ಕವಲು ದಾರಿ
-ಮನು ಗುರುಸ್ವಾಮಿ
ಒಮ್ಮೆ ನಿಟ್ಟುಸಿರು ತೆಗೆದಿಕೋ,
ಇನ್ನೂ ಮುಂದೆ ನಮ್ಮ ಭೇಟಿ
ಸಾಧ್ಯವೇ ಇಲ್ಲವೆಂದು!
ವಯಸ್ಸು ಮೂವತ್ತರಿಂದ ಆರವತ್ತಾಗಿ
ಮುಂದೊಂದು ದಿನ ನೀ ನನ್ನ
ಎದುರುಗೊಂಡರೂ ಮಾತನಾಡಬೇಡ;
ನಕ್ಕುಬಿಡು ಸುಮ್ಮನೆ!
ನಮ್ಮಿಬ್ಬರಲ್ಲಿ ಯಾರಾದರೊಬ್ಬರು
ಮಣ್ಣಾಗಿ ಬಿಡುತ್ತೇವೆ ಕೊನೆಗೆ!
ನಾ ಸತ್ತರೆ, ನಾನಿಲ್ಲದೆ ಕಳೆದ
ಪ್ರತಿನಿಮಿಷಗಳ ಲೆಕ್ಕವಾಕು;
ನೀ ಸತ್ತರೆ, ನೀ ಕೊಟ್ಟ ಅಷ್ಟೂ
ಭರವಸೆಗಳ ಎಣಿಸಿಕೊಳ್ಳುವೆ!
ಇಬ್ಬರಲ್ಲಿ ಒಬ್ಬರಿಗಾದರೂ
ಪಶ್ಚಾತ್ತಾಪ ಕಾಡಬೇಕಲ್ಲವೆ?
ಅಥವಾ, ಏನೋ ಒಂದು ನಡೆದು
ಇಬ್ಬರೂ ಜೊತೆಯಾಗಿ ಬದುಕಿಬಿಟ್ಟರೆ
ಎದೆಯೆತ್ತರಕ್ಕೆ ಬೆಳೆದು ನಿಂತ
ಮಗನ ಕನಸುಗಳ ಪಟ್ಟಿ ಮಾಡುವ!
ಆ ಪಟ್ಟಿಯೊಳಗೆ ನೀನೊಬ್ಬಳೇ ಇದ್ದರೆ
ಅಥವಾ ನಾನೊಬ್ಬನೇ ಇದ್ದರೆ
ನಮ್ಮ ದಾರಿ ಮತ್ತೆ ಇಬ್ಭಾಗವಾಗಲಿ;
ಯೋಚಿಸುವುದೇ ಬೇಡ!
ಒಂದುವೇಳೆ ನಾವಿಬ್ಬರೂ ಇದ್ದರೆ,
ಕೈ ಕುಲುಕಿ ನಮ್ಮ ಮನಸ್ತಾಪಗಳಿಗೆ
ರಾಜಿನಾಮೆ ಕೊಟ್ಟು ಬಿಡುವ!
ಗಿಡಕ್ಕೆ ಬೇರೆಷ್ಟು ಮುಖ್ಯವೋ
ಅಷ್ಟೇ ಮುಖ್ಯವಲ್ಲವೇ ಎಲೆಗಳು?!”






0 Comments