ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಸ್ಪರ್ಶಕ್ಕಾಗಿ ನೀ ಇರುಳ ಧೇನಿಸುವ ….

ಅಹಲ್ಯೆಯ ದೂರು

– ಗುರುನಾಥ ಬೋರಗಿ

ಹೇಳು ಗೌತಮ,

ಇಂದ್ರ ಮಾಡಿದ ಪಾಪಕ್ಕೆ,

ನೀನು ನೀಡಿದ ಶಾಪಕ್ಕೆ

ನಾನೇಕೆ ಕಲ್ಲಾಗಬೇಕಿತ್ತು?

ನನಗೆ ಬೇಕಿದ್ದಿದು,

ನಿನ್ನ ಪೂಜೆ,ಹೋಮ,ಹವನ

ಪ್ರಾರ್ಥನೆಯಾಗಿರಲಿಲ್ಲ

ಸದಾ ನನ್ನೊಟ್ಟಿಗಿಟ್ಟುಕೊಂಡು

ನಿನ್ನ ಸಮಯ ಕೊಲ್ಲುವ

ಹರಕತ್ತೂ ನನಗಿರಲಿಲ್ಲ,ಆದರೆ-

ಬೇಕಿತ್ತು ನನಗೆ ಇಷ್ಟೇ ಇಷ್ಟು;

ನನ್ನ ಸ್ಪರ್ಶಕ್ಕಾಗಿ ನೀ ಇರುಳ ಧೇನಿಸುವ

ಸಣ್ಣದೊಂದು ಚಡಪಡಿಕೆ

ಏಕಾಂತದ ನಂತರ ಚುಟುಪುಟುಗುಟ್ಟುವ

ಮೊಳಕಾಲ ಲಟಿಕೆ

ನೀರೆರೆದು ತೊಟ್ಟಿಲಿಗೆ ಹಾಕಿದ

ಮಗುವಿನ ನಿದಿರೆಯಂಥ ಸಮಾಧಾನ

ಮೈ ಬೆವರಿನ ಘಮಕ್ಕೆ ಕೆರಳಿ,

ಕೆನೆಯುವ ಈರ್ವರ ತನು-ಮನ

ಅದೆಲ್ಲ ಎಲ್ಲಿ ಸಾಧ್ಯವಾಯಿತು?

ನಿನ್ನ ಹೋಮಕುಂಡದೊಳಗೆ

ನಿತ್ಯವೂ ದಗ್ಧಗೊಳ್ಳುತ್ತಿದ್ದುದು

ಹವಿಸ್ಸು ,ಕಾಷ್ಠಗಳಲ್ಲ.

ಹೇಳಲಾಗದೆ ಆಂತರ್ಯದೊಳಗೇ ಬಚ್ಚಿಟ್ಟುಕೊಂಡ

ನನ್ನ ಹೆಣ್ಣುಸಹಜ ಬಯಕೆಗಳವು.

ಇದೆಲ್ಲ ನಿನಗೆ ಏಕೆ ಗೊತ್ತಾಗಲಿಲ್ಲವೋ.. ?

ಗೊತ್ತಿತ್ತೋ..ಏನೋ..

ನೀವು ಗಂಡಸರೇ ಇಷ್ಟು; ನಮ್ಮದಲ್ಲದ ತಪ್ಪಿಗೆ

ನಮ್ಮನ್ನೇ ಹೊಣೆಯಾಗಿಸುತ್ತೀರಿ?

ನಿಮ್ಮದೌರ್ಬಲ್ಯವ ಜಾಹೀರುಗೊಳಿಸದೆ

ಅದನ್ನು ನಮ್ಮ ತಲೆಗೆ ಕಟ್ಟುತ್ತೀರಿ

ಕಾರಣವಿಲ್ಲದ ನಿಮ್ಮ ಶಾಪಕ್ಕೆ ಗುರಿಯಾಗಿ,ಕಲ್ಲಾಗಿ

ರಾಮನ ಕಾಲ್ಬೆರಳ ಸ್ಪರ್ಶಕ್ಕೆ

ನಾವೇಕೆ ಕಾಯಬೇಕು?

ಅಲ್ಲಿ ಊರ್ಮಿಳೆಯೂ ನಮ್ಮಂಥದೇ ನಿರ್ಲಕ್ಷ್ಯಕ್ಕೆ

ಈಡಾಗಿ ಸಂಸ್ಕೃತಿಯ ಬೇಲಿಯೊಳಗೆ ಶತಪಥ

ತುಳಿಯುತ್ತಿದ್ದಾಳೆ;ಹದಿನಾಲ್ಕು ವರ್ಷಗಳಿಂದ

ಲಕ್ಷ್ಮಣನಿಗೋ ಸತಿಪ್ರೀತಿಗಿಂತ

ಅಣ್ಣನ ಆಜ್ಞೆಯೇ ಅಂತಿಮ

ಇಂಥ ಗಂಡಸರ ನೆಚ್ಚಿ ನಾವು ಹೇಗೆ ಬಾಳುವುದು ?

‍ಲೇಖಕರು G

26 October, 2012

2 Comments

  1. shwetha Hosabale

    ಒಬ್ಬ ಗಂಡಸಾಗಿ ಹೆಣ್ಣಿನ ಭಾವನೆಗಳನ್ನು ಕವನವಾಗಿಸಿದ್ದೀರಿ! ಅಹಲ್ಯೆಯ ಸ್ವಗತ-ದೂರು-ಪ್ರಶ್ನೆಗಳು ಚೆನ್ನಾಗಿದೆ…nice lines with nice poem 🙂

    • gurunath boragi

      ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading