ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನರೇಂದ್ರ ರೈ ದೇರ್ಲ ಕಳವಳ..

ನರೇಂದ್ರ ರೈ ದೇರ್ಲ

ವಾರದ ಹಿಂದೆ ನಮ್ಮ ಮನೆಯ ಬೆನ್ನಿಗೆ ನಿಂತ ಕಣಿಯಾರು ಮಲೆ ಕಾಡಿಗೆ ಹೋಗಿದ್ದೆ. ಕಾಡುದಾರಿಯ ಒಳಗಡೆ ರಾಶಿರಾಶಿ ಬೆತ್ತದ ಗಿಡಗಳನ್ನು ಅರಣ್ಯ ಇಲಾಖೆಯವರು ತಂದು ಪೇರಿಸಿದ್ದರು. ಆವಾಗಲೇ ಕಾಡಲ್ಲಿ ನೆಟ್ಟಿದ್ದ ಗಿಡಗಳ ಪ್ಲಾಸ್ಟಿಕ್ ಕೊಟ್ಟೆಗಳನ್ನು ರಸ್ತೆಯ ಅಂಚಿಗೆ ತಂದು ಸುರಿದಿದ್ದರು. ವಿಚಾರಿಸಿದಾಗ, ಕಳೆದ ಎರಡು ವರ್ಷಗಳಿಂದ ಕರ್ನಾಟಕ ಅರಣ್ಯ ಇಲಾಖೆ ಲಕ್ಷಾಂತರ ಬೆತ್ತದ ಗಿಡಗಳನ್ನು ಕರಾವಳಿಯ ರಕ್ಷಿತಾರಣ್ಯದ ಒಳಗಡೆ ನೆಡುವ ಯೋಜನೆ ಹಾಕಿಕೊಂಡದ್ದು ಗೊತ್ತಾಯ್ತು.

ನಾನು ಬೆತ್ತ ಕೃಷಿ ಯೋಜನೆಯ ವಿರೋಧಿಯಲ್ಲ. ಆದರೆ ಈಗಾಗಲೇ ಇಲಾಖೆ ಪ್ರಾಯೋಗಿಕವಾಗಿ ಪಂಜ ಸಮೀಪದ ಪುಳಿಕುಕ್ಕು ಎಂಬಲ್ಲಿ ಸಹಜ ಕಾಡೊಳಗೆ ಬೆತ್ತ ನೆಟ್ಟು ಆದ ಅವಾಂತರವನ್ನು ಒಮ್ಮೆ ಗಮನಿಸಬೇಕು. ಬೆತ್ತದ ರಾಕ್ಷಸಿ ಗುಣ ಇಡೀ ಕಾಡನ್ನು ಆವರಿಸಿ, ಮರಮರಗಳಿಗೇರಿ ದೈತ್ಯ ಮರಗಳಿಗೂ ಹಬ್ಬಿ ಅವುಗಳನ್ನು ಬೆಳೆಯದೆ ಹಾಗೆ ನಿರ್ಬಂಧಿಸುವ ಗುಣ ಹೊಂದಿದೆ.

ಕಾಡ್ ಒಳಗಡೆ ಎಲ್ಲವೂ ಸಮಾನವಾಗಿ, ಸಹಜವಾಗಿ ಬೆಳೆಯುವುದು ಅರಣ್ಯದ ತತ್ವ. ಆದರೆ ಬೆತ್ತ ಎಲ್ಲಾ ಗಿಡಗಂಟಿ ಗಳ ಮೇಲೆ ಅಧಿಕಾರ ಸ್ಥಾಪಿಸಿ ಶತಮಾನದ ಹಿಂದೆ ಬೆಳೆದ ಭೀಮ ಮರಗಳನ್ನು ನೆಲಕ್ಕಿಳಿಸಿ ಸಾಯಿಸುವ ತನ ಅಷ್ಟೇ ಅಲ್ಲ, ಆ ಕಾಡು ಒಳಗಡೆ ಯಾವುದೇ ಜೀವಜಂತು ಹೋಗದ ಹಾಗೆ ತಡೆಯುವ ಶಕ್ತಿಯು ಅದಕ್ಕಿದೆ. ಬಲಶಾಲಿ ಆನೆಯಂತೂ ಬೆತ್ತದ ಮುಳ್ಳಿನಿಂದ ಕಿವಿ ಚುಚ್ಚಿಸಿಕೊಂಡು ಘೀಳಿಡುವ ಪರಿಯನ್ನು ಸ್ಥಳೀಯ ಕಾಡುವಾಸಿಗಳೂ ವಿವರಿಸುತ್ತಾರೆ.

ಹಿಂದೆ ಬುಡಕಟ್ಟು ಜನಾಂಗದವರು ಅನಿಯತವಾಗಿ ಬೆತ್ತ ಕಡಿದು ಬುಟ್ಟಿ ಹೆಣೆಯುತ್ತಿದ್ದರು. ಅರಣ್ಯ ಇಲಾಖೆ ಕೂಡ ಆಗಾಗ ಬೆತ್ತವನ್ನು ಹರಾಜು ಕೂಗಿ ಕಡಿಯುವ ಅವಕಾಶ ಮಾಡುತ್ತಿತ್ತು. ಈಗ ಪರ್ಯಾಯ ಪ್ಲಾಸ್ಟಿಕ್ ಹುಟ್ಟಿಕೊಂಡು ಬೆತ್ತ ಮೂಲೆಗುಂಪಾಗಿದೆ. ಕಡಿಯುವ ಬುಡಕಟ್ಟಿನವರೂ ಇಲ್ಲ. ಸರಕಾರ ಬೆತ್ತ ಕಟಾವು ಮಾಡುವುದಿಲ್ಲ. ಹೀಗಾಗಿ ಬೆತ್ತ ಅಡ್ಡಾದಿಡ್ಡಿಯಾಗಿ ಬೆಳೆದು ಸಹಜ ಕಾಡನ್ನು ನಾಶಪಡಿಸುತ್ತಿದೆ. ಇದನ್ನು ಹೆಸರು ಹೇಳಲು ಬಯಸದ ಅರಣ್ಯಾಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.

ಈಗಾಗಲೇ ಸಂಬಂಧಿಸಿದ ಉನ್ನತ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಥಳೀಯ ಪರಿಸರವಾದಿಗಳು ಮಾಧ್ಯಮಗಳಲ್ಲಿ ಬರೆದಿದ್ದಾರೆ. ಅರಣ್ಯಾಧಿಕಾರಿಗಳನ್ನು ಮುಖಾಮುಖಿಯಾಗಿ ಬೆತ್ತದ ಅಸಹಜ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಇಷ್ಟಾದರೂ ಇಲಾಖೆ ಮಾತ್ರ ಲಕ್ಷಾಂತರ ಗಿಡಗಳನ್ನು ಸಹಜ ಸಮೃದ್ಧ ಕಾಡು ಒಳಗಡೆ ನೆಡುತ್ತಿರುವುದು ಯಾಕೆಂದು ಅರ್ಥವಾಗುತ್ತಿಲ್ಲ.

‍ಲೇಖಕರು Admin

23 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading