ಪುಸ್ತಕ ಪ್ರಕಾಶನವೆಂಬ ಮೌಲ್ಯವ ನೆನೆದು
ಕಳೆದ 38 ವರ್ಷಗಳಿಂದ ಕ್ರಿಯಾಶೀಲವಾಗಿದ್ದ ಶಿವಮೊಗ್ಗೆಯ ‘ಪರಿಸರ ಸಾಹಿತ್ಯ’ ಪ್ರಕಾಶನ ತನ್ನ ಆಟಕ್ಕೆ ತೆರೆ ಎಳೆಯಲು ನಿರ್ಧರಿಸಿದೆ. ಏಳೆಂಟು ಜನ ಮಿತ್ರರು ಹೂಡಿದ ಸಣ್ಣ ಪ್ರಮಾಣದ ಬಂಡವಾಳದಿಂದ ಆರಂಭವಾದ ಈ ಪ್ರಕಾಶನ ಸಂಸ್ಥೆ ಅನೇಕ ಏಳುಬೀಳುಗಳನ್ನು ಎದುರಿಸಿಯೂ ಇಲ್ಲಿಯವರೆಗೆ ಉಳಿದುಕೊಂಡು ಬಂದಿದೆ. ನಿರ್ಗಮಿಸುವ ಈ ಹೊತ್ತಲ್ಲಿ ರೂ.25,000 ವನ್ನು ಉಳಿಸಿರುವ ‘ಪರಿಸರ ಸಾಹಿತ್ಯ’ ಈ ಮೊತ್ತವನ್ನು ದತ್ತಿಯಾಗಿ ನೀಡಲು ಸತ್ಪಾತ್ರರನ್ನು ಹುಡುಕುತ್ತಿದೆ. ಈ ಸಂಸ್ಥೆ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ, ಇದರ ಬಂಡವಾಳದ ಮೊತ್ತ, ಆಯವ್ಯಯ ಇತ್ಯಾದಿ ಆರ್ಥಿಕ ಸಮೀಕ್ಷೆಯನ್ನು ಮಾಡುವುದಕ್ಕಿಂತ ಇಷ್ಟು ಸುದೀರ್ಘ ಕಾಲದಲ್ಲಿ ಈ ಸಂಸ್ಥೆ ಪ್ರತಿಪಾದಿಸಿದ ಮೌಲ್ಯಗಳೇನು ಎಂದು ಕೇಳುವುದು ಹೆಚ್ಚು ಉಚಿತವಾಗಿ ಕಾಣಿಸುತ್ತದೆ.
ಬಂಡವಾಳದ ಪ್ರಶ್ನೆಯನ್ನು ಇಟ್ಟುಕೊಂಡರೆ, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ಕನ್ನಡ ಪ್ರಕಾಶನ ಸಂಸ್ಥೆಗಳು ಕಣ್ಣು ಕುಕ್ಕುತ್ತವೆ. ಏಳೆಂಟು ಸಾವಿರ ಪುಸ್ತಕಗಳು ಕನ್ನಡದಲ್ಲಿ ಪ್ರತಿವರ್ಷ ಪ್ರಕಟವಾಗುತ್ತಿವೆ ಎಂದು ಕನ್ನಡಿಗರು ಬೀಗಬಹುದು. ಕನ್ನಡ ಪುಸ್ತಕಗಳ ಹೊರ ನೋಟ, ವಿನ್ಯಾಸ, ಹೊದಿಕೆ, ಮುದ್ರಣದ ಗುಣಮಟ್ಟಗಳನ್ನು ಗಮನಿಸಿದರೆ ಕನ್ನಡ ಪುಸ್ತಕಗಳು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿವೆ ಎಂದು ಹೆಮ್ಮೆಪಡಬಹುದು. ಇದು ಸಂತೋಷದ ಸಂಗತಿಯೇ.
ಆದರೆ ಕನ್ನಡ ಪುಸ್ತಕ ಪ್ರಕಾಶನದ ನಿಜರೂಪ ನೋಡಿದರೆ? ಬಹುಪಾಲು ಪ್ರಕಾಶಕರು ಲೇಖಕರನ್ನು ನಡೆಸಿಕೊಳ್ಳುತ್ತಿರುವ ರೀತಿ, ಪುಸ್ತಕಗಳನ್ನು ಮಾರುವ ಕ್ರಮ, ಈ ಉದ್ಯಮದ ಹಿಂದಿರುವ ಮೌಲ್ಯಗಳು, ನೈತಿಕತೆ ಇತ್ಯಾದಿ ಅಂಶಗಳನ್ನು ಗಮನಿಸಿದರೆ ವಿಷಾದವೇ ಮಡುಗಟ್ಟುತ್ತದೆ. ಶೇ 90 ಭಾಗ ಪ್ರಕಾಶಕರು ಲೇಖಕರನ್ನು ಸುಲಿಯುವ ಹುನ್ನಾರದಲ್ಲಿಯೇ ಇರುತ್ತಾರೆ. ಸಕರ್ಾರದ ಸಗಟು ಖರೀದಿಗಾಗಿ ಎಂಥ ಕಳಪೆಯ ಪುಸ್ತಕವನ್ನಾದರೂ ಪ್ರಕಟಿಸುವುದು, ಹೇಗಾದರೂ ಮಾಡಿ ಅದನ್ನು ಗ್ರಂಥಾಲಯಗಳಿಗೆ ತುಂಬುವುದು ಇದನ್ನೆಲ್ಲ ನೋಡಿದರೆ ಕನ್ನಡಿಗರು ತಲೆತಗ್ಗಿಸುವ ಪರಿಸ್ಥಿತಿ ನಿಮರ್ಾಣವಾಗಿದೆ. ಸಗಟು ಖರೀದಿ ಯೋಜನೆ ಥಟ್ಟನೆ ನಿಂತು ಹೋದರೆ ಮುಕ್ಕಾಲುಪಾಲು ಪ್ರಕಾಶನ ಸಂಸ್ಥೆಗಳು ಮುಚ್ಚಿಬಿಡುತ್ತವೆ. ಹಾಗಾಗುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಸಾರ್ವಜನಿಕ ಹಣವನ್ನು ಅಕ್ಷರದ ಹೆಸರಲ್ಲಿ ನುಂಗುವುದಕ್ಕೆ ಸ್ವಲ್ಪಮಟ್ಟಿಗಾದರೂ ತಡೆಯುಂಟಾಗುತ್ತದೆ. ಇಲ್ಲವಾದರೆ ಭ್ರಷ್ಟಾಚಾರ ಬೆಳೆಬೆಳೆದು, ಅಯೋಗ್ಯರ ಜೇಬುಗಳು ತುಂಬುವುದು ಮಾತ್ರವಲ್ಲ, ನಮ್ಮ ಸಾರ್ವಜನಿಕ ಗ್ರಂಥಾಲಯಗಳು ಕಸದ ರಾಶಿಯನ್ನೇ ತುಂಬಿಕೊಂಡು ಗೊಬ್ಬರದ ಗುಂಡಿಗಳಾಗಿ ಮುಂದುವರಿಯುವುದು ತಪ್ಪುವುದಿಲ್ಲ. ಆದರೆ ಈ ಯೋಜನೆಯನ್ನು ನಿಲ್ಲಿಸಬೇಕಾದವರು ಯಾರು? ಅವರೇ ಭ್ರಷ್ಟತೆಯ ಕೂಪದಲ್ಲಿ ಮುಳುಗಿರುವಾಗ, ಇಂಥ ಯೋಜನೆ ನಿಲ್ಲುವುದು ಹೇಗೆ ಸಾಧ್ಯ? ಈ ವ್ಯವಹಾರದ ಮೇಲೆ ಕಣ್ಣಿಡಲು ಯಾವ ಲೋಕಾಯುಕ್ತವೂ ಇಲ್ಲವಲ್ಲ!
ಇಂಥ ಯೋಜನೆಗಳು ಇಲ್ಲದ ಕಾಲದಲ್ಲಿ ಪ್ರಕಾಶನ ಎನ್ನುವುದು ಒಂದು ಮೌಲ್ಯವಾಗಿತ್ತು. ಬಂಡವಾಳ, ಮಾರಾಟ ಇತ್ಯಾದಿ ಎಲ್ಲವೂ ಇದ್ದ ಪುಸ್ತಕ ಪ್ರಕಾಶನ ಆಗಲೂ ಒಂದು ಉದ್ಯಮವಾಗಿತ್ತು ಎನ್ನುವುದು ನಿಜವಾದರೂ, ಆ ಉದ್ಯಮಕ್ಕೆ ಒಂದು ಘನತೆ, ಮೌಲ್ಯ, ನೈತಿಕ ಪ್ರಜ್ಞೆಗಳು ಇದ್ದವು. ಮೌಲಿಕ ಗ್ರಂಥಗಳನ್ನು ಪ್ರಕಟಿಸುವ ಧ್ಯೇಯ; ಓದುಗ, ಲೇಖಕ, ಪ್ರಕಾಶಕರ ಮಧ್ಯೆ ಸೌಹಾರ್ದ ಸಂಬಂಧ ಇದ್ದವು. ಇದಕ್ಕೊಂದು ನೀತಿಯ ನೆಲೆಗಟ್ಟೂ ಇತ್ತು.
ಮಾಸ್ತಿ ತಮ್ಮ ಪುಸ್ತಕಗಳನ್ನು ತಮ್ಮದೇ ಜೀವನ ಕಾರ್ಯಾಲಯದ ಮೂಲಕ ಪ್ರಕಟಮಾಡುತ್ತಿದ್ದರು. ಕುವೆಂಪು ಅವರ ‘ಉದಯರವಿ’ ಪ್ರಕಾಶನ ಕುವೆಂಪು ಅವರ ಪುಸ್ತಕಗಳನ್ನು ಪ್ರಕಟಿಸುತ್ತಿತ್ತು. ಬೇಂದ್ರೆಯವರ ಹಿಂದೆ ಗೆಳೆಯರ ಗುಂಪಿತ್ತು. ಸಾಹಸಿ ಶಿವರಾಮ ಕಾರಂತರು ‘ಹರ್ಷ ಪ್ರಕಟಣಾಲಯ’ವನ್ನು ಅನೇಕ ವರ್ಷ ನಡೆಸಿ ತಮ್ಮ ಪುಸ್ತಕಗಳನ್ನು ಪ್ರಕಟಿಸಿದರು. ಕೂಡಲಿ ಚಿದಂಬರಂ ಅವರ ‘ಕಾವ್ಯಾಲಯ’, ಡಿವಿಕೆ ಮೂರ್ತಿ ಅವರ ‘ಡಿವಿಕೆ ಪ್ರಕಾಶನ’, ಸಿಂಧುವಳ್ಳಿಯವರ ‘ಸುರುಚಿ’, ಮೈಸೂರಿನ ಉಷಾ ಸಾಹಿತ್ಯ ಮಾಲೆ, ಬೆಂಗಳೂರಿನ ಅನೇಕ ಪ್ರಕಟಣ ಸಂಸ್ಥೆಗಳು, ಧಾರವಾಡದ ಸಮಾಜ ಪುಸ್ತಕಾಲಯ, ಹುಬ್ಬಳ್ಳಿಯ ಸಾಹಿತ್ಯ ಭಂಡಾರ, ಶಿವಮೊಗ್ಗೆಯ ಕನರ್ಾಟಕ ಸಂಘ ಇತ್ಯಾದಿ ಅನೇಕ ಪ್ರಕಾಶನಗಳು ಮಹತ್ವದ ಕೆಲಸವನ್ನು ಮಾಡಿ ಜನಮನ್ನಣೆ ಗಳಿಸಿದವು. ಇವತ್ತಿಗೆ ಹೋಲಿಸಿದರೆ ಪುಸ್ತಕಗಳ ಸಂಖ್ಯೆ ಅಂದು ದೊಡ್ಡದಾಗಿರಲಿಲ್ಲ; ಆದರೆ ಗುಣಾತ್ಮಕತೆಯನ್ನು ಗಮನಿಸಿದರೆ ಮಹತ್ವದ ಪುಸ್ತಕಗಳೇ ಓದುಗರನ್ನು ತಲುಪಿದವು.
ನವ್ಯ ಸಾಹಿತ್ಯ ಸಂದರ್ಭವನ್ನು ಗಮನಿಸಿದರೆ, ಎರಡು ಪ್ರಮುಖ ಪ್ರಕಾಶನ ಸಂಸ್ಥೆಗಳು ಗಮನ ಸೆಳೆಯುತ್ತವೆ. ಧಾರವಾಡದ ಮನೋಹರ ಗ್ರಂಥಮಾಲೆ ಮತ್ತು ಹೆಗ್ಗೋಡಿನ (ಶಿವಮೊಗ್ಗ ಜಿಲ್ಲೆ) ‘ಅಕ್ಷರ ಪ್ರಕಾಶನ’. ಮನೋಹರ ಗ್ರಂಥಮಾಲೆಯ ಹಿಂದೆ ವಿಮರ್ಶಕ ಕೆ.ಡಿ.ಕುರ್ತಕೋಟಿಯವರ ಸಮಗ್ರ ಚಿಂತನೆ ವಿಜೃಂಭಿಸುತ್ತಿತ್ತು; ವ್ಯಾವಹಾರಿಕ ಜಾಣ್ಮೆಯ ಜಿ.ಬಿ.ಜೋಶಿ ಇದನ್ನು ಸಮರ್ಥವಾಗಿ ಬಳಸಿಕೊಂಡರು. ‘ಅಕ್ಷರ ಪ್ರಕಾಶನ’ ಕೆ.ವಿ.ಸುಬ್ಬಣ್ಣನವರ ಕ್ರಿಯಾಶೀಲತೆ ಮತ್ತು ಕವಿ ಎಂ.ಗೋಪಾಲಕೃಷ್ಣ ಅಡಿಗರ ನವ್ಯಪ್ರಜ್ಞೆಯ ಪ್ರಯೋಗಶಾಲೆಯಾಗಿತ್ತು. ಹೊಸ ಸಂವೇದನೆಯೊಂದನ್ನು ಕನ್ನಡದಲ್ಲಿ ರೂಪಿಸುವ ದಿಕ್ಕಿನಲ್ಲಿ ಈ ಪ್ರಕಾಶನ ಸಂಸ್ಥೆಗಳ ಕೊಡುಗೆ ಐತಿಹಾಸಿಕ ಮಹತ್ವವನ್ನು ಪಡೆದಿತ್ತು. ಜೊತೆಗೆ ಅಕ್ಷರ ಪ್ರಕಾಶನದ ‘ಸಾಕ್ಷಿ’ ಮತ್ತು ಮನೋಹರ ಗ್ರಂಥಮಾಲೆಯ ‘ಮನ್ವಂತರ’ ವಹಿಸಿದ ಪಾತ್ರವೂ ಗಮನಾರ್ಹವೇ. ಆ ಕಾಲಘಟ್ಟದಲ್ಲಿ ಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸಿದ ಈ ಪ್ರಕಾಶನ ಸಂಸ್ಥೆಗಳು ಪ್ರಕಾಶನವನ್ನು ಒಂದು ಉದ್ಯಮದಂತೆ ನೊಡಿದರೂ ಅದರ ಹಿಂದಿನ ನೈತಿಕ ಮೌಲ್ಯವನ್ನು ಬಿಟ್ಟುಕೊಡಲಿಲ್ಲ. ಮುಂದೆ ಸುಬ್ಬಣ್ಣ ಮತ್ತು ಅವರ ಮಗ ಕೆ.ವಿ.ಅಕ್ಷರ, ಹೆಗ್ಗೋಡನ್ನು ಒಂದು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಿದರೆಂಬುದೂ ಮಹತ್ವದ ಸಂಗತಿಯೇ.
ಪೂರ್ಣಚಂದ್ರ ತೇಜಸ್ವಿ ಮತ್ತು ಬಿ.ಎನ್.ಶ್ರೀರಾಮ ಅವರು ರೂಪಿಸಿದ ‘ಪುಸ್ತಕ ಪ್ರಕಾಶನ’ ಸಾರ್ವಜನಿಕ ಗ್ರಂಥಾಲಯದ ಸಗಟು ಖರೀದಿ ಯೋಜನೆಯತ್ತ ಮುಖವನ್ನೂ ಹಾಕಲಿಲ್ಲ. ನೇರವಾಗಿ ಓದುಗರಿಗೆ ತಲುಪಿಸುವ ಕಾರ್ಯವನ್ನು ಸಮರ್ಥವಾಗಿ ಮಾಡುತ್ತಿರುವ ಈ ಪ್ರಕಾಶನ ಇವತ್ತಿಗೂ ತನ್ನ ಮೌಲ್ಯಗಳಿಗೆ ಬದ್ಧವಾಗಿಯೇ ನಡೆಯುತ್ತಿದೆ. ಬಳ್ಳಾರಿಯ ಸಿ.ಚನ್ನಬಸವಣ್ಣ ಅವರ ‘ಲೋಹಿಯಾ ಪ್ರಕಾಶನ’ (ಸಮಾಜವಾದಿ ಚಿಂತಕ ಲೋಹಿಯಾ ಅವರ ನೆನಪಿನಲ್ಲಿ) ಕೂಡಾ ಈ ಸಗಟು ಖರೀದಿಯನ್ನು ತಿರಸ್ಕರಿಸಿ (ಅದರಲ್ಲಿರುವ ಭ್ರಷ್ಟಾಚಾರದ ಕಾರಣಕ್ಕಾಗಿ) ಅನೇಕ ವರ್ಷಗಳಿಂದ ಹಲವಾರು ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ. ಈಗ ಚನ್ನಬಸವಣ್ಣ ದಣಿದಿದ್ದಾರೆ; ಪ್ರಕಾಶನಕ್ಕೆ ಪರದೆ ಎಳೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಅಂಕೋಲೆಯ ವಿಷ್ಣುನಾಯ್ಕರ ‘ಶ್ರೀ ರಾಘವೇಂದ್ರ ಪ್ರಕಾಶನ’ ಕೂಡಾ ಮೌಲ್ಯಗಳಿಗೆ ಬದ್ಧವಾಗಿ ಕ್ರಿಯಾಶೀಲವಾಗಿರುವ ಪ್ರಕಾಶನ. ವಿಷ್ಣುನಾಯಕರ ಉತ್ಸಾಹ ಮೊದಲಿನ ಹಾಗಿಲ್ಲ; ಅವರೂ ಸುಸ್ತಾಗಿದ್ದಾರೆ.
ಶಿವಮೊಗ್ಗೆಯ ‘ಪರಿಸರ ಸಾಹಿತ್ಯ’ಕ್ಕೆ ಇನ್ನೂ ಒಂದು ಆಯಾಮವಿದೆ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಅನೇಕ ಪ್ರಗತಿಪರ ಹೋರಾಟಗಳಲ್ಲಿ ಈ ಪ್ರಕಾಶನದ ಎಂ.ಬಿ.ನಟರಾಜ್, ಸತ್ಯನಾರಾಯಣರಾವ್ ಅಣತಿ, ಶೇಷಾದ್ರಿ ಕಿನಾರ, ಬಿದರಹಳ್ಳಿ ನರಸಿಂಹಮೂರ್ತಿ, ಶ್ರೀಧರ ಆರಾಧ್ಯ, ಓ.ಎಲ್.ನಾಗಭೂಷಣಸ್ವಾಮಿ ಸಕ್ರಿಯವಾಗಿ ಪಾಲ್ಗೊಂಡವರು. ಪ್ರಕಾಶನದಂತೆಯೇ ವೈಚಾರಿಕ ಚಿಂತನೆಯನ್ನು ಮತ್ತು ಹೋರಾಟವನ್ನು ರೂಪಿಸಿದ, ಬೆಂಬಲಿಸಿದ ಕೀರ್ತಿಯೂ ಇವರಿಗೆ ಸಲ್ಲಬೇಕು. ವೈಚಾರಿಕ ಸಂಘರ್ಷದಲ್ಲಿ ಮೂಲಭೂತವಾದಿಗಳಿಂದ ಏಟುತಿಂದ ಲಾಭವನ್ನೂ ಈ ಮಿತ್ರರಲ್ಲಿ ಕೆಲವರು ಮಾಡಿಕೊಂಡಿದ್ದಾರೆ. ಹೊಸ ತಲೆಮಾರನ್ನು ವೈಚಾರಿಕ ಚಿಂತನೆಯತ್ತ ಸೆಳೆದದ್ದು ಈ ಪ್ರಕಾಶನದ ಇನ್ನೊಂದು ಆಯಾಮವೇ. ಹೀಗಾಗಿ ಈ ಪ್ರಕಾಶನಕ್ಕೆ ತೆರೆ ಎಳೆಯುವ ಸಂಗತಿಯನ್ನು ತಿಳಿದಾಗ ಹೃದಯ ಭಾರವಾಗುತ್ತದೆ.
ಪ್ರಕಾಶನ ಎಂದರೆ ಲೇಖಕನಿಗೆ ನಾಮ, ಸರ್ಕಾರಿ ಹಣಕ್ಕೆ ಕನ್ನ ಎಂಬ ಹುನ್ನಾರವಲ್ಲ; ಅದೊಂದು ಮೌಲ್ಯ; ಮೌಲ್ಯಯುತ ಬದುಕನ್ನು ರೂಪಿಸುವ ಸಾಹಸ.


ಪ್ರಕಾಶನದ ಹಿಂದಿನ ನಗ್ನ ಸತ್ಯಗಳನ್ನೆಲ್ಲ ತಿಳಿಸಿದಿರಿ. ‘ಪರಿಸರ ಸಾಹಿತ್ಯ’ ಪ್ರಕಾಶನ ನಿಲ್ಲಿಸುವ ವಿಚಾರ ಬೇಸರ ತರಿಸಿತು.
ಸದ್ಯದ ಪುಸ್ತಕ ಪ್ರಕಾಶನ, ಪುಸ್ತಕೋದ್ಯಮವಾಗಿ ರೂಪುಗೊಳ್ಳುವ ಬಗ್ಗೆ ನಿಷ್ಠುರ ಮಾತುಗಳನ್ನಾಡಿದ್ದೀರಿ. ಅಸಲು ನಕಲು ಅದಲು ಬದಲಾಗಿ ಬೆರೆತು ಹೋದಂತಾದ ಈ ಕಾಲದಲ್ಲಿ ಅಸಲನ್ನು ಗುರುತಿಸಲು ಕೊಂಚ ಕಷ್ಟಪಡಬೇಕಿದೆ.
tumba vaatsavda sangathi. chennagide