ಹಾಟ್ ಸೀಟಿನಲ್ಲಿ ದೇವರನ್ನು ಕೂರಿಸಿದ್ದೇನೆ
ನೋವಿನ ಗಂಧ, ಅಳು ನುಂಗಿದ
ಆಸ್ಪತ್ರೆಗಳ ಗೋಡೆಗಳಲ್ಲಿ ಅವಿತ
ದೇವರನ್ನು ಕರೆ ತಂದು
ಹಾಟ್ ಸೀಟಿನಲ್ಲಿ ಕೂರಿಸಿದ್ದೇನೆ
ಬಂಧೀಖಾನೆಯಲ್ಲಿ ನಿರಪರಾಧಿಗಳ
ಕಣ್ಣೀರೆಷ್ಟು ಕಂಡೆ?
ಸರಳುಗಳ ನಡುವೆ ತೂರುವ ಕಿರಣಗಳು
ಎಂದಾದರೂ ಸತ್ಯದ ಮುಖವನ್ನು ಸ್ಪರ್ಶಿಸಿದ್ದವೆ ?
ಆಯುಧ ಶಾಲೆಯೊಂದರ ಕತ್ತಲೆ ಕೋಣೆ
ಯಲ್ಲಿ ಮಿನುಗುವ ಮಚ್ಚು, ಲಾಂಗುಗಳು
ಸಜ್ಜಾಗಿ ಕುಳಿತಿರುವುದೇಕೆ?
ಸರ್ಕಾರಿ ದವಾಖಾನೆಗಳ ಕಿಟಿಕಿ ಬಾಗಿಲುಗಳೇ ಹೇಳಿ
ಬಡವನೊಬ್ಬನ ರಕ್ತ ಯಾವುದು?
ಕಣ್ಣೀರು ಯಾವುದೆಂದು ಪರೀಕ್ಷಿಸುವ
ಲ್ಯಾಬ್ ಗಳೆಲ್ಲಿದೆ?
ಹೂತೋಟಕ್ಕೆ ಬಂದ
ಪಾತರಗಿತ್ತಿಯೊಂದು
ಕಣ್ಣೀರಿಡುತ್ತಾ ಮರಳಿದ್ಯಾಕೆ
ಎಂದು ಕೇಳಬಹುದೇ?
ನಿಮ್ಮ ಒಡಲು ಬರಿದು ಮಾಡಿದವನ್ಯಾರೆಂದು
ಕೆರೆ, ನದಿಗಳಲ್ಲಿ…
ನಿಮ್ಮ ಯೌವನಕ್ಕೆ ಕೊಡಲಿ ಬೀಸಿದವರಾರೆಂದು
ಗಿರಿ ಶಿಖರಗಳಲ್ಲಿ ಕೇಳೋಣ
ಸಾಗರದ ಗರ್ಭದಲ್ಲಿದ್ದ
ಆ ಪುಟ್ಟ ಮೀನುಗಳು,
ಹವಳ ಮುತ್ತುಗಳು
ಎಲ್ಲಿ ಹೋದವು?
ಒಡೆದ ಬಳೆ ಚೂರು ಬಿದ್ದಾಗ, ಮುಗ್ಧ ಮನುಜನ
ರಕ್ತವೊಂದು ದ್ವೇಷಕ್ಕೆ ಬಲಿಯಾಗಿ ಚಿಮ್ಮಿದಾಗ
ನಿನಗೇನು ಅನಿಸಿತು?
ಹೇಳು ಧರಿತ್ರಿ…
ಪ್ರಳಯವನ್ನು ಸೆರಗಲ್ಲಿ ಬಚ್ಚಿಟ್ಟ
ಓ.. ಪ್ರಕೃತಿಯೇ
ಇನ್ಯಾವಾಗ
ನಿನ್ನ ಒಡ್ಡೋಲಗ?
ಈ ಎಲ್ಲ ಪ್ರಶ್ನೆಗಳಿಗೆ
ಉತ್ತರ ನೀಡುವೆಯಾ ಭಗವಂತಾ ?
ಹೇಳುವೆನು,
ಆದರೆ ಒಂದೇ ಒಂದು ಷರತ್ತು!
ಉತ್ತರವನು ಕೇಳಿ ಅಳುವಂತಿಲ್ಲ ಎಂದನಾತ
ಕಲ್ಲ ದೇವರು ಉತ್ತರಿಸಲೊಪ್ಪಿದರೂ
ಮನಸ್ಸು ಕಲ್ಲಾಗಿಸಲು
ನನ್ನಿಂದ ಸಾಧ್ಯವಾಗಲಿಲ್ಲ!!!







ಹೂತೋಟಕ್ಕೆ ಬಂದ
ಪಾತರಗಿತ್ತಿಯೊಂದು
ಕಣ್ಣೀರಿಡುತ್ತಾ
ಮರಳಿದ್ಯಾಕೆ..?
-ಕವಿತೆಯಲ್ಲಿ ಇನ್ನುಳಿದ ಪ್ರಶ್ನೆಗಳು ಅಷ್ಟೊಂದು ಗಮನ ಸೆಳೆಯದಿದ್ದರೂ, ಇದೊಂದು ಮಾತ್ರ ನನ್ನ ಮನಸ್ಸನ್ನು ಹಿಡಿದಿಟ್ಟುಕೊಂಡುಬಿಟ್ಟಿತು. ಈ ಚಿಕ್ಕದೊಂದು ಚಿತ್ರಣವನ್ನು ಕಲ್ಪಿಸಿಕೊಂಡು ಒದ್ದಾಡುವಂತಾಗಿದೆ. ಪಾತರಗಿತ್ತಿ ಹಾಗೆ ಯಾಕೆ ಕಣ್ಣೀರಿಟ್ಟುಕೊಂಡು ಮರಳುತ್ತಿದೆ?
ತೋಟದಲ್ಲಿ ಹೂಗಳೇ ಇಲ್ಲವೇ? ಇದ್ದರೂ, ಅವುಗಳಲ್ಲಿ ಮಕರಂದವೇ ಇಲ್ಲವೇ? ಇದ್ದರೂ, ಅವು ಅಪರಿಚಿತ ಹೂಗಳೇ? ಪಾತರಗಿತ್ತಿ ಹಾಗೆ ಯಾಕೆ ಕಣ್ಣೀರಿಟ್ಟುಕೊಂಡು ಮರಳುತ್ತಿದೆ?
ದೂರ್ವಾಸನ ಶಾಪ ಹೂಗಳಿಗೆ ಅಂಟಿದರೂ, ಚಿಟ್ಟೆಗೆ ಅಂಟಿದರೂ , ವೈಯಕ್ತಿಕ ನಷ್ಟ ಹೂದೋಟಕ್ಕೆ ಮಾತ್ರ..
-Rj
bhahalha dinagalha nantara prashnegalhannu kelhikollhuvante maadida padya odhida khushi