ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಮ್ಮದಿಯ ನಾಳೆಗಾಗಿ !

ಕವಲೊಡೆದ ವಿಶ್ವಪಥ

-ನಾ ದಿವಾಕರ

ಕ್ಷೇತ್ರವೋ ಜೀವವೋ
ಇಳೆಯ ಪಾವಿತ್ರ್ಯತೆಯ ಪ್ರಶ್ನೆ
ಮ್ಲಾನವದನ ತಾಯಿಯ
ಕಣ್ಣಹನಿ ತೆರೆದ ಕನ್ನಡಿಯಂತಿತ್ತು
ಏಕೆ ತಾಯೇ ಖಿನ್ನಳಾದೆ ?
ಮತ್ತೊಮ್ಮೆ ಪ್ರಶ್ನೆ ಮಾಡಿದೆ !

ಏನ ಹೇಳಲಿ ಮಗೂ,,,,,
ಗದ್ಗದಿತ ಧ್ವನಿಗೆ ಹಕ್ಕಿಗಳೂ ಮೌನ
ಎನ್ನೊಡಲ ಬಗೆದಿರುವೆಯಾ ಕಂದ ?
ಮರು ಪ್ರಶ್ನೆಗೆ ಅವಾಕ್ಕಾದೆ
ಹೇಗೆ ? ಪೊರೆವ ಒಡಲನು
ಬಗೆವುದೇ ? ಪಾಪಿಷ್ಟನಾಗಲೊಲ್ಲೆ !

ಅಯ್ಯೋ ಮರುಳೇ
ನೀ ಯಾವ ಲೋಕದವನು ?
ಭವಿತವ್ಯದ ಕವಳ ಬರಿದಾಗಿದೆ
ಯಾರದೋ ಪಾಲಾಗಿದೆ
ಹಸಿರು ಕೆಂಪಾಗಿ ಕೆಸರು ಕಪ್ಪಾಗಿ
ಬಸಿರೆಲ್ಲವೂ ಕಸದ ಕುಪ್ಪೆಗಳಾಗಿವೆ
ಕಾಣದಾದೆಯಾ ?

ಬಾನ ಚುಂಬಿಸುವ ಇಮಾರತು
ಪಾತಾಳ ಕೂಪದ ಭಂಡಾರ ಕಾಣು
ಬಂಡೆಗಳ ಧೂಳು ಹಸಿರೆಲೆಗಳ ಭಸ್ಮ
ಮೇರು ಮಲೆಯ ಬಯಲಿನಲಿ
ನರ್ತಿಸುವುದು  ಜಲಜೆಯರಲ್ಲವೋ
ದಾಯಾದಿ ಹಣದ ದಿಬ್ಬಣಗಳು
ಕಾಣದಾದೆಯಾ ಮರುಳೇ ?

ಹೊಸಿಲು ದಾಟಿ  ಬಾ ಕಂದ
ಉದರದಲಿ ಏನೆಲ್ಲಾ ಅಡಗಿದೆ
ಛಿದ್ರ ದೇಹ ಸೀಳಿದ ಗರ್ಭ
ಹೊಸಕಿದ ಹೆಣ್ಣು ಭ್ರೂಣಗಳು
ಅಕಾಲ ಮರ್ತ್ಯದ ರುದ್ರ ಲೋಕ
ಎಲ್ಲ ನಿನ್ನ ಬಾಂಧವರೇ
ತಾಯಿ ಮಗಳು  ಸೋದರಿ
ಕಾಣಬಲ್ಲೆಯಾ ಮಗೂ ?

ನಾ ಜೀರ್ಣಿಸಿದ ಜೀವಗಳಲ್ಲ
ಪೊರೆದವಳು ಕರೆವೆನೇ ?
ಆ ಗೋಪುರ ಮಿನಾರುಗಳ
ಅಂಗಳದಲಿ ಮರ್ತ್ಯದ ಸರದಾರರ
ಜೀವದ ದಲ್ಲಾಳಿಗಳ
ಕೇಕೆಯ ಸದ್ದು ಕೇಳಿಸಿತೇ ?
ನಾನೂ ಇಣುಕಲಾರೆ !

ಮನದ ದರ್ಪಣವ ನೋಡು
ಎದೆಯ ಕದವನು ತೆರೆ
ಸ್ಥಾವರ ಜಂಗಮ ಸಂಗಮದಲಿ
ವಿಶ್ವಪಥ ಕವಲೊಡೆದಿದೆ
ಮನುಜಮತದ ತೊರೆಗಳಲಿ
ವಿಷದಲೆಗಳ ಛಾಯೆಯಿದೆ !

ಕ್ಷೇತ್ರವೋ ಜೀವವೋ
ಮಣ್ಣ ಕಣಕಣಗಳಲಿ ಹರಿವ
ಪ್ರಕೃತಿಯನೇ ಕೇಳು
ಚಿರನಿದ್ರೆಗೆ ಜಾರುವೆ
ನೆಮ್ಮದಿಯ ನಾಳೆಗಾಗಿ ! 

‍ಲೇಖಕರು Admin

14 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading