‘ಕವಿತೆಯೊಳಗಿನ ಬದುಕು’
– ರಮೇಶ್ ನೆಲ್ಲಿಸರ
ಎಲುಬಿಗಂಟಿದ ಚರ್ಮ
ಮಾಂಸಖಂಡಗಳಿರುವುದು ಅನುಮಾನ
ಆಗಾಗ ನಿಂತಂತೆ ಹೊರಬರುವ
ಬಿಸಿಯುಸಿರು,ಜೀವವೊಂದಿದೆ
ಎಂಬುದಕ್ಕೆ ಸಾಕ್ಷಿ ಗುರುತು.
ಅಯ್ಯೋ! ಕಲ್ಪನೆ ನಿಲ್ಲಿಸಿ
ಇದೊಂದು ಹಾಳು ಕವಿತೆ.
ನರಪೇತಲ ದೇಹವನ್ನೆಳೆಯುತ್ತಲೇ
ತಲೆಯ ಕೊರೆಯುವ ಬೈರಿಗೆ,
ಯೋಚನೆಯ ಮಾಂಸದ
ಒಳಹೊಕ್ಕ ತೆಳುನೆತ್ತರು.

ಇದರ ಕಾಟಕ್ಕೊಂದು ಕೊನೆಹಾಡಲು
ಅನಾಮತ್ತಾಗಿ ಹೊರಗೆ ಎಸೆದದ್ದೂ ಆಗಿದೆ
ಎಲುಬಿನ ಕಟಕಟ ಸದ್ದಷ್ಟೆ
ಚಿಮ್ಮಲು ರಕ್ತವಿದ್ದರೆ ತಾನೆ!
ಈಗೀಗ ನನ್ನ ಸುತ್ತಲೂ ಸುತ್ತುವ
ಹೊಸ ಉಪಾಯ ಹುಡುಕಿಕೊಂಡಿದೆ
ಕನಸಿನಲೂ ಅದರದೇ ಮುನ್ನುಡಿ
ಹಾಳಾದ್ದು ಕಣ್ತೆರೆದರೂ ಅದೇ ಹಾಳು ಮುಖ
ನೂರು ದಾರಿಗಳೂ ಈಗ
ಕವಿತೆಯ ಎದೆಯಿಂದಲೆ ಹಾದುಹೋಗುವುದು ಸ್ಪಷ್ಟವಾಗಿದೆ.
ನನ್ನೊಳಗಿನ ನರಪೇತಲ ಕವಿತೆಗೀಗ ನನ್ನದೇ ರಕ್ತಬಸಿಯುತ್ತಿದ್ದೇನೆ
ಒಂದಾಗಿ ಉಸಿರಾಡುತ್ತ
ಕವಿತೆಯೊಳಗೀಗ ನಾನು
ಬದುಕುತ್ತಿದ್ದೇನೆ…






Olleya kavite