ಮುಂಬಾಗಿಲ ಕವಿತೆ
– ಸ್ಮಿತಾ ಅಮೃತರಾಜ್
ಇಳಿ ಸಂಜೆ
ದೀಪ ಹಚ್ಚುವ ಸಮಯ
ವಿಶಾಲವಾಗಿ ಮುಂಬಾಗಿಲು
ತೆರೆದಿಟ್ಟು
ಮನಸು ಏನನ್ನೋ ನೆನೆಯುತ್ತಾ
ಕನಸ ನೇಯುವುದು
ದಿನವೂ ಹೊಸತೆಂಬಂತೆ.
ನಿದ್ದೆಗಣ್ಣಿನಿಂದ ತೂಕಡಿಸುವ
ಕೊನೇ ಹಗಲು
ಲಕ್ಷ್ಮಿ ಮನೆಗೆ ಬರುವ ಹೊತ್ತಂತೆ
ಹುಷಾರು ತಪ್ಪಿದರೂ ಮಂಚದ
ಮೇಲೆ ಸುತರಾಂ ಮಲಗಬಾರದಂತೆ.
ನನ್ನಜ್ಜಿಯಿಂದ ನನ್ನಮ್ಮನಿಗೆ
ನನ್ನಮ್ಮನಿಂದ ಮತ್ತೆ ರವಾನಿಸಲ್ಪಟ್ಟದ್ದು
ನನ್ನೀ ತನಕ ಹರಿದು ಬಂದಿದೆ
ತೆರೆದ ಬಾಗಿಲ ನಡುವೆ ದೀಪ
ಹಾಗೇ ಉರಿಯತ್ತಿದೆ.
ದೂರ ದೂರಿಗೆ ಹೋಗಿ
ನಡು ದಾರಿಯಲಿ ಸಿಲುಕಿ
ಒಂದೇ ಚಡಪಡಿಕೆ
ಮುಚ್ಚಿದ ಬಾಗಿಲು ತಟ್ಟಿ
ಲಕ್ಷ್ಮಿ ಹೊರಟೇ ಹೋದಳೇನೋ?
ಮುಂಬಾಗಿಲ ತೆರೆದಿಡಲೋಸುಗ
ನೆವಗಳ ಹೇರಿ
ಪಡಸಾಲೆಯಲ್ಲಿ ಕಾಯುತ್ತಾ
ಕುಂತದ್ದು ಅದೆಷ್ಟೋ ಬಾರಿ.
ಇದೀಗ ಮಗಳ ಸರದಿ
ಹೊಸ ಮನೆಯ ಮುಚ್ಚಿದ
ಕದದ ಮೇಲೆ ಚಿತ್ತಾರದ
ಕುಸುರಿಯ ನಡುವೆ
ಅಷ್ಟ ಲಕ್ಷ್ಮಿಯರ ಸವಾರಿ.
ಮುಸ್ಸಂಜೆಯ ತಂಪು ಹೊತ್ತಿನಲ್ಲಾದರೂ
ತುಸು ಬಾಗಿಲು ತೆರೆಯಬಾರದೇ..?
ಗೊಣಗಿಕೊಂಡರೆ..
ಗೃಹ ಲಕ್ಷ್ಮಿಯರು ನಿಸೂರಾಗಿರ ಬೇಕಾದರೆ
ಬಾಗಿಲು ಮತ್ತಷ್ಟೂ ಭದ್ರವಾಗಿರಬೇಕಮ್ಮಾ
ಅನ್ನುತ್ತಾ..
ಅಗುಳಿ ಬಿಗಿಯುತ್ತಾಳೆ
ನಸು ನಗೆ ನನ್ನೆಡೆಗೆ ತೂರಿ.







ಚೆನ್ನಾಗಿದೆ.
superb mam.
ಇಂದಿನ ಸ್ಥಿತಿ ! ಚೆನ್ನಾಗಿದೆ
nice….
enthaha viparyasa ? so nice
Tumba chennagide kane
“ಗೃಹ ಲಕ್ಷ್ಮಿಯರು ನಿಸೂರಾಗಿರ ಬೇಕಾದರೆ
ಬಾಗಿಲು ಮತ್ತಷ್ಟೂ ಭದ್ರವಾಗಿರಬೇಕಮ್ಮಾ
ಅನ್ನುತ್ತಾ..
ಅಗುಳಿ ಬಿಗಿಯುತ್ತಾಳೆ” ಎಷ್ಟೊಂದು ಬಂಧನಗಳ ಸಂಕೋಲೆಗಳು ಪ್ರತಿ ಹೆಜ್ಜೆಜಾಡಿನಲ್ಲೂ ಅಲ್ಲವೇ
chennagide