ದಶಕಗಳ ಕಾಲದಿಂದ ಜಿ ಎನ್ ನಾಗರಾಜ್ ನಡೆಸಿರುವ ಲಿಂಗಾಯತ ಚಳವಳಿಯ ಬಗೆಗಿನ ಅಧ್ಯಯನದ ಫಲವಾಗಿ ಹೊರಬಂದಿರುವ ಮಹತ್ವದ ಕೃತಿ- ಏನಿದು ಲಿಂಗಾಯತ ಸ್ವತಂತ್ರ ಧರ್ಮ?
ಇವರ ಅಧ್ಯಯನದ ಫಲವಾಗಿ ಇವರ ಅನೇಕ ಬರಹಗಳ ಮೂಲಕ ಲಿಂಗಾಯತ ಧರ್ಮದ ಬಗೆಗಿನ ಮಹತ್ವದ ವಿಚಾರಗಳು ಬೆಳಕು ಕಂಡಿದೆ.
ಪ್ರಸ್ತುತ ಲಿಂಗಾಯತ-ವೀರಶೈವ ವಿವಾದದ ಹಿನ್ನೆಲೆಯಲ್ಲಿ ಅವರು ಪ್ರತಿಯೊಬ್ಬರಿಗೂ ಸುಲಭವಾಗಿ ಧಕ್ಕಬಹುದಾದ ರೀತಿಯಲ್ಲಿ ಈ ಕೃತಿಯನ್ನು ನಮ್ಮ ಮುಂದಿಟ್ಟಿದ್ದಾರೆ
ಪ್ರತಿಗಳಿಗಾಗಿ ಸಂಪರ್ಕಿಸಿ: 94480 40728
contact.bahuroopi2gmail.com
ಜಿ ಎನ್ ನಾಗರಾಜ್ ಹೋರಾಟದ ಜಗತ್ತು ಕಂಡ ಅಪರೂಪದ ಸಂಶೋಧಕ, ಚಿಂತಕ.
ಇಂದಿಗೂ ಜನಪರ ಹೋರಾಟದ ಜೀವಗಳು ಯಾವುದೇ ಪ್ರಶ್ನೆ ಎದುರಾದಾಗಲೂ ಒಮ್ಮೆ ಈ ವಿಷಯದ ಬಗ್ಗೆ ನಾಗರಾಜ್ ಅವರ ಕಣ್ಣೋಟ ಏನು ಎಂದು ತಿಳಿಯಲು ಪ್ರಯತ್ನಿಸುತ್ತವೆ ಎನ್ನುವುದು ನಾಗರಾಜ್ ಅವರ ಆಳ ಚಿಂತನೆಗೆ, ಅಪಾರ ಓದಿಗೆ ಸಿಕ್ಕ ಮನ್ನಣೆ.
ತಮ್ಮ ಬಾಲ್ಯದ ದಿನಗಳಿಂದಲೇ ಓದಿನ ಲೋಕಕ್ಕೆ ಮಾರುಹೋದವರು. ಸಮಾಜದ ಕಣ್ಣೋಟ ಸಿಕ್ಕಿದ್ದು ಪುಸ್ತಕಗಳು ಹಾಗೂ ವೈಜ್ಞಾನಿಕ ಮನೋಭಾವದ ಬೀಜ ಬಿತ್ತಿದ ಹಿರಿ ಜೀವ ಎಚ್ ನರಸಿಂಹಯ್ಯ ಅವರಿಂದ.
ಬೆಂಗಳೂರಿನ ನ್ಯಾಷನಲ್ ಹೈಸ್ಕೂಲು ಮತ್ತು ಕಾಲೇಜಿನಲ್ಲಿ ಎಚ್ ನರಸಿಂಹಯ್ಯ ಅವರ ಗರಡಿಯಲ್ಲಿ ಬೆಳೆದ ವಿದ್ಯಾರ್ಥಿ ಜಿ ಎನ್ ನಾಗರಾಜ್. ಅಂಧಶ್ರದ್ಧೆ, ಪವಾಡಗಳನ್ನು ಬಯಲು ಮಾಡುತ್ತಾ, ಪ್ರಶ್ನೆ ಕೇಳುವ ಮನೋಭಾವವನ್ನು ಹುಟ್ಟುಹಾಕಿದ ಎಚ್ ನರಸಿಂಹಯ್ಯ ಅವರಂತೆಯೇ ನಾಗರಾಜ್ ಅವರಿಗೂ ಪ್ರಶ್ನೆ ಕೇಳುವುದು ಪ್ರೀತಿಯ ಹವ್ಯಾಸವಾಯಿತು. ಪ್ರಶ್ನೆ ಕೇಳುವುದು ಎಂತಹ ಹೆಬ್ಬಂಡೆಯನ್ನೂ ಅಲುಗಾಡಿಸಬಲ್ಲುದು ಎನ್ನುವ ಕಟು ಸತ್ಯ ಅವರಿಗೆ ಗೊತ್ತಾಗುತ್ತಾ ಹೋಯಿತು.
ಹಾಗಾಗಿ ಪ್ರಶ್ನೆ ಕೇಳುವ ಆ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸುವ, ಬದಲಾವಣೆಗೆ ತುಡಿಯುವ, ವ್ಯವಸ್ಥೆಯನ್ನು ಅಲುಗಾಡಿಸುವ ಕೆಲಸವನ್ನು ಪ್ರೀತಿಯಿಂದ ಒಪ್ಪಿಕೊಂಡವರು ಜಿ ಎನ್ ನಾಗರಾಜ್. ಕೃಷಿ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದ ಜನರ ನಡುವೆ ಇರಲು ಬಯಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ನರಗುಂದ ರೈತರ ಹೋರಾಟ ಅವರಿಗೆ ಕಲಿಸಿದ ಕಟುಸತ್ಯ, ಕೃಷಿ ಇಲಾಖೆಯ ಅಧಿಕಾರ ಸ್ಥಾನದಿಂದ ಅವರು ನೋಡಿದ ಸರ್ಕಾರಕ್ಕೂ ಜನರಿಗೂ ಇರದ ಬೆಸುಗೆ ಇವರು ನೇರವಾಗಿ ವೈಜ್ಞಾನಿಕ ಪ್ರಶ್ನೆಗಳ ತಳಹದಿಯ ಮೇಲೆ ನಿಂತ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಕಡೆಗೆ ನಡೆದು ಬರುವಂತೆ ಮಾಡಿತು.
ರೈತರು, ಕೃಷಿ ಕೂಲಿಕಾರರ ಸಮಸ್ಯೆಗಳಿಗೆ ಚೌಕಟ್ಟು ನೀಡುವಲ್ಲಿ ಹಾಗೂ ಅವರ ಸಮಸ್ಯೆಗಳಿಗೆ ಒಂದಿಷ್ಟಾದರೂ ಬೆಳಕು ಸಿಗುವಲ್ಲಿ ನಾಗರಾಜ್ ಅವರ ಪಾತ್ರ ದೊಡ್ಡದು.
ಇದೆಲ್ಲಕ್ಕಿಂತ ಮಿಗಿಲಾಗಿ ಜಿ ಎನ್ ನಾಗರಾಜ್ ಒಬ್ಬ ಮಹತ್ವದ ಸಂಶೋಧಕರು.
ಕರ್ನಾಟಕದ ಜಾತಿ ವ್ಯವಸ್ಥೆಯ ಉಗಮ, ಮಾರಮ್ಮ, ಎಲ್ಲಮ್ಮ ದೇವತೆಗಳ ಉಗಮ, ನಿಜ ರಾಮಾಯಣದ ಅನ್ವೇಷಣೆ ಮುಂತಾದ ಅವರ ಸಂಶೋಧನೆಯ ಬತ್ತಳಿಕೆಯಲ್ಲಿವೆ
0 ಪ್ರತಿಕ್ರಿಯೆಗಳು