ಸುಜಾತ ಲಕ್ಷ್ಮೀಪುರ
ಮೊನ್ನೆ ದೇವಾಲಯದಲಿ ದೇವಿಗೆ
ವಿಶೇಷ ಅಲಂಕಾರ
ನವರಾತ್ರಿಯ ವೈಭವ
ಅಂದೇ ಪತ್ರಿಕೆ ತುಂಬಾ
ಅತ್ಯಾಚಾರಕ್ಕೊಳಗಾದವಳ ಸುದ್ದಿ
ಕುಂಕುಮ ಬಣ್ಣದ ರಕ್ತದ ಓಕುಳಿ
ಮೈಮೇಲೆಲ್ಲಾ ಉಗುರಿನ ಗೀರು.
ನಿನ್ನೆ ದೇವಿಯನ್ನು ಹೂವಿನ ಪಲ್ಲಕ್ಕಿಯ
ತೊಟ್ಟಿಲಲ್ಲಿ ತೂಗಿ ತೂಗಿ ಗಾಳಿ ತೀಡಿ
ಸಂಭ್ರಮಿಸಿದೆವು
ರಾತ್ರಿಗೆ ಟಿವಿ ಪರದೆಯ ತುಂಬಾ
ಹಸುಕಂದನ ಕೆನ್ನೆಕಿತ್ತು
ಕತ್ತಿರಿಸಿ ಅಂಗಾಂಗ ಸುಟ್ಟ ವಾಸನೆ.
ಹಬ್ಬವೋ ಹಬ್ಬ
ನವದಿನಗಳೂ ಒಂದೊಂದು
ಬಣ್ಣದಲಂಕಾರ ಅಮ್ಮನಿಗೆ
ಎಲ್ಲೇ.. ಯಾರೇ.. ಹೆಣ್ಣುಮಗಳು
ಹಸಿದ ವಿಕೃತ ಕೈಗಳಲಿ ಸಿಕ್ಕು ನರಳಿ
ಕಕ್ಕಿದ್ದು ಕುಂಕಮದೇ ಬಣ್ಣಾ..
ಕೆಂಪಾದವೋ ಎಲ್ಲಾ ನೆತ್ತರು ಕುಡಿದಂಗೆ
ಬಾನು ಭೂಮಿ ಬಯಲು
ದೇವಾಲಯದ ಅಮ್ಮನ ಒಡಲು.
0 ಪ್ರತಿಕ್ರಿಯೆಗಳು