ದಿವಂಗತ ಬಾಬೂರಾವ್ ಬಾಗೂಲ್ ಅವರ ಒಂದು ಕ್ರಾಂತಿಕಾರಿ ಕವಿತೆ ಇದು.
ಮೂಲ ಮರಾಠಿ ಕವಿತೆಯ ಲಿಂಕ್ ಮತ್ತು ಕವಿ ಪರಿಚಯ ಇಲ್ಲಿದೆ.

ಉಮೇಶ್ ದೇಸಾಯಿ
ಅನಾದಿಯಿಂದಲೂ ನಾ ಕೂಗುತಿರುವೆ
ನಿನಗೆ ಕೇಳಿಸದಾಗಿದೆ….
ನೀ ಮಾಯಾವಿ, ಅದೃಶ್ಯೆ….
ಎದೆಗೂಡಲ್ಲಿ ಬೆಂಕಿ ಹೊತ್ತಿ ಅನೇಕ
ಆಸ್ಫೋಟಗಳಾಗಿವೆ ನೀ ಬಲ್ಲೆಯಾ…
ಒಮ್ಮೆ ಈ ಕೇರಿಗೂ ಬಾ
ಇಲ್ಲಿಯ ದಾಸ್ಯ, ದೈನ್ಯ ದುಃಖ ನೋಡು ಬಾ
ನೀ ಬರಲೊಲ್ಲಿ ನೀ ಉಳ್ಳವರ ಹಾಸಿಗೆಯಲ್ಲಿ
ಮುದುಡಿ ಹೋಗಿರುವಿ…!
ಅರೇ ಯಾರಲ್ಲಿ ಆ ನನ್ನ ಬಂದೂಕು ತನ್ನಿ
ಇಲ್ಲವಾದಲ್ಲಿ ತುಕ್ಯಾನ ವೀಣೆಯಾದರೂ ತನ್ನಿ
ಊರೂರು ಕೇರಿ ಕೇರಿ ಹಿಂಡಲೆಯುವೆ
ವೀಣೆಯೊಂದಿಗೆ ಕ್ರಾಂತಿ ಗೀತೆ ಹಾಡ ಬಯಸಿಹೆ
ಯುಗಯುಗಗಳಿಂದ ಕೈ ಗಳು ಬಂದಿಯಾಗಿವೆ
ಆದರೂ ಪ್ರತಿವರ್ಷ ಕೆಂಪುಕೋಟೆಯ ಮೇಲಿಂದ
ಕೇಳುತಿದೆ ಭಾರತ ಭಾಗ್ಯ ವಿಧಾತ…
ತುಕ್ಯಾನ ಎಲ್ಲ ಚೀತ್ಕಾರ ಆಕ್ರೋಶಗಳು
ನೋವು ಬೇವುಗಳೇ ಈ ವೀಣೆಗೆ ಬೇರುಗಳು…
ಇದರಿಂದ ಹೊಮ್ಮಿದ ಹಾಡಿನಿಂದ ಕಣ್ಣೀರು
ಕಪಾಳದಿ ಹೆಪ್ಪುಗಟ್ಟಿದುದು ಹರಿಯಲಿ…
ಅಂದಿನಿಂದ ಕಿಲುಬು ಗಟ್ಟಿದ
ಜೊಂಡು ಬೆಳೆದ ಕೈಗಳಿಗೆ ಹೇ ಸ್ವಾತಂತ್ರ್ಯ
ಇನ್ನಾದರೂ ಬಲ ತುಂಬು ಪಾಡು ಹಾಡಾಗಿ ಹೊಮ್ಮಲಿ
ಯುಗದ ತೃಷೆ ಇನ್ನಾದರೂ ಹಿಂಗಲಿ….





0 Comments