
ಯಮುನಾ ಗಾಂವಕರ್
ನಾನು ಕವನಗಳ ಕದಿಯುತ್ತೇನೆ
ನನ್ನೊಳಗೆ ಏನೂ ಇಲ್ಲದಾಗ
ಎಷ್ಟೆಂದರೂ ವಿಚಾರ ಹುಟ್ಟಬಹುದು
ಅನುಭವವಿರದಾಗ
ನಾನು ಕವನಗಳ ಕದಿಯುತ್ತೇನೆ
ಅನಿವಾರ್ಯ
ದಿನವೂ ಕ್ಷಣವೂ ಕದಿಯುವುದೇ ಕೆಲಸವಾಗಿದೆ ಈಗೀಗ
ಏಕೆಂದರೆ ನನಗೆ ಹಸಿವಿಲ್ಲ
ಭಾವವೂ ಇಲ್ಲ…
ಹೊಪ್ಪಳಿಕೆ ಎದ್ದ ಒಣ ಗದ್ದೆಯಲಿ
ಬಣಗುಟ್ಟುವ ಕೆರೆಯ ಮಗ್ಗುಲಲಿ
ನಾಳಿನ ಅನ್ನಕ್ಕೆ ಇಂದೇ ಕೈ ಸೋತ
ಅವರ ಮಾಡಿನಡಿಯಲ್ಲಿ ಎಂದೂ ಉಣ್ಣಲಿಲ್ಲ
ನನ್ನ ಮಾಳಿಗೆಗೆ ಅವರ ಕರೆಯಲೂ ಇಲ್ಲ
ಟೆಂಟಿನರಮನೆಯ ಬಾಗಿಲಲಿ
ನಡುಬಗ್ಗಿಸುವ ಉಸಾಬರಿಗೆ ಹೋಗಲೇ ಇಲ್ಲ
ಬೀದಿ ತುದಿಯಲ್ಲಿ ವರ್ಷಾರಂಭದಿಂದ
ಒಳ್ಳು ಮಾಡುವ ವಡ್ಡರವರ ಬಿಳುಚಿದ ಮಕ್ಕಳ
ತಲೆಯ ಮೇಲಿನ ಕಲ್ಲುಧೂಳು ಊ…ಫ್ ಎಂದಿಲ್ಲ..
ಹಾಗಾಗಿ
ಬಿಟ್ಟಸ್ಥಳವಿದ್ದಲ್ಲೆಲ್ಲ
ಕವನಗಳ ಕದಿಯುತ್ತೇನೆ …
ಮನಸ್ಸು ಪೆನ್ನು ಖಾಲಿ ಹಾಳೆ ಮಾತ್ರ ನನ್ನವು
ಅಂದರೆ ಖರೀದಿಸಿದ್ದು
ಕವನ ಖರೀದಿಸಿದರೂ ನನ್ನದಾಗದು
ಅದಕ್ಕೇ ಕಳ್ಳುತ್ತೇನೆ… ಕಳುವ ಕಲೆಯನ್ನೂ
ನಯವಾಗಿ ಬರೆಯುವ ಕಲೆ
ಬುದ್ಧಿ ಬೆಸೆಯುವ ಶಾಬ್ದಿಕ ಉಡುಗೊರೆಯೊಂದಿದ್ದರೆ
ಈಗೀಗ ಎಲ್ಲವೂ ಕದಿಯಲು ಲಭ್ಯ !!! — ಯಮುನಾ





0 Comments