ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾವು ಮಾಧ್ಯಮಗಳಿಗೂ ಋಣಿಯಾಗಿರಬೇಕು..

ಅವಧಿಯಲ್ಲಿ ನಿನ್ನೆ ಡಾ.ಲಕ್ಷ್ಮಣ. ವಿ. ಎ ಬರೆದ ‘ಟಿ ಆರ್ ಪಿ ಬೆನ್ನು ಹತ್ತಿ..’ ಲೇಖನಕ್ಕೆ ಪ್ರತಿಕ್ರಿಯೆ.

ಚರ್ಚೆಗೆ ಸ್ವಾಗತ 

k v tirumalesh2

ಕೆ.ವಿ.ತಿರುಮಲೇಶ್

ಮಾಧ್ಯಮಗಳನ್ನು ವಿಮರ್ಶಿಸಿ, ಇತರ ಎಲ್ಲಾ ಕ್ಷೇತ್ರಗಳನ್ನು ವಿಮರ್ಶಿಸುವಂತೆ.

ಆದರೆ ಒಂದು ವಿಷಯವನ್ನು ಮರೆಯಬೇಡಿ: ಮಾಧ್ಯಮಗಳಿಲ್ಲದೆ ಇರುತ್ತಿದ್ದರೆ ನಾವಿನ್ನೂ ಅಂಧ ಯುಗದಲ್ಲಿ ಇರುತ್ತಿದ್ದೆವು.

mass-mediaಮನುಷ್ಯ ಜನಾಂಗ ದೀರ್ಘ ಕಾಲದ ಕತ್ತಲೆಯಿಂದ ಬೆಳಕಿನ ಕಡೆಗೆ ಬರುತ್ತಿದೆ. (ಮಾಧ್ಯಮ ಯುಗ ಸುರುವಾಗಿ ಇನ್ನೂ ಶತಮಾನ ಕಳೆದಿಲ್ಲ!) ಈಗಾಗಲೇ ಹಲವು ಪತ್ರಿಕೆಗಳು ಬದುಕಿರಲು ಒದ್ದಾಡುತ್ತಿವೆ. ಇನ್ನು ಟೀವಿ ಚಾನೆಲುಗಳ ಸಮಸ್ಯೆಯೇನೋ ತಿಳಿಯದು; ಅವಕ್ಕೂ ಸರ್ವೈವಲ್ ಸಮಸ್ಯೆ ಇರಬಹುದು ಅನಿಸುತ್ತದೆ.

ಅವೀಗ ಕೇವಲ ಸುದ್ದಿವಾಹಿನಿಗಳಾಗಿ ಉಳಿದಿಲ್ದ; ರೋಚಕತೆಯನ್ನು ಹರಡುವ, ಅಭಿಪ್ರಾಯ ತಿದ್ದುವ, ರಾಜಕೀಯ ಹಸ್ತಕ್ಷೇಪ ಮಾಡುವ ಮಾಧ್ಯಮಗಳಾಗಿ ಕಾಣಿಸುತ್ತವೆ. ಆದರ್ಶ ಚಾನೆಲ್ ಎಂಬುದೇ ಇಲ್ಲ. ಹೀಗಿರುತ್ತ ವೀಕ್ಷಕರು ಸಹಾ ವಿಮರ್ಶಾ ಪ್ರಜ್ಞೆ ಬೆಳೆಸಿಕೊಳ್ಳುವುದು ಅಗತ್ಯ.

ಈ ಲೇಖನ ಈ ನಿಟ್ಟಿನಲ್ಲಿ ಇದೆ ನಿಜ. ಆದರೆ ವಿಮರ್ಶಕನೂ ವಿಮರ್ಶೆಗೆ ಒಳಗಾಗಬೇಕಾಗಿದೆ.

ಉದಾಹರಣೆಗೆ, ಒಬ್ಬ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತು ಎಂದ ತಕ್ಷಣ ಆತ ‘ನಿರಪರಾಧಿ’ ಎಂದು ಅರ್ಥವಲ್ಲ. ಅಪರಾಧ ಮಾಡಿದ ಎ‍ಷ್ಟೋ ಮಂದಿ (ಕೊಲೆಗಡುಕರು, ರೇಪಿಸ್ಟುಗಳು ಸೇರಿದಂತೆ) ಕಾನೂನಿಂದ ತಪ್ಪಿಸಿಕೊಂಡು ಸಭ್ಯರಂತೆ ಓಡಾಡುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಮಾಧ್ಯಮಗಳ ಹೊಣೆಗಾರಿಕೆಯೇನು ಎನ್ನುವುದು ಸಮಸ್ಯಾತ್ಮಕ ಸಂಗತಿ. ಈ ಕುರಿತು ವಿಚಾರ ಸಂಕಿರಣಗಳು ನಡೆಯಬೇಕು. ಯಾಕೆಂದರೆ ಇದು ಒಂದೆರಡು ವಾಕ್ಯಗಳಲ್ಲಿ ಹೇಳಿ ಮುಗಿಸುವ ವಿಚಾರವಲ್ಲ. ದುರದೃಷ್ಟಕರ ಸಂಗತಿಯೆಂದರೆ ನಮಗೆ ಸರಿಯಾಗಿ ಸಂವಾದ ನಡೆಸುವುದಕ್ಕೂ ಬರುವುದಿಲ್ಲ!

ಏನೇ ಇದ್ದರೂ ಮಿಂದ ನೀರಿನೊಂದಿಗೆ ಮಗುವನ್ನೂ ಚೆಲ್ಲುವುದು ಬೇಡ. ಹಲವು ಕಾರಣಗಳಿಗೋಸ್ಕರ ನಾವು ಮಾಧ್ಯಮಗಳಿಗೆ ಋಣಿಯಾಗಿರಬೇಕು–ಸದ್ಯಕ್ಕೆ ಅವು ಎಷ್ಟೇ ಕೊರತೆಗಳಿಂದ ತುಂಬಿದ್ದರೂ. ಎಲ್ಲಾ ಮಾಧ್ಯಮಗಳನ್ನೂ ಒಂದು ವಾರ ಮುಚ್ಚಿ ನೋಡಿ. ಆಗ ಗೊತ್ತಾಗುತ್ತದೆ.

‍ಲೇಖಕರು Admin

14 September, 2016

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. Sarojini Padasalagi

    ತಿರುಮಲೇಶ್ ಅವರ ಪ್ರತಿಕ್ರಿಯೆ ಸ್ವಾಗತಾರ್ಹ . ಮಾಧ್ಯಮಗಳನ್ನು ದೂರುವುದು ಅವು ಬೇಡವಾದದ್ದನ್ನು ಅತಿರಂಜಿತ ಸುದ್ದಿಯಾಗಿಸಿ ಬೇಕಾದದ್ದನ್ನ. ಬಿಡುವುದಕ್ಕೆ. ಈ ಪ್ರವೃತ್ತಿ ಕಡಿಮೆಯಾಗಲಿ ಅಂಂತ ಅಷ್ಟೇ.ಜ್ಞಾನಾಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಮರೆಯುವಂತಿಲ್ಲ .ಹೊರ ಜಗತ್ತಿನ ಹರಿವಲ್ಲಿ ಬರಲು ಅವುಗಳ ಪಾತ್ರ ಎಲ್ಲರಿಗೂ ಗೊತ್ತಿರುವದೇ. ಸರಿ ದಾರಿ ತೋರಲಿ ಅಂತ ಒಂದು ಆಶಯ ಅಷ್ಟೇ

  2. Bharathi Hegade

    tumba satya sir niwu baredaddu. ellaru indu samajadalli aguttiruva ella anahutagaligu madyamagala mele sarasagatagi tappannu horisibiduttare. hageye madyamada kuritu illada adarshagalannu matanaduttare. kevala duddu madodikkagiye irwudu endu heluttare. adre nivendante awugalu uluvigagi avru maduttiro horata allidavrige matra gottu. higiddu mediyadina agiruva positivenes annu jana marete bidtare.
    nivendante ee kuritu gambhiravada charche agbeku. adre ee kuritu elliyu agade madyamavannu bayyuva kelasa matra iga aguttiruvudu vishada.

  3. raghunath

    Madyamagalannu s amajaka honegarikeyannaritu vyvaharisuvante maduva java bdari pragnavanta nagarikara.Melide.

  4. ವಸಂತ

    ನಮ್ಮ ಪಬ್ಲಿಕ್ ಟಿವಿಯ ರಂಗಣ್ಣನ, ರಾಧಮ್ಮನ, ಬಿ ಟಿವಿಯ ಚಂದನ್ ಶಮ೯ನ, ಈ ಟಿವಿಯ ರಂಗನಾಥನ ಕಸ್ತೂರಿ ಚಾನೆಲ್ ನ ರಮಾಕಾಂತನ ಹುಚ್ಚಾಟಗಳನ್ನು ನೀವು ನೋಡಿದ್ದರೆ ಈ ಮಾತುಗಳನ್ನು ಹೇಳುತ್ತಿರಲಿಲ್ಲ ಸರ್.

  5. Ananda Prasad

    ಮಾಧ್ಯಮಗಳು ಅದರಲ್ಲೂ ಟಿವಿ ಮಾಧ್ಯಮ ಕಾವೇರಿ ವಿವಾದದ ವಿಷಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ, ಸಾಕಷ್ಟು ಪ್ರಚೋದನಕಾರಿಯಾಗಿ ನಡೆದುಕೊಂಡಿವೆ. ನಮ್ಮದೇ ದೇಶದ ಒಂದು ರಾಜ್ಯವಾದ ತಮಿಳುನಾಡಿಗೆ/ತಮಿಳರಿಗೆ ಸೇರಿದ ಹಲವಾರು ವಾಹನಗಳನ್ನು ಸುಟ್ಟು ಹಾಕುವುದು ದೇಶದ್ರೋಹವಲ್ಲವೇ? ಈ ಬಗ್ಗೆ ಒಂದೇ ಒಂದು ಸುದ್ದಿವಾಹಿನಿ ಚಕಾರ ಎತ್ತಲಿಲ್ಲ. ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯವರು ನಡೆಸಿದ ಒಂದು ಕಾರ್ಯಕ್ರಮದಲ್ಲಿ ದೇಶದ್ರೋಹದ ಘೋಷಣೆ ಕೂಗಲಾಯಿತು ಎಂದು ಭಾರೀ ಚರ್ಚೆಗಳನ್ನು ನಡೆಸಿದ ಸುದ್ದಿವಾಹಿನಿಗಳು, ಎಬಿವಿಪಿ ಸಂಘಟನೆ ನಮ್ಮ ರಾಷ್ಟ್ರಕ್ಕೆ ಸೇರಿದ ತಮಿಳುನಾಡಿನ ವಾಹನಗಳನ್ನು ಸುಟ್ಟುಹಾಕುವಾಗ ಮಾತಾಡಲಿಲ್ಲ, ಇದು ರಾಷ್ಟ್ರೀಯತೆಗೆ ವಿರುದ್ಧ ಎಂದು ಆಕಾಶ ಭೂಮಿ ಒಂದು ಮಾಡಲಿಲ್ಲ. ತಮಿಳುನಾಡು ಪಾಕಿಸ್ತಾನಕ್ಕೆ ಸೇರಿಲ್ಲ, ಆದರೂ ಅಲ್ಲಿಗೆ ನೀರು ಬಿಡುವುದನ್ನು ಅದೂ ಸುಪ್ರೀಂಕೋರ್ಟಿನಂತಹ ಒಂದು ಅತ್ಯುನ್ನತ ನ್ಯಾಯವ್ಯವಸ್ಥೆ ಆದೇಶಿಸಿರುವಾಗ ಅದನ್ನು ಪಾಲಿಸಬಾರದು ಎಂದು ಗುಲ್ಲೆಬ್ಬಿಸುವುದು ರಾಷ್ಟ್ರೀಯತೆಗೆ ವಿರುದ್ಧವಲ್ಲವೇ? ಇದನ್ನು ವಿರೋಧಿಸಿ ಸಾರ್ವಜನಿಕ ಸೊತ್ತನ್ನು ಹಾನಿಮಾಡುವುದು ಗಂಭೀರ ದೇಶದ್ರೋಹವಲ್ಲವೇ? ಈ ಬಗ್ಗೆ ಯಾವುದೇ ಸುದ್ದಿವಾಹಿನಿಗಳು ಜನರಿಗೆ ವಿವೇಕ ಹೇಳಿದ್ದು ಕಂಡುಬರಲಿಲ್ಲ. ಮೇಲಿಂದ ಮೇಲೆ ಬಂದ್ ಮಾಡಿ ಅಸೋಚಾಮ್ ಅಂದಾಜಿಸಿದಂತೆ ೨೫೦೦೦ ಕೋಟಿ ನಷ್ಟ ಆದ ಬಗ್ಗೆ ಯಾವುದೇ ಸುದ್ದಿ ವಾಹಿನಿಗಳು ಜನರಿಗೆ ವಿವೇಕ ಹೇಳಲಿಲ್ಲ. ಜನರನ್ನು ನೀರಿನ ಹಾಗೂ ಭಾಷೆಯ ವಿಚಾರದಲ್ಲಿ ಉದ್ರೇಕಿಸುವುದು ತಪ್ಪು ಎಂದು ಯಾವ ಸುದ್ದಿವಾಹಿನಿಯೂ ವಿಶೇಷ ಕಾರ್ಯಕ್ರಮ ಮಾಡಿದ್ದು ಕಾಣಲಿಲ್ಲ. ಈ ವಿಚಾರದಲ್ಲಿ ಪತ್ರಿಕಾ ಮಾಧ್ಯಮ ಸಾಕಷ್ಟು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಪತ್ರಿಕಾಮಾಧ್ಯಮದಿಂದ ಟಿವಿ ಮಾಧ್ಯಮದವರು ಕಲಿಯುವುದು ಬಹಳಷ್ಟಿದೆ. ನೀರು ಬಿಡುವುದನ್ನು ವಿರೋಧಿಸಲು ಹೋಗಿ ನಡೆಸಿದ ದಾಂಧಲೆ, ಬಂದಿನಿಂದ ಉಂಟಾದ ಕೋಟಿಗಟ್ಟಲೆ ನಷ್ಟಕ್ಕೆ ಹೋಲಿಸಿದರೆ ನೀರು ಬಿಡುವುದರಿಂದ ಆಗುವ ನಷ್ಟ ಎಷ್ಟೋ ಪಟ್ಟು ಕಡಿಮೆ ಇದ್ದೀತು. ಇದು ನಮ್ಮ ಮಾಧ್ಯಮಗಳಿಗೆ ಕಾಣಿಸದೆ ಇರುವುದು ಶೋಚನೀಯ. ಮಾಧ್ಯಮಗಳು ಜನರಿಗೆ ವಿವೇಕ ಹೇಳಬೇಕೇ ಹೊರತು ಪ್ರಚೋದಿಸುವುದಲ್ಲ. ಈ ವಿಚಾರದಲ್ಲಿ ಟಿವಿ ಮಾಧ್ಯಮಗಳು ಘನತೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ.

  6. Sudha ChidanandGowd

    “ಎಲ್ಲಾ ಮಾಧ್ಯಮಗಳನ್ನೂ ಒಂದು ವಾರ ಮುಚ್ಚಿ ನೋಡಿ. ಆಗ ಗೊತ್ತಾಗುತ್ತದೆ.”

    ಏನಾಗುತ್ತೆ….?!
    ಮನೆ ತಣ್ಣಗಿರುತ್ತೆ.
    ಮಕ್ಕಳು ಸುಮ್ಮನೆ ಕೂತ್ಕೊಂಡು, ಏಕಾಗ್ರತೆಯಿಂದ ಓದ್ಕೋತಾರೆ.
    ಮನೆಯೊಡತಿ ತಂಗಳು ಬಿಸಿಮಾಡುವುದು ಬಿಟ್ಟು ಏನಾದರೂ ಹೊಸರುಚಿ ಟ್ರೈ ಮಾಡ್ತಾಳೆ.
    ಮನೆಯೊಡೆಯ ಮಕ್ಕಳ ಹೋಂ ವರ್ಕ್ ಗಮನಿಸ್ತಾನೆ. ಹೆಂಡತಿ ಜೊತೆ ಮಾತಾಡ್ತಾನೆ.
    ಕಸೂತಿ, ರಂಗೋಲಿ ಪುಸ್ತಕಗಳಿಗೆ ಮತ್ತೆ ಜೀವ ಬರುತ್ತೆ.
    ಹೊಸ ರೇಷ್ಮೆಸೀರೆಗೆ ಸೊಗಸಾದ ಕುಚ್ಚು ಮನೇಲೇ ಸಿಂಗಾರವಾಗುತ್ತೆ.
    ಅಂತ್ಯಾಕ್ಷರಿ ಮಾಧುರ್ಯ ಮನೆದುಂಬುತ್ತೆ.
    ಕವಡೆ, ಚೆಸ್, ಕೇರಂ ಬೋರ್ಡುಗಳಿಗೆ ಹೊಸ ಕಳೆ ಪ್ರಾಪ್ತವಾಗುತ್ತೆ.
    ನೆಂಟರಷ್ಟರು, ಸ್ನೇಹಿತರು ಯಾರಾದರೊಬ್ಬರ ಅಂಗಳದಲ್ಲಿ ನೆರೆದು ಆಪ್ತವಾಗಿ ಹರಟುತ್ತಾರೆ..
    ಸಾಹಿತ್ಯಪಾಹಿತ್ಯ ಸಂಗೀತಪಂಗಿತ ಗಳಿಗೆಲ್ಲಾ ಮತ್ತೆ ಜಾಗ ಸಿಗುತ್ತೆ ಮನೇಲಿ
    ವೀಕೆಂಡ್ ಗೆ ಸ್ಥಳೀಯ ಐತಿಹಾಸಿಕ ಇತ್ಯಾದಿ ಜಾಗಗಳಿಗೆ ಹೋಗುವ ಹುಮ್ಮಸ್ಸು ಮರುಕಳಿಸುತ್ತದೆ.
    ಒಂದಿಷ್ಟು ಫ್ರೆಶ್ ಗಾಳಿ ಶ್ವಾಸಕೋಶ ಸೇರ್ಕೋಳುತ್ತೆ. ಆರೋಗ್ಯ “ಅಬ್ಬಾ, ಬದುಕಿದೆ” ಅಂದ್ಕೊಳುತ್ತೆ.
    ಹಾಗಾಗಿ, ಎಲ್ಲರೂ ದಯಮಾಡಿ ಒಂದು ವಾರ ಟಿವಿ ಬಂದ್ ಮಾಡ್ಕೊಳಿ.
    ಎಷ್ಟು ಚೆನಾಗಿರುತ್ತೆ ಅಂತ ಆಗ ಗೊತ್ತಾಗುತ್ತದೆ…ರಿಯಲಿ..!
    ಬಿಟ್ಟೆನೆಂದರೆ ಬಿಡದ ಮಾಯೆ…. ವಾರವಾದ ಮೇಲೆ ಚಂದನ ಟಿವಿ ಹಾಕ್ಕೊಂಡ್ರಾಯ್ತು..
    ಉಳಿದಂತೆ ಟಿವಿ ಆಫ್ ಮಾಡಿಕೊಂಡ್ರೆ…ಬಿಡಿ ಸರ್ ಒಳ್ಳೆದೇ ಆಗುತ್ತೆ..
    ಅಂಥದ್ದೇನೂ ಮುಳುಗಿಹೋಗಲ್ಲ… ಅಲ್ವೇ..?

  7. kvtirumalesh

    ಕರ್ನಾಟಕದಿಂದ ದೂರವಿರುವ ನಾನು ಸುದ್ದಿಗಾಗಿ, ಭಾ‍ಷೆಗಾಗಿ ಕನ್ನಡ ಟಿ.ವಿ. ಚ್ಯಾನೆಲುಗಳನ್ನು ನೋಡುತ್ತೇನೆ. ಆದ್ದರಿಂದ ನನಗೆ ಅಲ್ಪ ಸ್ವಲ್ಪ ಮಾಹಿತಿಗಳು ಸಿಗುತ್ತವೆ, ಆದರೆ ಒಳನಾಡಿಗರಷ್ಟು ಜ್ಞಾನ ನನಗೆ ಇಲ್ಲ. ನಾನು ‘ಮಾಧ್ಯಮ’ ಎಂದರೆ ಉದ್ದೇಶಿಸುವುದು ಕೇವಲ ಟಿ.ವಿ. ಯನ್ನೇ ಅಲ್ಲ–ಪತ್ರಿಕೆ, ಮೊಬೈಲ್, ಇಂಟರ್ನೆಟ್ ಇತ್ಯಾದಿಗಳೂ ಇದರಲ್ಲಿ ಸೇರಿವೆ.
    ಇನ್ನು ಬೆಂಗಳೂರಲ್ಲಿ ನಡೆದ ಕಾವೇರಿ ಹಿಂಸಾಚಾರಕ್ಕೆ ಟಿ.ವಿ. ಎಷ್ಟು ಕಾರಣವಾಯಿತು ಎಂದು ನನಗೆ ತಿಳಿಯದು. ಆದರೆ ಒಂದು ವಿಷಯ ಪ್ರಸ್ತುತ: ನಮ್ಮ ದೇಶದಲ್ಲಿ ಅನೇಕ ಕಡೆ ಇಂಥ ಹಿಂಸಾಚಾರಗಳು ನಡೆಯುತ್ತಲೇ ಬಂದಿವೆ–ಅವುಗಳಲ್ಲಿ ಕೆಲವು ಟಿ.ವಿ. ಪೂರ್ವದಲ್ಲಿ ನಡೆದಂಥವು. ಇವಕ್ಕೂ ಮಾಧ್ಯಮಗಳು ಕಾರಣವಾದುವೇ? ಸದ್ಯದ ಕಾವೇರಿ ಪ್ರಕರಣದಲ್ಲಿ ನಾನು ನೋಡಿದ ಯಾವ ಚ್ಯಾನೆಲೂ ಜನರನ್ನು ಹಿಂಸಾಚಾರಕ್ಕೆ ಉದ್ರೇಕಿಸಿದಂತೆ ನನಗೆ ಕಂಡುಬರಲಿಲ್ಲ. ಕೆಲವು ಚ್ಯಾನೆಲುಗಳು ಹಿಂಸಾಚಾರದ ವಿರುದ್ಧ ಜನರಿಗೆ ವಿನಂತಿ ಮಾಡಿದವು ಕೂಡ. ಪ್ರಚೋದನಕರಿಯಾಗಿ ವರದಿ ಮಾಡಿದ ಇತರ ಚ್ಯಾನೆಲುಗಳು ಇರಬಹುದು. ನನಗೆ ಗೊತ್ತಿಲ್ಲ. ಆದರೆ ನನಗನಿಸುವುದು: ‘ಕನ್ನಡಕ್ಕಾಗಿ’ ಏನು ಬೇಕಾದರೂ ಮಾಡಬಹುದು, ಮಾಡಬೇಕು ಎನ್ಫುವ ಮನೋಭಾವನೆಯೊಂದು ಕೆಲವು ಜನರಲ್ಲಿ ಇರುವುದೇ ಈ ಅತಿರೇಕಕ್ಕೆ ಕಾರಣ. ‘ಕನ್ನಡಕೆ ಕೈಯೆತ್ತು ಕನ್ನದದ ಕಂದ’, ‘ಗಂಡಸಾದರೆ ನಿನ್ನ ಬಲಿ ಕೊಡುವೆಯೇನು?’ ಎಂದು ಮುಂತಾದ ಮಾತುಗಳನ್ನು ಹಲವರು ಒಂದು ರೂಪಕವಾಗಿ ತೆಗೆದುಕೊಳ್ಳದೆ ಅಕ್ಷರಶಾ ತೆಗೆದುಕೊಳ್ಳುವುದೇ ಇದಕ್ಕೆ ಕಾರಣ. ಬಸ್ಸುಗಳಿಗೆ ಬೆಂಕಿಯಿಟ್ಟವರು (ಅವರು ಯಾರೆನ್ನುವುದು ಇನ್ನೂ ಖಚಿತವಾಗಿಲ್ಲ) ತಮ್ಮನ್ನು ‘ಕನ್ನಡ ವೀರ’ರೆಂದು ತಿಳಿದುಕೊಂಡಿರಬಹುದು–ಜಿಹಾದಿಗಳ ಹಾಗೆ–ಅವರು ಟಿ.ವಿ. ಅಥವಾ ಇತರ ಮಾಧ್ಯಮಗಳಿಂದ ಪ್ರಚೋದನೆ ಪಡೆಯುವುದಿಲ್ಲ. ಅವರ ಮನಸ್ಸೇ ಹಾಗಿರುತ್ತದೆ. ಅದನ್ನು ಸರಿಪಡಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಬುದ್ಡಿಜೀವಿಗಳಾದ ನಾವು ಜನರಿಂದ ಎಷ್ಟು ದೂರವಾಗಿದ್ದೇವೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಆದ್ದರಿಂದ ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
    ಎಲ್ಲದಕ್ಕೂ ಇನ್ನು ಯಾರನ್ನೋ ದೂರುವುದು ಬಹಳ ಸುಲಭ. ಈಗ ಮಾಧ್ಯಮಗಳು ಸುಲಭದ ಟಾರ್ಗೆಟ್ ಆಗಿವೆ. ಹಾಗಾದಾಗ ಮೂಲ ಕಾರಣ ಮರೆಯಾಗಿಬಿಡುತ್ತದೆ.

    ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಲುವುದು ಈಗ ಮತ್ತು ಯಾವಾಗಲೂ ಅಗತ್ಯ.

    ಕೆ.ವಿ.ತಿರುಮಲೇಶ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading