ಗ್ರಾಮ ಭಾರತದ ಕಥನವನ್ನು ಕಟ್ಟಿಕೊಟ್ಟ ದೇರ್ಲ ಕೃತಿಗಳು: ಚೇತನ್ ಸೋಮೇಶ್ವರ್
ನರೇಂದ್ರ ರೈ ದೇರ್ಲ ಅವರು ಸೂಕ್ಷ್ಮಗಣ್ಣಿನ ಲೇಖಕ. ಹಸಿರನ್ನು, ಕೃಷಿಯನ್ನು ಬರಹದ ಕೇಂದ್ರವಾಗಿಸಿಕೊಂಡು ಲೇಖಕರು ಕಡಿಮೆ. ಇವರ ಬರಹಗಳಲ್ಲಿ ಭಾರತ ಹಳ್ಳಿಗಳ ನಿಟ್ಟುಸಿರಿದೆ ಎಂದು ವಿಮರ್ಶಕ ಚೇತನ್ ಸೋಮೇಶ್ವರ ಅಭಿಪ್ರಾಯಪಟ್ಟರು.
ಬೆಳ್ತಂಗಡಿಯ ಚೇತನ್-ರಾಜೇಶ್ವರಿ ಅವರ ಮನೆಯಂಗಳ ‘ಚೆಲುವು ನಲ್ಲಿ ‘ಅವಧಿ’ ಅಂತರ್ಜಾಲ ಪತ್ರಿಕೆ ಹಮ್ಮಿಕೊಂಡಿದ್ದ ನರೇಂದ್ರ ರೈ ದೇರ್ಲ ಅವರ ಮೂರು ಕೃತಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ೭ ಲಕ್ಷ ಹಳ್ಳಿಗಳ ಆತ್ಮವನ್ನು ದೇರ್ಲ ಅವರು ತಮ್ಮ ಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ಕೊರೋನ ಜಗತ್ತಿನ ಉಸಿರನ್ನು ಅಲುಗಾಡಿಸುತ್ತಿರುವ ಸಮಯದಲ್ಲಿ ನರೇಂದ್ರ ರೈ ದೇರ್ಲ ಅವರು ಹಳ್ಳಿಗಳಲ್ಲಿ ಇರುವ ಆತ್ಮವಿಶ್ವಾಸವನ್ನು ಮುಂದಿಟ್ಟಿದ್ದಾರೆ. ಭರವಸೆಯೇ ಈ ಕೃತಿಯಲ್ಲಿನ ಬೆಳಕು ಎಂದರು.
‘ಹಳ್ಳಿಯ ಆತ್ಮಕಥೆ’, ‘ಕೊರೋನ ನಂತರದ ಗ್ರಾಮ ಭಾರತ’, ‘ಬೇರು ಬದುಕು’ ಕೃತಿಗಳ ಲೇಖಕ ನರೇಂದ್ರ ರೈ ದೇರ್ಲ ಅವರು ಮಾತನಾಡಿ ತಮ್ಮ ಹಾಗೂ ತೇಜಸ್ವಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.
ತೇಜಸ್ವಿ ಬದುಕು ನನಗೆ ಮಾದರಿಯಾಗಿತ್ತು. ಅವರು ತಮ್ಮ ಸುತ್ತಮುತ್ತಲಿನ ಪರಿಸರವನ್ನೇ ಬರಹಕ್ಕೆ ಒಗ್ಗಿಸುತ್ತಿದ್ದರು. ತೇಜಸ್ವಿಯವರ ಬರಹಗಳಲ್ಲಿ ಬರುವ ಊರು-ಪಾತ್ರಗಳು ನನ್ನ ದೇರ್ಲದಲ್ಲಿಯೂ ಇದ್ದವು. ಹೆಸರು ಬೇರೆ ಇತ್ತು ಅಷ್ಟೇ. ಹಾಗಾಗಿ ನಾನ್ಯಾಕೆ ನನ್ನ ಗ್ರಾಮವನ್ನು ಬರಹದಲ್ಲಿ ಇಡಬಾರದು ಅನಿಸಿದಾಗ ಈ ಕೃತಿಗಳು ಹುಟ್ಟಿದವು ಎಂದರು.
ದೆಹಲಿಯ ಸಂಸತ್ ಭವನ ಅಥವಾ ಬೆಂಗಳೂರಿನ ವಿಧಾನ ಸೌಧದ ಮೂಲಕ ಭಾರತವನ್ನು ನಾನು ನೋಡುವುದಿಲ್ಲ. ನನ್ನ ಗ್ರಾಮ ದೇರ್ಲದ ಮೂಲಕ ಕಾಣುವ ಭಾರತವನ್ನು ನೋಡುವವನು. ಈ ದೇಶದಲ್ಲಿ ಅಜ್ಞಾತವಾಗಿರುವವರು ಕಟ್ಟಿಕೊಡುವ ಭಾರತ ನನಗೆ ಮುಖ್ಯ ಎಂದರು.
ಲೇಖಕ ವಸಂತ ಕಜೆ ಅವರು ಮಾತನಾಡಿ ಕೊರೋನಾ ಬದುಕಿನ ಕಲ್ಪನೆಯನ್ನೇ ಬದಲಿಸುತ್ತಿರುವುದನ್ನು ವಿವರಿಸಿದರು. ‘ಅವಧಿ’ ಅಂತರ್ಜಾಲ ಪತ್ರಿಕೆಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಮಾತನಾಡಿ ‘ಐಪಿಎಲ್ ಭಾರತ ಮತ್ತು ಬಿಪಿಎಲ್ ಭಾರತ ಎಂದು ದೇಶ ಇಬ್ಬಾಗವಾಗುತ್ತಿದೆ’ ಎಂದು ವಿಷಾದಿಸಿದರು.
ಲೇಖಕ ರಾಜಶೇಖರ ಹಳೆಮನೆ, ರಾಜೇಶ್ವರಿ ಚೇತನ್, ಸೃಜನ್ ಸೋಮೇಶ್ವರ್ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.
—
ಫೋಟೋ ಕ್ಯಾಪ್ಶನ್ : ಬೆಳ್ತಂಗಡಿಯ ‘ಚೆಲುವು’ ಅಂಗಳದಲ್ಲಿ ಜರುಗಿದ ನರೇಂದ್ರ ರೈ ದೇರ್ಲ ಅವರ ಮೂರು ಕೃತಿಗಳ ಕುರಿತ ಸಂವಾದದ ನೋಟ. ಚಿತ್ರದಲ್ಲಿ ಜಿ ಎನ್ ಮೋಹನ್, ನರೇಂದ್ರ ರೈ ದೇರ್ಲ, ವಸಂತ ಕಜೆ ಹಾಗೂ ಚೇತನ್ ಸೋಮೇಶ್ವರ್ ಅವರು ಇದ್ದಾರೆ.














0 Comments