ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದ ಮತ್ತೊಂದು ಕವಿತೆ: ಆಷಾಢದ ಗಾಳಿಗೆ…

8142~The-Tree-Posters

ಹೊರಗೆ ಬೀಸುತ್ತಿರುವುದು

ಆಷಾಢದ ಗಾಳಿಯೇ?

ನನಗೆ ಋತುಮಾನಗಳ ಸ್ಪಷ್ಟ ಕಲ್ಪನೆಯಿಲ್ಲ.

ಸಿಂಹಾಸನ ಉರುಳಿದಾಗ

ಶ್ರಾವಣ ಎಂದೂ

ದೇವಾಲಯ ನಡುಗಿದಾಗ

ಮಾರ್ಗಶಿರ ಎಂದೂ

ಕವಿತೆಯನ್ನೂ ಎಂದೂ ಓದದ

ಶ್ರೀಮಂತನಿಗೆ ಹೊಟ್ಟೆನೋವು ಬಂದಾಗ

ಸುಗ್ಗಿಯೆಂದೂ ಸಂಭ್ರಮಿಸಿದವರು ನಾವು.

ಮೊನ್ನೆ ಮಳೆಗಾಲದಲ್ಲಿ

ನಮ್ಮೂರ ಗುಡಿಯ

ಗರುಡಗಂಭಕ್ಕೆ ಸಿಡಿಲು ಬಡಿಯಿತು.

ಒಣ ಮರದ ಕಂಬ ಅಲ್ಲಾಡಲಿಲ್ಲ.

ದೇವರುಗಳ ರಾಜ್ಯದಲ್ಲಿ

ತಿರುಕರೇ ಎಲ್ಲಾ.

ಇದ್ದವರೂ ಬೇಡುವರು, ಇಲ್ಲದವರೂ.

ಇದ್ದವರಿಗೆ ದೇವರು ನೀಡುವರು.

ಇಲ್ಲದವರು ನಾಳೆಗಾಗಿ ಕಾಯುವರು.

ಭತ್ತವೊಂದು ಬಿತ್ತವಾಗಿ

ಬಿತ್ತಿದ್ದು ತೆನೆಯಾಗಿ ಮತ್ತೆ ಭತ್ತವಾಗಿ

ಹೊಟ್ಟು ಕಳಚಿಕೊಂಡು ಹೊಟ್ಟೆಗೆ ಹಿಟ್ಟಾಗುವ

ಪವಾಡಕ್ಕೆ ನಾವು ಕಾಯುತ್ತಾ ಕೂತೆವು.

ದೇವರ ಮುಂದಿಟ್ಟ ನೈವೇದ್ಯಕ್ಕೆ

ಒಂದು ದಳ ಶ್ರೀತುಲಸಿ

ಬಿಂದು ಗಂಗೋದಕ ಸಾಕು

ಪರಮಾತ್ಮನ ಮುಟ್ಟುವುದಕ್ಕೆ.

ಹೊರಗಡೆ ಬೀಸುತ್ತಿರುವುದು

ಆಷಾಢದ ಗಾಳಿಯೇ.

ಎಂದೂ ಕವಿತೆಯನ್ನೇ ಓದದ

ಶ್ರೀಮಂತರು ಸುಖವಾಗಿದ್ದಾರೆ.

ಕವಿತೆಯೆಂದರೆ ಏನೆಂದು ಅರಿಯದ

ಬಡವನೂ ಸುಖಿ.

ಕವಿತೆ ಹೆಣ್ಣು, ಪೃಥಿವಿ, ಆಕಾಶ, ಸೂರ್ಯ

ಹೋರಾಟ, ಕೆಂಡದ ಮಳೆ, ಗಾಢಪ್ರೇಮ

ಅವ್ವನ ಹಣೆಯ ಸುಕ್ಕು,

ತಂಗಿ ಕಳಕೊಂಡ ಯೌವನ,

ಸಿರಿಯಜ್ಜಿನ ಕಂಠ, ತಿಮ್ಮಕ್ಕನ ಸಾಲುಮರ

ಎಂದುಕೊಂಡು

ಹಗಲು ಬೆಳಕಾರುತ್ತಿದೆ.

ಹೊರಗೆ ಬೀಸಿದ್ದು

ಆಷಾಢದ

ಗಾಳಿಯೇ!

‍ಲೇಖಕರು avadhi

29 July, 2009

8 Comments

  1. kavipriya

    enthadu maraayre idu?! nim bagge kanikara baratte.

  2. Santhosh Ananthapura

    “ಒಂದು ದಳ ಶ್ರೀತುಲಸಿ
    ಬಿಂದು ಗಂಗೋದಕ ಸಾಕು
    ಪರಮಾತ್ಮನ ಮುಟ್ಟುವುದಕ್ಕೆ.” ಇಷ್ಟವಾದುವು…
    ಆಶಾಢದ ಗಾಳಿಗೆ ಏನೆಲ್ಲಾ…ನೆನಪುಗಳು…!!! ಅಂದ ಹಾಗೆ ನಿಮ್ಮ ಬಾಲ್ಯ ತುಂಬಾ ಅನುಭವಗಳಿಂದ ಕೂಡಿದ್ದು ಅಂತ ನಿಮ್ಮ ಕಾವ್ಯ-ಕಥನಗಳಲ್ಲಿ ಕಂಡು ಬರುತ್ತದೆ…..
    — ಸಂತೋಷ್ ಅನಂತಪುರ

  3. suresh kota

    ಚೆಂದ ಉಂಟು!

  4. Thulasi

    ಒಂದು ದಳ ಶ್ರೀ ತುಳಸಿ
    ಬಿಂದು ಗಂಗೋದಕ… ಇದು ಪುರಂದರ ದಾಸರ ಕೀರ್ತನೆಯ ಸಾಲು. ಜೋಗಿ ಸೂಕ್ತವಾಗಿ ಬಳಸಿಕೊಂಡಿದ್ದಾರೆ ಅಷ್ಟೇ.

  5. ರಮೇಶ್ ಹಿರೇಜಂಬೂರು

    ಕವನ ತುಂಬಾ ಚನ್ನಾಗಿದೆ… ಬಡತನ, ವಾಸ್ತವ ಸ್ಥಿತಿಗತಿಗಳನ್ನು ಜೋಗಿ ತಮ್ಮ ಕಾವ್ಯ ಮಳೆಯಲ್ಲಿ ಸರಳವಾಗಿ ಹಾಗೂ ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ…

  6. ಅನಿಕೇತನ ಸುನಿಲ್

    ಎಂದೂ ಕವಿತೆಯನ್ನೇ ಓದದ

    ಶ್ರೀಮಂತರು ಸುಖವಾಗಿದ್ದಾರೆ.

    ಕವಿತೆಯೆಂದರೆ ಏನೆಂದು ಅರಿಯದ

    ಬಡವನೂ ಸುಖಿ.

    ಕವಿತೆ ಹೆಣ್ಣು, ಪೃಥಿವಿ, ಆಕಾಶ, ಸೂರ್ಯ

    ಹೋರಾಟ, ಕೆಂಡದ ಮಳೆ, ಗಾಢಪ್ರೇಮ

    ಅವ್ವನ ಹಣೆಯ ಸುಕ್ಕು,

    ತಂಗಿ ಕಳಕೊಂಡ ಯೌವನ,

    ಸಿರಿಯಜ್ಜಿನ ಕಂಠ, ತಿಮ್ಮಕ್ಕನ ಸಾಲುಮರ

    ಎಂದುಕೊಂಡು

    ಹಗಲು ಬೆಳಕಾರುತ್ತಿದೆ.

    I relly liked these lines…..cool one 🙂

  7. k.n.hebbar

    jogi poem is really wonerfull.i enjoyed.it’s
    insight simply vivd-krishnamurti hebbar
    honnavar u.k

  8. k.n.hebbar

    poem is vivid.it’s insights are wonderfull.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading