
ಜಿ.ಪಿ. ಬಸವರಾಜು
ಚಿತ್ರಗಳ ಕೃಪೆ: ಚಿಕ್ಕಮಗಳೂರು ಗಣೇಶ್, ಮಹೇಶ್ ಹರವೆ
೧
ಆಷಾಢದ ಏಡಿ ಗಾಳಿ ಬೀಸುತ್ತಿದೆ
ಜೋರಾಗಿ, ಯಾವ ಕೇಡಿಗೋ,
ಎತ್ತರಕ್ಕೆ ಬೆಳದ ಪಪ್ಪಾಯ ಗಿಡ,
ಕಾಂಡ ಒಳಗೆಲ್ಲ ಲಡ್ಡು ಲಡ್ಡು
ನೇತಾಡುತ್ತಿವೆ ಮೇಲೆ ಕಾಯಿ
ಈ ಗಾಳಿಯಾಟಕ್ಕೆ ಯಾವಾಗ
ಸೊಂಟ ಮುರಿದು ಬೀಳುವುದೋ
ಬೀದಿಪಾಲು ಬೆಳೆಯುವ ಕಾಯಿ
೨
ಒಳ-ಹೊರಗೆ ಆಡುತ್ತಿತ್ತು ಗಾಳಿ
ದೀಪ ಹೊಯ್ದಾಡಿದಂತೆಲ್ಲ
ಕತ್ತಲೆಯ ಭಯ ನಮಗೆ
ಥಂಡಿ ಗಾಳಿ ಎಳೆದುಕೋ
ಕದವ ಎಂದೆಚ್ಚರಿಸಿದಳು
ಅಮ್ಮ-ಹಳೆಯ ಕಾಲದ ಬಾಳ
ಕಂಡವಳು ಎಷ್ಟೊ ಆಷಾಢಗಳ
೩
ಎಲ್ಲೆಲ್ಲು ನೀರವ, ಬೆಳೆಯುತ್ತ
ರಾತ್ರಿ ಮುಂಜಾನೆಗೆ ಮುಖ ಮಾಡಿ
ನಮಗೆಲ್ಲ ತೂಗಡಿಕೆ, ಭಾರ ರೆಪ್ಪೆ
ಕಾಕಾ ಹೇಳುತ್ತಲೇ ಇದ್ದ ಏನೇನೊ,
ಎಷ್ಟೆಷ್ಟೊ, ಮಾತುಗಳು ಗಿಜಿಗುಟ್ಟಿ
ಕತ್ತಲಲ್ಲಿ ಏನೋ ಹರಿದಾಡಿದಂತೆ
ಯಾರೋ ಬಂದು ಸಪ್ಪಳ
ಕರಢಗಿತ್ತು ನಿದ್ದೆ ಮಂಪರಲ್ಲಿ

೪
ಎಚ್ಚರಾದಾಗ ಬೆಚ್ಚಿದೆವು, ಕಾಕನ
ಉಸಿರು ನಿಂತು, ಮಾತು ನಿಂತು
ಮನೆತುಂಬ ಹಾಹಾಕಾರ, ಎದೆ
ಎದೆ ಬಡಿದುಕೊಂಡಿತು ಬೀದಿ
ಕಾಕಾನ ಒಳಗೂ ಇಲ್ಲ ಹೊರಗೂ
ಇಲ್ಲಉಸಿರು, ಎಲ್ಲಿ ಹೋಯಿತು?-
ಕೊಚ್ಚಿ ಎಸೆಯುವ ಆಷಾಢ ಗಾಳಿ
೫
ಏನೋ ಕೇಳುವುದಿತ್ತು, ಕಾಕಾನಿಗೂ
ಹೇಳುವುದಿತ್ತು, ಆಗಾಗ ಅವನು ಕರೆದ
ಕನಸಲ್ಲೂ ಕರೆದಿದ್ದ ಹತ್ತಾರು ಬಾರಿ
ಹಾಳು ನಿದ್ದೆ ಕೇಳಲಿಲ್ಲ ಏನೂ
೬
ಒಂದೂ ಪಟವೂ ಇರಲಿಲ್ಲ ಕಾಕಾನ
ಜೊತೆ, ಆ ಕಾಲದಲ್ಲಿ ಕಂಡದ್ದು ನಮಗೆ
ಕೊಳದ ಬಿಂಬ, ದಂಡೆಯಲ್ಲಿದ್ದ ಎಲ್ಲವೂ
ಕೊಳದಲ್ಲಿ ಕಂಡು ಕುಣಿದಿದ್ದೆವು ಕೈ ಕೈ
ಹಿಡಿದು; ಕಾಲು ದಣಿದು ಕೂತು, ಮತ್ತೆ
ಎದ್ದು ನೋಡಿದಾಗ ಇರಲಿಲ್ಲ ಬಿಂಬ






0 Comments