ಎಲ್.ಸಿ.ನಾಗರಾಜ್
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ RCEP ಒಂದೇ ಅಲ್ಲ ಹೊಲ್ಸ್ಟೀನ್ ಎಂಬ ಡೇನಿಷ್ ಹಸು ಮತ್ತು ಸರ್ಕಾರದ ಹಸು ಸಂತಾನ ಉತ್ಪಾದನೆ Breeding policy ಕೂಡ ಭಾರತಕ್ಕೆ ಮಾರಕ.
ಕಳೆದ ಮೂರು ವರ್ಷಗಳ ಹಿಂದೆ ತಾಪಮಾನ ಹೆಚ್ಚುವರಿಯಾದಾಗ ಡೇನಿಷ್ ತಳಿಯ ಹಾಲಿನ ಪ್ರೊಟೀನ್ ಪ್ರಮಾಣ ತೀವ್ರವಾಗಿ ತಗ್ಗಿ, ಹಾಲಿನ ಡೈರಿಗಳು ರೈತರು ಉತ್ಪಾದಿಸಿದ ಹಾಲನ್ನು ಡೈರಿಗಳು ತಿರಸ್ಕರಿಸುವ ಪರಿಸ್ಥಿತಿ ಒದಗಿ ಬಂದಿತ್ತು .
ಆಗ 30 ಲೀಟರಿಗಿಂತ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದ ಹೈನುಗಾರ ರೈತರು ಎಮ್ಮೆಗಳ ಮೊರೆ ಹೋಗಬೇಕಾಯಿತು, 30 ಲೀಟರ್ ಹೊಲ್ಸ್ಟೀನ್ ತಳಿ ಹಸುಗಳ ಹಾಲಿನ ಪ್ರೊಟೀನ್ ಮಟ್ಟ ಸಮದೂಗಿಸಲು ಎಮ್ಮೆಯ ಹಾಲು ಬೆರೆಸಬೇಕಾಯಿತು .
ಹೆಚ್ಚು ಹಾಲು ಕೊಡುವ, ದಪ್ಪ ಕೆಚ್ಚಲಿನ ಹೊಲ್ಸ್ಟೀನ್ ತಳಿ ಹಸುಗಳು ಏರುತ್ತಿರುವ ತಾಪಮಾನಕ್ಕೆ ಒಗ್ಗಿಕೊಂಡಿಲ್ಲ, ಹೀಗಾಗಿ ಬೇಸಗೆಯ ತಾಪಮಾನದಲ್ಲಿ ಈ ಹಸುಗಳ ಹಾಲಿನ ಪ್ರೊಟೀನ್ ಪ್ರಮಾಣ ಕರ್ನಾಟಕ ಹಾಲು ಒಕ್ಕೂಟ [ KMF ] ನಿಗದಿ ಮಾಡಿರುವ ಮಟ್ಟಕ್ಕಿಂತ ಕಡಿಮೆಯಾಗುತ್ತಿದೆ.
ತಲಾವಾರು ಲೆಕ್ಕದಲ್ಲಿ ಹೊಲ್ಸ್ಟೀನ್ ತಳಿಯ ಹಸುಗಳ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಪ್ರಮಾಣದ ರೋಗನಿರೋಧಕ ಮದ್ದುಗಳನ್ನೇ [ antibiotics ] ಅವಲಂಬಿಸಿವೆ. ಆದ್ದರಿಂದ ತಾಪಮಾನ ಏರಿಕೆಯ ಮುಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಕ್ಷೇತ್ರದಲ್ಲಿ ಉಂಟಾಗುವ ಬಿಕ್ಕಟ್ಟನ್ನು ನಾವು ಈಗಲೇ ಮುಂಗಾಣಬೇಕಿದೆ.
ಭಾರತದಲ್ಲಿ ಹೆಚ್ಚು ಹಾಲಿನ ಉತ್ಪಾದನೆ ಜೊತೆಗೆ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡು ಹಾಲಿನ ಪ್ರೊಟೀನ್ ಮಟ್ಟವನ್ನ ಕಾದುಕೊಳ್ಳುವ ದೇಸಿ ಹಸುವಿನ ಸಂತಾನಗಳಿದಾವೆ. ಗಿರ್, ಸಾಯಿವಾಲ, ಗಂಗಾತೀರ, ಕಾಕ್ರೇಜ್ ತಳಿಯ ಹಸುಗಳು ಹೆಚ್ಚು ಹಾಲು ಕೊಡುವ ಜೊತೆಗೆ ಪ್ರೊಟೀನ್ ಮಟ್ಟವನ್ನು ಕಾದುಕೊಳ್ಳುತ್ತವೆ ಮತ್ತು ಇವುಗಳ ತಲಾವಾರು ರೋಗನಿರೋಧಕ ಔಷಧಿಗಳ ಅಗತ್ಯ ಕೂಡ ಕಡಿಮೆ.
ಮಲೆನಾಡು ಗಿಡ್ಡ , ಬಯಲುಸೀಮೆಯ ದ್ಯಾವಣಿಗಿ, ಕಿಲಾರಿ ಮತ್ತು ಹಳ್ಳಿಕಾರ ತಳಿಯ ಹಸುಗಳು ಕಡಿಮೆ ಹಾಲು ಕೊಟ್ಟರೂ ಇವುಗಳ ಹಾಲಿನ ಪ್ರೊಟೀನ್ ಪ್ರಮಾಣ ಹೆಚ್ಚು. ಟಿಪ್ಪು ಸುಲ್ತಾನರು ತಮ್ಮ ಆಳ್ವಿಕೆಯ ಕಾಲದಲ್ಲಿ ಅಮೃತಮಹಲ್ ಎಂಬ ವಿಶೇಷ ಹಸುವಿನ ತಳಿಗಾಗಿ ಚಿಕ್ಕಮಗಳೂರಿನ ಅಜ್ಜಂಪುರ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ತುಮಕೂರು ಜಿಲ್ಲೆಯ ತಿಪಟೂರಿನ ಹತ್ತಿರ ಸಾವಿರಾರು ಎಕರೆಗಳಷ್ಟು ಭೂಮಿಯನ್ನ ಮೀಸಲಿಟ್ಟಿದ್ದರು; ಈಗ ಈ ಅಮೃತಮಹಲ್ ಕಾವಲುಗಳ ಪರಿಸ್ಥಿತಿ ಹೀನಾಯವಾಗಿದೆ .
ಈಗಾಗಲೇ ಎರಗಿರುವ, ಮುಂದೆ ತೀವ್ರವಾಗಲಿರುವ ತಾಪಮಾನದ ಹೆಚ್ಚಳವನ್ನ ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಈಗಿನಿಂದಲೇ ತನ್ನ ಹಸು ಸಂತಾನ ನೀತಿಯನ್ನ ಬದಲಾಯಿಸಿಕೊಳ್ಳುವ ಅಗತ್ಯವಿದೆ. ಬ್ರೆಜಿಲ್ ದೇಶ ಈಗಾಗಲೇ ಹರಿಯಾಣ ಪ್ರಾಂತ್ಯದ ಗಿರ್ ಹಸುವನ್ನ ಆಮದು ಮಾಡಿಕೊಂಡು ಸಲಹುತ್ತಿರುವುದು ಭಾರತದ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳ ಗಮನಕ್ಕೆ ಬಂದಿಲ್ಲವೇ?
0 ಪ್ರತಿಕ್ರಿಯೆಗಳು