
ಚಿದಂಬರ ನರೇಂದ್ರ
ಒಮ್ಮೆ ನಾನು
ಕವಿತೆ ಓದುವಾಗ
ಅವಳು ಸೀನಿಬಿಟ್ಟಳು,
ನನ್ನ ಕವಿತೆ
ಎರಡು ತುಂಡಾಗಿ
ಒಂದು ಭಾಗ
ಅವಳ ಮಡಿಲಲ್ಲಿ ಹೋಗಿ ಬಿತ್ತು.
ನನ್ನ ಭಾಗದ ಕವಿತೆಯೊಂದಿಗೆ
ಊರು ಬಿಟ್ಟವನು
ಮತ್ತೆ ಊರು ಸೇರಿದಾಗ
ಸುತ್ತ
ಮತ್ತದೇ ವಸಂತ ಕಾಲ.
ಅವಳ ಅರ್ಧ ಕವಿತೆ
ನನ್ನ ಮನೆಯ ಬಾಗಿಲು ತಟ್ಟಿತು
ನನ್ನ ಅರ್ಧ ಕವಿತೆ
ಮಾತು ಕೇಳಲಿಲ್ಲ
ಬಾಗಿಲು ತೆರೆಯಲಿಲ್ಲ.
ಅವಳ ಕವಿತೆ
ಹೊಸ್ತಿಲಲ್ಲೇ ಕಾದು ಕಾದು
ಪ್ರಾಣ ಬಿಟ್ಟಿತು.
ಆ ದಿವಂಗತ
ಅರ್ಧ ಕವಿತೆಗೆ
ಅಂಗಳದಲ್ಲೇ ಗೋರಿ ಕಟ್ಟಿದ್ದೇನೆ
ನನ್ನ ಅರ್ಧ ಕವಿತೆಯ
ಸಾಲುಗಳನ್ನ
ಅದರ ಮೇಲೆ ಕೆತ್ತಿಸಿದ್ದೇನೆ.
ವರ್ಷಕ್ಕೊಮ್ಮೆ ನಡೆಯುವ
ಜಾತ್ರೆಯಲ್ಲಿ
ಪ್ರಪಂಚದ ಅರ್ಧ ಕವಿತೆಗಳೆಲ್ಲ
ಅಲ್ಲಿ ಸೇರಿ
ಮನ್ನತ್ ಕೇಳುತ್ತವಂತೆ
ಇಲ್ಲಿ ಪೂರ್ಣವಾದ ಕವಿತೆಗಳೆಲ್ಲ
ನಕ್ಷತ್ರಗಳಾಗುತ್ತವಂತೆ.
ಇದು ಸುಳ್ಳು ಸುದ್ದಿ
ಎಂದು ಆಕೆ
ನಿನ್ನೆ ಕನಸಲ್ಲಿ ಬಂದು ಚೀರಿಕೊಂಡಳು.





ಪದ್ಯ ಚೆನ್ನಾಗಿದೆ .
Nice