ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿಯವರು ಹೇಳಿದ ಆ ಒಂದು ಪ್ರಸಂಗ…

ಪುಟ್ಟಸ್ವಾಮಿ ಕೆ

ಪೂರ್ಣಚಂದ್ರ ತೇಜಸ್ವಿಯವರನ್ನು ಒಮ್ಮೆ ಅವರ ಮನೆಯಲ್ಲಿ ಭೇಟಿಯಾಗಿದ್ದ ನಮಗೆ (ಕೃಪಾಕರ್, ಸೇನಾನಿ, ನಾನು) ಅಂದಿನ ಸಮಾಜವಾದಿಗಳು ಸಿದ್ಧಾಂತಗಳ ಚೌಕಟ್ಟಿನಲ್ಲಿಯೇ ಮಾಡುತ್ತಿದ್ದ ವಾಗ್ವಾದ, ಜಗಳ, ವೈಯಕ್ತಿಕ ನಿಂದನೆ ಇತ್ಯಾದಿ ಒಳಗೊಂಡ ಕೆಲವು ಸ್ವಾರಸ್ಯಕರ ಪ್ರಸಂಗಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹೇಳಿದರು . ಅಂಥದ್ದೊಂದು ಪ್ರಸಂಗ ಇದು.

ಒಮ್ಮೆ ಸಾಗರದ ಅತಿಥಿ ಗೃಹದಲ್ಲಿ ಸಮಾಜವಾದಿ ಪಕ್ಷದ ಮುಂದಿನ ಚಟುವಟಿಕೆಗಳ ಬಗ್ಗೆ ಚರ್ಚೆಯೋ ಏನೊ. ಅಲ್ಲಿದ್ದವರು ಕಾಗೋಡು ತಿಮ್ಮಪ್ಪ, ಕೋಣಂದೂರೂ, ಬಂಗಾರಪ್ಪ, ಅಜೀಜ್ ಶೇಠ್, ಪಟೇಲ್, ಇವರ ಜೊತೆ ಯುವ ಸಮಾಜವಾದಿಗಳೆನಿಸಿದ್ದ ಎನಿಸಿದ್ದ ಎಂಡಿಎನ್, ಸುಂದರೇಶ್, ತೇಜಸ್ವಿ ಇತ್ಯಾದಿ. ಸರಿ ಸಭೆ ಶುರುವಾದ ಕೂಡಲೆ ಬಂಗಾರಪ್ಪನವರ ಮೇಲೆ ಎಂಡಿಎನ್ ಮಾಡಿದ ಆರೋಪದಿಂದ ಆರಂಭವಾದ ಜಗಳ ಮುಂದೆ ಎಲ್ಲ ನಾಯಕರು ಕೆಲವು ಗುಂಪಾಗಿ ಒಡೆಯುತ್ತಾ, ಪರಸ್ಪರ ನಿಂದಿಸುತ್ತಾ, ಮತ್ತೊಂದು ವಿಷಯ ಬಂದಾಗ ಈ ಗುಂಪಿನ ಕೆಲವರು ಆ ಗುಂಪಿನ ಕೆಲವರೊಡನೆ ಸೇರಿ ಮೂರನೇ ಗುಂಪಾಗಿ ಎರಡೂ ಗುಂಪಿನ ಮೇಲೆ ಬೀಳುವುದು: ಸಾಕಾದ ನಂತರ ಬೇರೊಂದು ವಿಷಯ ಎತ್ತಿದ ಕೂಡಲೆ ಬೇರೆ ಬೇರೆ ಗುಂಪುಗಳಾಗಿ ಪುನರ್ರಚನೆಗೊಂಡು ಮಾತಿನಲ್ಲೇ ಕಾದಾಡುವುದು: ಹೀಗೆ ಪರ್ಮ್ಯುಟೇಶನ್ ಕಾಂಬಿನೇಶನ್ ಅನುಸರಿಸಿ ಗುದ್ದಾಡುವಾಗ ಸುಮ್ಮನೆ ಕೂತಿದ್ದ ಪಟೇಲರು ಹೇಳಿದರಂತೆ-ಏನ್ರಪ್ಪಾ ನಂ ಸಮಾಜವಾದಿ ಪಕ್ಷದ ಸಿದ್ಧಾಂತದ ಪರಮ ಗುರಿ ಕಾಂಗ್ರೆಸ್ನ ಅಧಿಕಾರದಿಂದ ಇಳಿಸುವುದು ತಾನೇ? ಈ ಚುನಾವಣೆಗಳಿಗೆ ನಾವೇ ಹೀಗೆ ಕಿತ್ತಾಡಿಕೊಂಡಿದ್ದರೆ ಆಗದು. ಕಾಂಗ್ರೆಸ್ ತೆಗೆಯಬೇಕಾದರೆ ಇರೋ ಸುಲಭದ ದಾರಿ ಒಂದೇ. ಕಿತ್ತಾಟದಲ್ಲಿ ಎಕ್ಸ್ಪರ್ಟ್ ಎನಿಸಿದ ನೀವೆಲ್ಲ ಕಾಂಗ್ರೇಸಿಗೆ ಸಾರಾಸಗಟಾಗಿ ಸೇರಿದರೆ ಹೆಚ್ಚಿನ ಶ್ರಮವೇ ಇಲ್ಲದೆ ಅದು ತಂತಾನೆ ತೊಲಗುತ್ತೆ, ನಮ್ಮ ಉದ್ದೇಶನೂ ಈಡೇರುತ್ತೆ ಎಂದರಂತೆ.

ಕಾಲಾನುಕಾಲದಲ್ಲಿ ಹಾಗೇ ಆಯ್ತು. ಕಾತಿ, ಬಂ, ಪ, ಅ.ಶೇಟ್ ಆದಿಯಾಗಿ ಎಲ್ಲರೂ ಕಾಂಗ್ರೆಸ್ಗೆ ಬಂದರು. ಪಟೇಲರ ಭವಿಷ್ಯವೂ ನಿಜವಾಯ್ತು. ಇದು ಯಾಕೆ ನೆನಪಾಯಿತು ಎಂದರೆ ಈಗಿನ ಹಲವು ಶಾಸಕರು ಬೀಜೇಪೀ ಕಡೆ ನುಗ್ಗಿದ್ದಾರೆ. ಅದನ್ನು ಕಂಡು ಕೆಲವರಿಗೆ ವ್ಯಾಕುಲವಾಗಿದೆ. ಇಂಥ ನಡೆಗಳನ್ನು ಸಹಿಸಲಾಗದವರಿಗೆ ಕಳವಳವಾಗಿದೆ. ಆದರೆ ಪಟೇಲರು ಅಂದು ಕಾಂಗ್ರೆಸ್ ಬಗ್ಗೆ ನುಡಿದ ಭವಿಷ್ಯ ಇಲ್ಲೂ ಸಾಕಾರವಾಗುವ ಸಾಧ್ಯತೆಗಳಿವೆ.

ಕನಿಷ್ಟ ಕಾಂಗ್ರೆಸ್ ಸೇರಿದ ಅಂದಿನ ಸಮಾಜವಾದಿಗಳಲ್ಲಿ ಜನಪರ ಕಾಳಜಿಗಳಾದರೂ ಇದ್ದವು. ಈಗ ಅಧಿಕಾರದ, ಆಸ್ತಿರಕ್ಷಣೆಯ ಕಾಳಜಿ ಬಿಟ್ಟರೆ ಬೇರೇನೂ ಇಲ್ಲ. ಹೀಗೆ ಅಲ್ಲಿಗೆ ಹೋದವರನ್ನೇ ಬೀಜೇಪಿ ಆಪೋಶನ ತೆಗೆದುಕೊಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ. ನೋಡೋಣ!

‍ಲೇಖಕರು Admin

28 September, 2022

1 Comment

  1. ಎಸ್. ಆರ್. ಪ್ರಸನ್ನ ಕುಮಾರ್

    ಯಾವುದೇ ಚರ್ಚೆ ನಡೆದ್ರೂ ಅಲ್ಲಿ ಭಿನ್ನಾಭಿಪ್ರಾಯಗಳು, ವಾಗ್ವಾದಗಳು ಹುಟ್ಟಿಕೊಂಡರೆ ಸ್ವಾಗತಾರ್ಹ, ಮಂಥನದಿಂದಲೇ ಹೊಸ ವಿಚಾರ ಹುಟ್ಟುವುದು, ಇಲ್ಲದಿದ್ದರೆ ಯಾರೋ ಒಬ್ಬರು ಹೇಳಿದ್ದನ್ನೇ ಕೇಳುವಂತಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading