ನಯವಾದ ನರಕ
-ಸಾಮಂತ್ರಿ ಜ್ಯೋತಿ
ನಗುವುದನ್ನ ಕಲಿಯುತಿದ್ದೇನೆ ಹೊಸದಾಗಿ
ಅಂಗೈಗೆ ತಾಕಿದ್ದ ಒಲವು ಒಣಗಿದ ಮೇಲೆ
ಹೊಸದಾಗಿ ತೇವವಾಗುವುದನ್ನ…
ಬದುಕು ದಿನೇದಿನೇ ಮೊಂಡಾದಹಾಗೆ
ಮೌನವನ್ನ ಹರಿತಗೊರಿಸಿದ್ದೇನೆ
ಯಾರೆದೆಯನೂ ಇರಿಯದಂತೆ..
ಮಳೆಯಲೇ ನಡೆಯುವಾಸೆಯವನಿಗೆ
ಹೆಜ್ಜೆಯ ನೆನಪು ವಜ್ಜಿಯಾಗದಿರುವ ಕಾಳಜಿ
ಬೆಳಕನ್ನು ತಿರಸ್ಕರಿಸುವ ಖಯಾಲಿಯಿಲ್ಲದವ
ಕತ್ತಲೆಯ ಯಥೇಚ್ಛವಾಗಿ ದಯಪಾಲಿಸಿದುದಕ್ಕೆ
ರಸೀತಿಯಿರಬಹುದು ಈ ಕಾರ್ಮೋಡ
ನಿಲ್ಲುವಂತೆ ಯಾರೂ ಹೇಳಿಲ್ಲವವನಿಗೆ
ಮುರಳಿಯ ನಾದ ಹೂವ ಸುಗಂಧ
ಏನಾದರೇನು ಎದ್ದು ಹೊಂಟವನಿಗೆ
ಕಾಲಕ್ಕೆ ಬಲಕ್ಕೆ ಒಲವಿಗೆ ಒಳಹಿಗೆ
ನಿಲುಕದ ಸತ್ಯಕ್ಕಂದು ಪ್ರೇಮವೆಂದು
ನಾಮಕರಿದ್ದವರಿಗೆ ನಯವಾದ ನರಕವಿರಲಿ
ಪ್ರತೀ ಮುಂಜಾನೆಯ ಹಕ್ಕಿಯ ಹಾಡಿಗೆ
ಅಣಕಿಸುವ ಬೆಳಕಿಗೆ ಅಳುಕಿಸುವ ಓಘಕ್ಕೆ
ನಿಲ್ಲದ ನಡಿಗೆಯ ನಿರಾಳತನಕ್ಕೆ
ನೀನಿರದ ನನ್ನಿರುವಿನ ನೀರವತೆಗೆ
ಯಾವ ರೀತಿ ಧಿಕ್ಕಾರ ಹೇಳಲಿ…






ಕವಿತೆ ಚೆನ್ನಾಗಿದೆ