ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನರೇಶ ಮಯ್ಯ ಹೊಸ ಕವಿತೆ- ಮಾಂಡೋವಿ ಮೃದಂಗ

ನರೇಶ ಮಯ್ಯ

**

ಕಸುವಾಗಿ ಕುಷಿಯಾಗಿ
ಕಾದಿದ್ದೆ
ಕೌತುಕದ ಕಂದೀಲನರಸುತ್ತ

ಚೆಂಬೆಳಕ ಕಾಣದಾ
ಕಬೋಜಿಯಾಗಿದ್ದೆ ನಾ
ದೂರತೀರದೊಳು
ತೇಲಿಬರೊ
ಹಾಯಿದೋಣಿಯದನರಸುತ್ತ

ನಿನ ಕೆಂಗಣ್ಣ ಕಾಂತಿಗೆ
ಕರೆಕರೆದೂ ಕರಕಲಾಗಿದ್ದೆ
ಕಂಡೂ ಕಂಡೆದ್ದ
ನಿನ ಮೋಹಕ್ಕೆ
‘ಸಿಕ್ಕು ಸಿಕ್ಕಾಗಿದ್ದೆ’

ನೀನೋ ಬಳ್ಳಾರಿ ಬೆಂಬೆಳಕ
ಜ್ವಾಲಾ ಮಾಲೆಯವಳು

‘ಬಾ ಇತ್ತ ಬಾ ಇತ್ತ
ನನ್ನತ್ತ ಬಿಸುಟುತ್ತ
ನಿನ್ನೊಲವ ಕಾವ’
ಎಂದು ಘೋಳಿಡುವ
ಗೂಳಿಯಾಗಿದ್ದೆ ನಾ

‘ಇನ್ನೂ ಅರಸುತ್ತಿದ್ದೇನೆ ನಿನ್ನ ಬರವ
ಬಹೆಯೋ ಬಾರದಿಹೆಯೋ’
ಎಂಗೋಳಾಡಿದ್ದೇ ಬಂತು ಲಾಭ

ನೆಟ್ಟ ನಷ್ಟವೊಂದಷ್ಟೇ
ಶೇಷ
ಬೆಳುದಿಂಗಳ ಭ್ರಾಂತೇ
ಸಶೇಷ

ಇರು
ನಾಳೆಯೂ ಬೆಳಕಾಗತ್ತೆ
ಕತ್ತಲೂ ಕವಿಯತ್ತೆ

ಎತ್ತಿಟ್ಟಿರುವೆನಿದೋ ನಿನ ಮಧುವ
ಸಾಸರಿನಲ್ಲಿ
ತುಂಬಿಬಿಡೇ
ನಿನ ಬೆಳಕನದರಲ್ಲಿ
ಒಂದಿಷ್ಟ

ಚಂದ್ರಮನ ಚೆಂಗುಲಾಟವ
ಮಥಿಸುವಷ್ಟು
ಮುಗುದೆಯೇನೂ ನೀನಲ್ಲ

ಅಹುದದು
ನಿನ ಕಣ್ಕಾಂತಿಯು
ನನ ತೊಯ್ದದ್ದು
ಒದ್ದೆಯಾಗಿ
ಬಿದ್ದೆದ್ದು ಬಂದದ್ದು

ಒಂದೇ ಎರಡೇ
ಮಥಿಸಿಹೋದ
ನಿನ ಮಥನ
ಮಿಂದದ್ದು

ಇನ್ನೆಷ್ಟು
ಇನ್ನೆಷ್ಟು ದಿನವೇ ನಿನ ದಾಳಿ
ಇರಲಿ ಬಿಡು ಕೊನೆಗೊಂದಿಷ್ಟು
ಗಷ್ಟ
ಆಗಷ್ಟು ಈಗಷ್ಟು
ಇಷ್ಟ ಕಣೆ ನನಗದು

ಸಾಗಲಿ ಬಿಡು
ಮಿಲನ ಮಹೋತ್ಸವವ
ಏಕೇ ನಿನ್ನೀ
ಕೊನೆಯಿರದ ಕ್ವಾಟಲೆ

ತೋಯ್ತೋಯ್ದು
ಬಿದ್ದು ನಮ
ಕಾಟಲಿ
ಖಾಲಿಯಾಯ್ತಿದೋ
ನಮ‌ ಬಾಟಲಿ

ಮತ್ತೆಂದೋ ನಿನ
ಸುಖ ಸಂಧಾನ
ಕಾದಿಟ್ಟಿರುವೆ ಮಿಕ್ಕಷ್ಟೂ
ಮಧುವ ಕಾಯಿಸಿಟ್ಟು

ಬಾ

ಬಾಚಿಕೊಳುವ
ಚಾಚಿಕೊಳುವ
ಕಂಗೆಡುವಷ್ಟೂ
ಕಾಪಿಟ್ಟುಕೊಳುವ

ಇನ್ನೇನು ಬರಲಿದೆ ಮೈಲು
‘ತೂಫ಼ಾನು ಮೈಲು’

‍ಲೇಖಕರು avadhi

31 December, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading