ನಿಘಂಟು
ಸುನೀತ, ಕುಶಾಲನಗರ
ಕಾಡೊಳಗಿನ ಪ್ರಣಯದಲಿ
ದಕ್ಕಿದ ಮುತ್ತುಗಳಿಗೆಲ್ಲಾ
ಹೊಳೆ ಮೈದುಂಬಿ
ನಿನಾದಿಸಿದ್ದಳು
ಕೈಕೈ ಹಿಡಿದು
ಲಲ್ಲೆಗೆರೆಯುತಾ
ಹೊಳೆ ದಂಡೆಯನು
ಹಾಯುವಾಗಲೆಲ್ಲಾ
ಹಿಂಬಾಲಿಸಿ ಗೇಲಿಸಿದ್ದಳು
ಕಾಲ ಸರಿದು
ನಡು ನೀರೇ ಉಳಿದರೂ
ನಮ್ಮೊಲವಿಗೆ
ಜೇನುಗನಸಿನ
ಕಚಗುಳಿಯಿಟ್ಟಳು
ಬೇಸಗೆಯ
ಸುಡು ಬಿಸಿಲಲಿ
ಹೊಳೆ ಹರಿಯುತ್ತಿದ್ದ
ಕುರುಹಷ್ಟೆ
ಒಣದಡದ
ಹೆಜ್ಜೆ ಮೇಲಿನ ಹೆಜ್ಜೆಗಳಲ್ಲಿ
ನಾವಿಟ್ಟ ಹೆಜ್ಜೆಗಾಗಿ ತಡಕಾಡಿದೆ
ಕಾದ ಮರಳ ಮಣ್ಣಿನ
ಬೆವರಿಗೂ ಸಾಕ್ಷಿಯಾದಳು
ಎಲ್ಲವನು ನಿಘಂಟಿನಲಿ
ಬಚ್ಚಿಡಲು ಸೊರಗಿದ ಹೊಳೆ
ಮಾತನಾಡಲು ಆಗದೆ
ಹರಿಯುತ್ತಲೇ ಇದ್ದಾಳೆ.





Chennagide akka….
ಜೇನುಗನಸಿನ ಕಚಗುಳಿಯಿಟ್ಟಳು.. Sweet…..
Thank you