ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಕಾಲಂ : ’ಮಾರಾಟಕ್ಕಿದೆ…’

ಈ ಭೂಮಿಯನ್ನು, ಈ ಆಕಾಶವನ್ನು ಮಾರುವುದು ಹೇಗೆ?

-ಜಿ.ಪಿ.ಬಸವರಾಜು

ಕೃಪೆ : ವಿಜಯ ಕರ್ನಾಟಕ

  ಹರಿಯುವ ನದಿ, ಹೊಳೆಯುವ ನಕ್ಷತ್ರ, ಅಚಲವಾಗಿ ನಿಂತಿರುವ ಗುಡ್ಡಬೆಟ್ಟಗಳು, ಭೋರ್ಗರೆಯುವ ಸಾಗರ, ನಿರಂತರವಾಗಿ ಬೀಸುವ ಗಾಳಿ, ಮುಗ್ಧ ಚೆಲವನ್ನು ತುಂಬಿಕೊಂಡಿರುವ ಮರಗಿಡಗಳು, ಝೇಂಕರಿಸುವ ದುಂಬಿ, ಸ್ವಚ್ಛಂದ ಹಾಡುವ ಪಕ್ಷಿ ಸಂಕುಲ ಹೀಗೆ ಮನುಷ್ಯನ ಸುತ್ತ ಇರುವ ಅಖಂಡ ಜಗತ್ತು ಅದೆಷ್ಟು ಕೋಟಿ ವರ್ಷಗಳಿಂದ ಉಳಿದುಕೊಂಡು ಬಂದಿದೆಯೋ. ಹಾಗೆ ನೋಡಿದರೆ, ಮನುಷ್ಯನೇ ಈ ಜೀವ ವಿಕಾಸ ಜಾಲದಲ್ಲಿ ಕೊನೆಯ ಕೊಂಡಿಯಂತೆಯೂ ಕಾಣುತ್ತಾನೆ. ಆದರೆ ಬುದ್ಧಶಾಲಿಯಾದ ಮನುಷ್ಯನ ಅಹಂಕಾರ ಮತ್ತು ಸ್ವಾರ್ಥಗಳು ಮಾತ್ರ ಈ ಅಖಂಡ ಜಗತ್ತನ್ನು ಛಿದ್ರಮಾಡುವ ಕಡೆಗೇ ಸಾಗುತ್ತಿರುವುದು ಸೋಜಿಗ ಹುಟ್ಟಿಸುತ್ತದೆ. ಈ ಜಗತ್ತನ್ನು ಅಖಂಡವಾಗಿ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸೆಣಸಾಟವಾಗುವಂಥ ಸನ್ನಿವೇಶವನ್ನು ಮನುಷ್ಯನೇ ಸೃಷ್ಟಿಸಿಕೊಂಡಿರುವುದು ಬಹುದೊಡ್ಡ ವ್ಯಂಗ್ಯವಾಗಿಯೂ ಕಾಣಿಸುತ್ತಿದೆ. ಈ ಹೋರಾಟ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜಗತ್ತಿನ ಅನೇಕ ಭಾಗಗಳಲ್ಲಿ ನಡೆಯುತ್ತಿದೆ. ಈ ಭೂಮಿ ಮನುಷ್ಯನಿಗೆ ಮಾತ್ರ ಸೇರಿದ್ದಲ್ಲ. ಇಡೀ ಜೀವ ಸಂಕುಲಕ್ಕೆ ಸೇರಿದ್ದು. ಈ ಅರಿವನ್ನು ಇಟ್ಟುಕೊಂಡೂ ಮನುಷ್ಯ ತನ್ನ ಸ್ವಾರ್ಥವನ್ನೇ ಮುಂದೆ ಮಾಡಿ, ಉಳಿದ ಜೀವಗಳನ್ನು ಬಲಿತೆಗೆದುಕೊಳ್ಳಲು ಸದಾ ಹೊಂಚು ಹಾಕಿಕೊಂಡೇ ಕೂತಿದ್ದಾನೆ. ತಾನು, ತನ್ನ ಸುತ್ತಲಿನ ಜಗತ್ತಿನ ಒಂದು ಭಾಗ. ತಾನು ಉಳಿಯಬೇಕೆಂದರೆ ಸುತ್ತಲಿನ ಜಗತ್ತು ಸುರಕ್ಷಿತವಾಗಿರಬೇಕು ಎಂಬುದೊಂದು ದೊಡ್ಡ ವಿವೇಕ. ವಿಜ್ಞಾನದ ಬೆಳಕಿನ ಹಾದಿಯಲ್ಲಿ ಬಹುದೂರ ಸಾಗಿಬಂದಿರುವ ಆಧುನಿಕರಾದ ನಮಗೆ ಈ ಅರಿವು ಮೂಡಿರುವುದು ಸಹಜ. ಆದರೆ 1854ರಷ್ಟು ಹಿಂದೆಯೇ ಉತ್ತರ ಅಮೆರಿಕದ ಬ್ಲೇಕ್ ದ್ವೀಪದ ಬುಡಕಟ್ಟು ನಾಯಕನೊಬ್ಬ ಈ ವಿವೇಕದ ಮಾತುಗಳನ್ನು ಆಡಿದ ಎಂಬುದು ಎಂಥ ಸೋಜಿಗ. ಅದು ಮನುಷ್ಯನಲ್ಲಿ ಆಳವಾಗಿ ಬೇರುಬಿಟ್ಟಿರುವ ಅರಿವಿನ ಸೂಕ್ಷ್ಮವನ್ನು ತಿಳಿಸುತ್ತದೆ; ಹಾಗೆಯೇ ಮನುಷ್ಯ ಈ ಜೀವಜಾಲದಲ್ಲಿ ಒಂಟಿಯಲ್ಲ; ಸಂಬಂಧಗಳ ಸುತ್ತ ತನ್ನನ್ನು ತಾನು ಕಟ್ಟಿಕೊಂಡ ಜೀವಿ ಎಂಬುದನ್ನೂ ತೋರಿಸಿಕೊಡುತ್ತದೆ. ವಾಷಿಂಗ್ಟನ್ನಿನ ಅಧ್ಯಕ್ಷ ಬ್ಲೇಕ್ ದ್ವೀಪವನ್ನು ಕೊಂಡುಕೊಳ್ಳುವ ಪ್ರಸ್ತಾವವನ್ನು ಮಂಡಿಸಿದಾಗ, ಅಮೆರಿಕದ ಆದಿಮ ಬುಡಕಟ್ಟುಗಳಲ್ಲಿ ಒಂದು ಎಂದು ಪರಿಗಣಿಸುವ ದುವಾಮಿಷ್ ಬುಡಕಟ್ಟಿನ ನಾಯಕ ಸಿಯಾಟ್ಲ್ ಈ ವಿವೇಕದ ಮಾತುಗಳನ್ನು ಆಡಿದ. ಅತ್ಯಂತ ಸಹಜ ರೀತಿಯಲ್ಲಿ, ಸರಳ ಭಾಷೆಯಲ್ಲಿ ತನ್ನ ಕೈಗೆಟಕುವ ಸತ್ಯವನ್ನು ಹಿಡಿದುಕೊಡುವಂತೆ ಈ ನಾಯಕ ಆಡಿದ ಮಾತುಗಳು ಇವತ್ತಿಗೂ ಜಗತ್ತಿನಾದ್ಯಂತ ಅನುರಣಿಸುತ್ತಿವೆ; ಹಾದಿ ತಪ್ಪುತ್ತಿರುವ ಮನುಷ್ಯನನ್ನು ಸರಿದಾರಿಗೆ ತರಲು ಪ್ರೇರೇಪಿಸುತ್ತಿವೆ. ನಾವು ವಿಜ್ಞಾನದ ಬೆಂಬಲದಿಂದ ಪಡೆದುಕೊಂಡಿರುವ ಅರಿವನ್ನು ಆ ಬುಡಕಟ್ಟು ನಾಯಕ ತನ್ನ ಬದುಕಿನಿಂದ, ಅನುಭವದಿಂದ ಪಡೆದುಕೊಂಡಿದ್ದ. ಭೂಮಿ ಪವಿತ್ರ; ಭೂಮಿಯ ಮೇಲಿರುವುದೆಲ್ಲವೂ ನನ್ನ ಜನರಿಗೆ ಪವಿತ್ರ. ಪ್ರತಿಯೊಂದು ಕಡಲದಂಡೆ, ಪ್ರತಿ ಹುಲ್ಲುಗಾವಲು, ಝೇಂಕರಿಸುವ ಕೀಟ, ದಟ್ಟಾರಣ್ಯದಲ್ಲಿ ಹೊಳೆಯುವ ಮಂಜಿನ ಹನಿ, ಪೈನ್ ಮರದಲ್ಲಿ ಫಳಫಳಿಸುವ ಸೂಜಿಮೊನೆಯ ಎಲೆ-ಎಲ್ಲವೂ ನನ್ನ ಜನರ ನೆನಪಿನಲ್ಲಿ ಮತ್ತು ಅನುಭವದಲ್ಲಿ ಪವಿತ್ರ. ಈ ಭೂಮಿಯನ್ನು, ಈ ಆಕಾಶವನ್ನು, ಈ ನದಿ, ಗುಡ್ಡ ಬೆಟ್ಟಗಳನ್ನು ಕೊಳ್ಳುವ ಮತ್ತು ಮಾರುವ ಪ್ರಸ್ತಾವವೇ ನಮಗೆ ವಿಚಿತ್ರವಾಗಿ ಕಾಣಿಸುತ್ತದೆ. ಗಾಳಿಯ ತಾಜಾತನ, ನೀರನ ಹೊಳಪುಗಳನ್ನು ಅನುಭವಿಸಲು ಸಾಧ್ಯವಾಗದೇ ಹೋದರೆ ಅವನ್ನು ಕೊಳ್ಳುವುದಾದರೂ ಹೇಗೆ? ಎಂದು ಈ ನಾಯಕ ಪ್ರಶ್ನಿಸುತ್ತಾನೆ. ‘ನಾವು (ಮನುಷ್ಯರು) ಭೂಮಿಯ ಒಂದು ಭಾಗ; ಹಾಗೆಯೇ ಭೂಮಿಯೂ ನಮ್ಮ ಒಂದು ಭಾಗ. ಸುಗಂಧ ಭರಿತ ಹೂವುಗಳು ನಮ್ಮ ಸೋದರಿಯರು. ಕರಡಿ, ಜಿಂಕೆ, ರಣಹದ್ದು ನಮ್ಮ ಸೋದರರು. ಹುಲ್ಲ ಎಸಳಿನ ಮೇಲಿರುವ ಮಂಜಿನ ಹನಿ, ಕೋಡುಗಲ್ಲಿನ ಶಿಖರ, ಕುದುರೆ ಮೈಯ್ಯ ಕಾವು ಮತ್ತು ಮನುಷ್ಯ-ಎಲ್ಲವೂ ಒಂದೇ ಕುಟುಂಬಕ್ಕೆ ಸೇರಿದವು…’ ‘ಹಳ್ಳಕೊಳ್ಳಗಳಲ್ಲಿ ಫಳಪಳಿಸುತ್ತ ಹರಿಯುವ ನೀರು ಕೇವಲ ನೀರಲ್ಲ; ಅದು ನಮ್ಮ ಹಿರೀಕರ ರಕ್ತ. ಶುಭ್ರ ಕೊಳಗಳ ಸ್ಫಟಿಕ ಜಲದಲ್ಲಿ ಕಾಣುವ ಪ್ರತಿಯೊಂದು ಪ್ರತಿಫಲನವೂ ನನ್ನ ಜನರ ಬದುಕಿನ ಘಟನೆಗಳನ್ನು ಮತ್ತು ನೆನಪುಗಳನ್ನು ಹೇಳುತ್ತದೆ. ನೀರಿನ ಜುಳುಜುಳು ಗಾನ ನನ್ನ ಅಜ್ಜ ಮುತ್ತಜ್ಜಂದಿರ ಧ್ವನಿಯೇ ಆಗಿದೆ.’ ‘ಅದೇ ತಾನೆ ಹುಟ್ಟಿದ ಮಗು ತನ್ನ ತಾಯ ಎದೆಬಡಿತವನ್ನು ಪ್ರೀತಿಸುವಂತೆ ನಾವು ಈ ಭೂಮಿಯನ್ನು ಪ್ರೀತಿಸುತ್ತೇವೆ. ಒಂದು ವೇಳೆ ನಾವು ಈ ಭೂಮಿಯನ್ನು ಮಾರಿದರೆ, ನಮ್ಮಂತೆಯೇ ಅದನ್ನು ಪ್ರೀತಿಸಿ. ನಾವು ಈ ಭೂಮಿಯ ಬಗ್ಗೆ ತೋರಿದ ಕಳಕಳಿಯನ್ನೇ ನೀವೂ ತೋರಿಸಿ. ಈ ಭೂಮಿಯನ್ನು ನೀವು ಕೊಳ್ಳುವಾಗ ಅದರ ನೆನಪುಗಳನ್ನು ನಿಮ್ಮ ಎದೆಯಾಳಕ್ಕೆ ತುಂಬಿಸಿಕೊಳ್ಳಿ. ಎಲ್ಲ ಮಕ್ಕಳಿಗಾಗಿ ಈ ಭೂಮಿಯನ್ನು ಕಾಪಿಡಿ. ದೇವರು ನಮ್ಮನ್ನೆಲ್ಲ ಪ್ರೀತಿಸುವಂತೆಯೇ ನೀವು ಈ ಭೂಮಿಯನ್ನು ಪ್ರೀತಿಸಿ. ಭೂಮಿ ಮನುಷ್ಯನಿಗೆ ಸೇರಿದ್ದಲ್ಲ; ಮನುಷ್ಯ ಭೂಮಿಗೆ ಸೇರಿದವನು. ಈ ಭೂಮಿಯನ್ನು ತಾಯಿಯೆಂದು ತಿಳಿದು ಅದೇ ಪಾಠವನ್ನು ನಮ್ಮ ಮಕ್ಕಳಿಗೆ ಹೇಳಿದ್ದೇವೆ. ನೀವೂ ನಿಮ್ಮ ಮಕ್ಕಳಿಗೆ ಈ ಪಾಠವನ್ನು ಹೇಳಬೇಕು.’ ‘ಜೀವಜಾಲವನ್ನು ಮನುಷ್ಯ ನೇಯಲಿಲ್ಲ. ಅದರಲ್ಲಿ ಅವನೊಂದು ಎಳೆ ಮಾತ್ರ. ಈ ಜೀವಜಾಲಕ್ಕೆ ಅವನೇನಾದರೂ ಹಾನಿ ಮಾಡಿದರೆ, ಅದು ಮನುಷ್ಯ ತನಗೆ ತಾನೇ ಮಾಡಿಕೊಂಡ ಹಾನಿಯಾಗುತ್ತದೆ.. .. ನಾವೆಲ್ಲ ಈ ಭೂಮಿಯ ಭಾಗವಾಗಿರುವಂತೆ, ನೀವೂ ಈ ಭೂಮಿಯ ಭಾಗವೇ. ನಮಗೆಲ್ಲ ಈ ಭೂಮಿ ಪವಿತ್ರವಾಗಿರುವಂತೆ ನಿಮಗೂ ಇದು ಪವಿತ್ರವಾದದ್ದೆ. ನಾವೆಲ್ಲ ಸೋದರರು. ಮನುಷ್ಯ ಕೆಂಪು ಬಣ್ಣದವನಾಗಿರಲಿ, ಬಿಳಿಯನಾಗಿರಲಿ ಬೇರೆಬೇರೆಯಾಗಿರಲಾರ.’ ಜೀವಜಾಲದಲ್ಲಿ ಮನುಷ್ಯನ ಸ್ಥಾನವನ್ನು ಕುವೆಂಪು ಅರಿತಿದ್ದರು; ತೇಜಸ್ವಿ ಅರಿತಿದ್ದರು. ಅವರು ಮಲೆನಾಡನ್ನು, ಗುಡ್ಡಬೆಟ್ಟಗಳನ್ನು, ನದಿ ಸರೋವರಗಳನ್ನು, ಪ್ರಾಣಿ ಸಂಕುಲವನ್ನು ಪ್ರೀತಿಸಿದ, ಆರಾಧಿಸಿದ ಹಿನ್ನೆಲೆಯಲ್ಲಿ ಈ ಅರಿವು ಕ್ರಿಯಾಶೀಲವಾಗಿತ್ತು. ಅವರು ರೂಪಿಸಿಕೊಂಡ ವಿಚಾರ ಧಾರೆಯ ಹಿನ್ನೆಲೆಯಲ್ಲಿ ಈ ಅರಿವೇ ಪ್ರಧಾನವಾಗಿತ್ತು. ಅವರು ಕಟ್ಟಿದ ಕಲಾಕೃತಿಗಳ ಪ್ರತಿಪಾದನೆಯೂ ಈ ತತ್ವವೇ. ಮೈಸೂರಿನ ತಮ್ಮ ಮನೆಯಲ್ಲಿದ್ದರೂ ಕುವೆಂಪು ಅವರ ಮನ ಅಲೆಯುತ್ತಿದ್ದುದು ಸಹ್ಯಾದ್ರಿಯ ಘನ ಮೌನದ ಕಾಡುಗಳಲ್ಲಿಯೇ. ನಡೆದಾಡಲು ಶಕ್ತಿಯಿಲ್ಲದ ದಿನಗಳಲ್ಲಿ ಕುವೆಂಪು ಅವರು ಸ್ಲೈಡ್ಗಳಲ್ಲಿಯೇ ಪಕ್ಷಿಗಳನ್ನು ನೋಡಿ ಸುಖಿಸುತ್ತಿದ್ದ ಮನೋಭಿತ್ತಿಯಲ್ಲಿಯೂ ಈ ಅರಿವೇ ಮನೆಮಾಡಿತ್ತು. ಈ ಅರಿವನ್ನು ನಾವು ಗ್ರಹಿಸಲು ಸಾಧ್ಯವಾಗದೆ ಕೇವಲ ಭಾವನಾತ್ಮಕವಾಗಿ ಕುವೆಂಪು ಮತ್ತು ತೇಜಸ್ವಿಯವರನ್ನು ಆರಾಧಿಸಿದೆವು. ಹೀಗಾಗಿಯೇ ನಮಗೆ ಸಹ್ಯಾದ್ರಿ ಬೆಟ್ಟಸಾಲುಗಳಾಗಲೀ, ತುಂಗೆಯಾಗಲೀ, ದಟ್ಟಕಾನನಗಳಾಗಲೀ ನಮ್ಮೊಳಗಿನ ಚೇತನವಾಗಿ ಕಾಣಿಸಲೇ ಇಲ್ಲ. ಹಾಗೆ ಕಾಣಿಸಿದ್ದರೆ ಮಲೆನಾಡಿನ ಕಾಡು ಅವನತಿಯ ದಾರಿ ಹಿಡಿಯುತ್ತಿರಲಿಲ್ಲ. ಶರಾವತಿ ಕೊಳ್ಳ ಬರಿದಾಗುತ್ತಿರಲಿಲ್ಲ. ಅಸಂಖ್ಯ ಮತ್ತು ಅನರ್ಥಕಾರಿಯಾದ ‘ಅಭಿವೃದ್ಧಿ’ ಯೋಜನೆಗಳು ಇಲ್ಲಿ ತಲೆ ಎತ್ತುತ್ತಿರಲಿಲ್ಲ. ಕುವೆಂಪು ಅವರ ಕುಪ್ಪಳಿಯ ಅಂಗೈಯಗಲ ಮನೆಯ ಪರಿಸರವನ್ನು ಉಳಿಸಿಕೊಳ್ಳುವುದಕ್ಕೂ ಹೋರಾಟ ಮಾಡಬೇಕಾದದ್ದು ದಾರುಣಸ್ಥಿತಿ. ಕಾಡುಕಡಿದು ರೆಸಾಟರ್್ ಮಾಡುವ, ಪ್ರಶಾಂತವಾದ ಗಿರಿಶಿಖರಗಳ ಮೌನವನ್ನು ಕಲಕಿ ಅಲ್ಲಿ ಪ್ರವಾಸಿ ಸೌಲಭ್ಯಗಳನ್ನು ಸೃಷ್ಟಿಸುವ ಮೂಲಕ ಹಣ ದೋಚುವ ಮನಸ್ಸುಗಳು ಕುಪ್ಪಳಿಯ ಸುತ್ತಮುತ್ತ ಮಾತ್ರವಲ್ಲ, ಎಲ್ಲ ಕಡೆಗಳಲ್ಲೂ ಕಣ್ಣುಕುಕ್ಕುತ್ತಿವೆ. ತಮ್ಮ ಮನೆಗಳನ್ನೇ ‘ಹೋಂ ಸ್ಟೇ’ಗಳಾಗಿ ಪರಿವತರ್ಿಸಿಕೊಳ್ಳುವ ಹಂತಕ್ಕೂ ತಲುಪಿರುವ ಮನಸ್ಸುಗಳನ್ನು ಕುವೆಂಪು ತೇಜಸ್ವಿ ಕಡೆಗೆ, ಕುಪ್ಪಳಿಯ ಕಡೆಗೆ, ಬರಿದಾದ ಕಾನನಗಳ ಕಡೆಗೆ, ಸಾಂಕೇತಿಕವಾಗಿ ಜೀವ ಚೈತನ್ಯವನ್ನು ಉಳಿಸಿಕೊಂಡಿರುವ ಸಿಬ್ಬಲಗುಡ್ಡೆಯ ಕಡೆಗೆ ತಿರುಗಿಸುವುದು ಹೇಗೆ?    ]]>

‍ಲೇಖಕರು G

25 September, 2012

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading