ಶಿವಕುಮಾರ್ ಮಾವಲಿ
‘ಶೋಷಿತರು ಪ್ರತಿಭಟಿಸಲೇಬೇಕು’
ಎಂಬುದು ನಿರ್ವಿವಾದದ ಸಂಗತಿ
ಹಾಗಿದ್ದಲ್ಲಿ ರಸ್ತೆಗಳೇನು ತುಸು
ತುಳಿಯಲ್ಪಟ್ಟಿವಿಯೇ ?
ನಡೆಯುವವ,ಓಡುವವ,
ನೆಗೆಯುವವ, ನಿಗರಾಡುವವ
ಪ್ರತಿಭಟಿಸುವವ, ಫರಾಕು ನೀಡುವವ
ಹೀಗೆ ಎಲ್ಲರೂ ಎಗ್ಗಿಲ್ಲದೆ
ತುಳಿಯುತ್ತಲೇ ಇರುತ್ತಾರೆ
ಸುಮ್ಮನೆ ಹೊದ್ದು ಮಲಗುವ
ಈ ನಿಷ್ಪಾಪಿ ರಸ್ತೆಗಳನ್ನು .
ಅಣಕು ಶವದ ಮೆರವಣಿಗೆ
ಬೆಲೆಯಿಲ್ಲದ ಟೊಮ್ಯಾಟೊ ಸುರಿಯುವಿಕೆ
ವಿಜಯ ಯಾತ್ರೆ – ವಿಕಾಸ ಯಾತ್ರೆ
ಅದ್ದೂರಿ ಅಂತಿಮ ಯಾತ್ರೆ
ಎಲ್ಲ ಜಾತ್ರೆಗಳಿಗೂ ರಸ್ತೆಗಳೇ ಬೇಕು
ಎಲ್ಲ ಶೋಷಿತರೂ ತಮ್ಮನ್ನು ಮೆಟ್ಟಿಲುಗಳಂತೆ ಬಳಸಿ ಶೋಷಣೆಯ ವಿರುದ್ಧ ಪ್ರತಿಭಟಿಸಿದರೂ
ಈ ರಸ್ತೆಗಳೇಕೆ ಪ್ರತಿಭಟಿಸುವುದಿಲ್ಲ
ಎಲ್ಲ ರಸ್ತೆಗಳೂ ಗುಂಪುಗೂಡಿ ಒಮ್ಮೆ ಪ್ರತಿಭಟನೆಗಿಳಿಯಲು ಇನ್ನೂ ಯೋಚಿಸಿಲ್ಲವೇಕೆ ?
ಆ ಆಗಸವಿನ್ನೂ ಈ ರಸ್ತೆಗಳ
ಪ್ರತಿಭಟನೆಗೆ ಅಣಿಯಾಗಿಲ್ಲವೇಕೆ ?






fresh thought..