇಕ್ ಸಿನಿಮಾಗಳೆಷ್ಟು? ಎಷ್ಟು ಸಿನಿಮಾಗಳಿಗೆ ಪರಭಾಷಾ ನಟಿಯರನ್ನು ಕರೆತರಲಾಗಿದೆ? ಎಷ್ಟು ಸಿನಿಮಾಗಳಲ್ಲಿ ಬೇರೆ ಭಾಷೆ ಸಿನಿಮಾಗಳ ತುಣುಕುಗಳನ್ನು ಕದ್ದು ತೂರಿಸಲಾಗಿದೆ? ಇದೆಲ್ಲ ನಿಮಗೆ ಗೊತ್ತಿರುವಂಥದ್ದೇ, ಇದನ್ನು ತಡೆಯುವುದೂ ಸಹ ನಿಮ್ಮ ಕೈಯಲ್ಲಿಲ್ಲ. ಬೇರೆ ಭಾಷೆ ಸಿನಿಮಾಗಳ ಹಂಗಲ್ಲೇ ಬದುಕುತ್ತಿರುವ ಕನ್ನಡ ಚಿತ್ರೋದ್ಯಮ ಡಬ್ಬಿಂಗ್ ವಿಷಯದಲ್ಲಿ ಮಾತ್ರ ತೊಡೆತಟ್ಟಿ ನಿಲ್ಲುವುದು ಹಾಸ್ಯಾಸ್ಪದ ಅನಿಸೋದಿಲ್ವೇ? ಅದೆಲ್ಲ ಹೋಗಲಿ, ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಗಳಿಗೆ ಯಾಕೆ ಡಬ್ ಮಾಡ್ತೀರಿ? ಆ ಭಾಷೆ ನಟರು ಪ್ರಾಣ ಕಳೆದುಕೊಂಡರೂ ಪರವಾಗಿಲ್ಲವೇ? ಶಿವಣ್ಣ, ಪ್ರಾಣ ಕಳೆದುಕೊಳ್ಳುವ ಮಾತು ಬೇಡ. ಕನ್ನಡ ಭಾಷೆಯ ಉಳಿವಿಗಾಗಿಯೇ ಇವತ್ತು ಡಬ್ಬಿಂಗ್ ಬೇಕಾಗಿರೋದು. ಬೇರೆ ಭಾಷೆಗಳಲ್ಲಿ ಒಳ್ಳೆಯ ಸಿನಿಮಾಗಳು ಬಂದರೆ ಅದರ ಡಬ್ಬಿಂಗ್ ಆವೃತ್ತಿಗಳನ್ನು ನಾವು ನೋಡುತ್ತೇವೆ. ಚೆನ್ನಾಗಿಲ್ಲದಿದ್ದರೆ ತಿರಸ್ಕರಿಸುತ್ತೇವೆ. ಹಾಗೆ ನೋಡಿದರೆ ನಮಗೆ ಶಾರೂಕ್, ಚಿರಂಜೀವಿ, ರಜಿನಿಗಿಂತ ನೀವೇ ಇಷ್ಟ. ನಿಮ್ಮ ಸಿನಿಮಾಗಳು ಸ್ಪರ್ಧೆ ಮಾಡಲಿ ಬಿಡಿ, ಯಾಕೆ ಈ ಅಂಜುಬುರುಕುತನ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಗೆ? ಕಡೇದಾಗಿ ಒಂದು ಮಾತು. ಅಣ್ಣಾವ್ರು ಡಬ್ಬಿಂಗ್ ಬೇಡ ಎಂದು ಹೋರಾಟ ಮಾಡಿದಾಗ ಇದ್ದ ಸ್ಥಿತಿಯೇ ಬೇರೆ, ಈಗಿನ ಸ್ಥಿತಿಯೇ ಬೇರೆ. ಡಬ್ಬಿಂಗ್ ವಿವಾದಕ್ಕೆ ದಯವಿಟ್ಟು ಅಣ್ಣಾವ್ರನ್ನು ಎಳೆಯಬೇಡಿ. ನಾವು ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಬ್ಬ ಸಿನಿಮಾ ನೋಡುಗನಿಗೂ ಅವನದೇ ಆದ ಮೂಲಭೂತ ಸ್ವಾತಂತ್ರ್ಯವಿರುತ್ತದೆ. ಅದನ್ನು ಗೌರವಿಸೋಣ. ಪ್ರೀತಿಯಿಂದ ದಿನೇಶ್  ಕುಮಾರ್ ಎಸ್ ಸಿ ]]>

‍ಲೇಖಕರು G

27 April, 2012

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. kiran gajanur

    well said dinesh

    • akshatha

      ` ಅಣ್ಣಾವ್ರು ಡಬ್ಬಿಂಗ್ ಬೇಡ ಎಂದು ಹೋರಾಟ ಮಾಡಿದಾಗ ಇದ್ದ ಸ್ಥಿತಿಯೇ ಬೇರೆ, ಈಗಿನ ಸ್ಥಿತಿಯೇ ಬೇರೆ. ಡಬ್ಬಿಂಗ್ ವಿವಾದಕ್ಕೆ ದಯವಿಟ್ಟು ಅಣ್ಣಾವ್ರನ್ನು ಎಳೆಯಬೇಡಿ.’ ತುಂಬಾ ಸರಿಯಾಗಿ ಹೇಳಿದೀರಿ ದಿನೇಶ್. ಒಂದೊಂದು ಕ್ಸೆತ್ರಕ್ಕೆ ಒಬ್ರೋಬ್ರು ಐಕಾನ್ ಗಳಿರ್ತಾರೆ ಸರಿ ಆದ್ರೆ ಅವ್ರ ಸಂದರ್ಬ ನಮ್ಮ ಸಂದರ್ಭ ಬೇರೆ ಇರತ್ತೆ . ಆದ್ರೆ ನಮ್ಮ ನಮ್ಮ ಸ್ವಾರ್ಥಕ್ಕೆ ಸಂಧರ್ಬಕ್ಕೆ ತಕ್ಕಂತೆ ಅವರುಗಳು ಬಳಕೆ ಆಗ್ತಾರೆ . ಮೊನ್ನೆ ಶಿವರಾಜ್ ಕುಮಾರ್ ಅವರು ಡಬ್ಬಿಂಗ್ ಬಗ್ಗೆ ವೀರವೇಶದ ಮಾತುಗಳನ್ನು ಕೇಳಿದ್ಮೇಲೆ ಅದ್ರ ಬಗ್ಗೆ ಇದ್ದ ಚೂರು ಪಾರು ಅನುಮಾನವೂ ತೊಲಗಿ ಡಬ್ಬಿಂಗ್ ಬೇಕೇ ಬೇಕು ಅನಿಸಿತು . ಅಮೀರಖಾನ್ ಕನ್ನಡದಲ್ಲೇ ನೋಡಬೇಕು ಅನಿಸಿತು .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading