ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗರಾಜ್ ಹರಪನಹಳ್ಳಿ ಹೊಸ ಕವಿತೆ- ಬೆರೆಯುವುದೆಂದರೆ

ನಾಗರಾಜ್ ಹರಪನಹಳ್ಳಿ

ಮೋಡ ಆಕಾಶದ ಬಯಲಲಿ ಸಾಗಿತು
ಅದ ತಡೆದ ಗುಡ್ಡದ ಬಳಿ ಮಳೆ ಸುರಿಯಿತು;
ಬೆರೆಯುವುದೆಂದರೆ ಹಾಗೆ
ಭೂಮಿ ಮಳೆಯುಂಡು ನಕ್ಕಂತೆ

ಬಳ್ಳಿಯಲಿ ಮೊಗ್ಗಾಗಿ ಸೂರ್ಯನ‌ ಶಾಖಕೆ‌ ಅರಳಿತು
ಅದರ ಪರಿಮಳ ಊರ ತುಂಬಿತು
ಬೆರೆಯುವುದೆಂದರೆ ಹಾಗೆ;
ಬಯಲ ತುಂಬಾ ಗಂಧ ಹರಡಿದಂತೆ

ಎಲ್ಲೋ ಮಳೆಯಾದರೆ
ನನ್ನ ಮನ ಅರಳುವುದು
ನೀ ಅಲ್ಲಿ, ಆ ಊರಲ್ಲಿ ನಕ್ಕರೆ
ಇಲ್ಲಿ, ಈ ಊರಲ್ಲಿ ಎದೆ ಹಿಗ್ಗುವುದು;
ಬೆರೆಯುವುದೆಂದರೆ ಹಾಗೆ
ಹಿಗ್ಗು ಹೆಜ್ಜೆ ಹೆಜ್ಜೆಗೂ ಗೆಜ್ಜೆಯಾಗುವುದು

ಅಲ್ಲಿ ಯಾರೋ ಅತ್ತರೂ‌ ನಿನ್ನ ಕಣ್ಣು‌ ಒದ್ದೆಯಾಗುವುದು;
ಇಲ್ಲಿ ನನ್ನ ದುಃಖ ಉಮ್ಮಳಿಸುವುದು
ಬೆರೆಯುವುದೆಂದರೆ ಹಾಗೆ
ಜೀವ ಮಿಡಿತದ ಸದ್ದು ಎದೆಯ ತಾಗಿದಂತೆ

ಕಡಲು ದಂಡೆಗೆ ಬಡಿದು ಅಬ್ಬರಿಸುತ್ತಿತ್ತು
ಕಡಲಲಿ ಬೆರೆತ ನದಿ ಬೆರಗಾಗಿ, ಒಳಗೊಳಗೆ ನಗುತ್ತಿತ್ತು;
ಬೆರೆಯುವುದೆಂದರೆ
ದಂಡೆಯಲಿ‌ ನಿಂತ ಇಬ್ಬರೂ ಮೌನಿಗಳಾಗುವುದು

ತೊಟ್ಟಿಲಲಿ ನಿದ್ದೆ ಹೋದ ಮಗು ತುಟಿಗಳಲ್ಲಿ ಆಗಾಗ ನಗುತ್ತಿತ್ತು:
ಅದಕ್ಕೆ ಬಿದ್ದ ಕನಸು ಅದರ‌ ಕಂಗಳಿಗೆ ಮಾತ್ರ ಗೊತ್ತು;
ಬೆರೆಯುವುದೆಂದರೆ
‘ಇನಿ’ ಯೊಳಗಿನ ಬೆಳಕು ಮುದ್ದಿನಿಂದ ಬೆರಗಾದಂತೆ

‍ಲೇಖಕರು Avadhi

11 June, 2021

4 Comments

  1. ಚೈತ್ರಾ

    ಚಂದದ ಪದ್ಯ

    • ನೂತನ ದೋಶೆಟ್ಟಿ

      ಚಲನಶೀಲ ಜಗತ್ತಿನ ತಾದಾತ್ಮ್ಯ ನನ್ನು ಎಷ್ಟು ಸೊಗಸಾಗಿ ಹೇಳಿದ್ದೀರಿ ನಾಗರಾಜ..

    • ಸಂಗೀತ ರವಿರಾಜ್

      ಬೆರೆಯುವದರ ಕುರಿತು ಬರೆದ ಕವಿತೆ ಸೊಗಸಾಗಿದೆ

  2. ನಾಗರಾಜ್ ಹರಪನಹಳ್ಳಿ

    ಕಾವ್ಯದ ಓದಿ ಪ್ರತಿಕ್ರಿಯಿಸಿದ ಚೈತ್ರಾ, ನೂತನ್ ಅವರಿಗೆ ಥ್ಯಾಂಕ್ಸ.

    ಇನ್ನು ,
    ಅವಧಿ ನನ್ನ ಮನೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading