ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೆ ಗೆವಾರನೊಡನೆ ನನ್ನ ಮೊದಲ ಭೇಟಿ…

ನೆರೂಡ
Post courtesy: Che Balu

“ಚೆ ಗೆವಾರನೊಡನೆ ನನ್ನ ಮೊದಲ ಭೇಟಿ ತೀರ ಬೇರೆಯ ಥರದ್ದು.

ಅದು ನಡೆದದ್ದು ಹವಾನದಲ್ಲಿ.

ಅವನನ್ನು ಕಂಡಾಗ ಬೆಳಗಿನ ಜಾವ 1 ಗಂಟೆ.

ಅದು ಹಣಕಾಸಿನ ಅಥವಾ ಅರ್ಥವ್ಯವಹಾರದ ಡಿಪಾರ್ಟ್ ಮೆಂಟಿನ ಕಛೇರಿ.

ಯಾವುದು ಅನ್ನುವುದು ಮರೆತಿದೆ.

ಅಲ್ಲಿಗೆ ಬರುವಂತೆ ನನ್ನನ್ನು ಕರೆದಿದ್ದ.

ನಮ್ಮ ಭೇಟಿ ಮಧ್ಯರಾತ್ರಿಗೆ ಎಂದು ನಿಗದಿ ಮಾಡಿದ್ದ.

ಆದರೆ ನಾನು ಹೋಗುವುದು ತಡವಾಯಿತು.

ಸಮಾಜವಾದಿ ದೇಶಗಳ ಪ್ರೆಸಿಡಿಯಂ ಸಭೆಯಲ್ಲಿ ಭಾಗವಹಿಸಿದ್ದೆ, ಅದು ಮುಗಿದಿದ್ದೇ ತೀರ ತಡವಾಗಿ.

ಬೂಟು ತೊಟ್ಟು, ಸೈನ್ಯದ ರೆಜಿಮೆಂಟಿನ ಯೂನಿಫಾರಮ್ ಧರಿಸಿ, ಸೊಂಟದಲ್ಲಿ ಪಿಸ್ತೂಲುಗಳನ್ನು ಇರಿಸಿಕೊಂಡಿದ್ದ ಚೆ.

ಅವನಿದ್ದ ಬ್ಯಾಂಕಿನಂಥ ವಾತಾವರಣಕ್ಕೂ ಅವನ ಉಡುಪಿಗೂ ಹೊಂದಾಣಿಕೆಯಾಗುತ್ತಿರಲಿಲ್ಲ.

ಚೆ ಸ್ವಲ್ಪ ಕಪ್ಪು.

ನಿಧಾನವಾಗಿ ಮಾತಾಡುತ್ತಿದ್ದ.

ಅವನ ದನಿಯಲ್ಲಿ ಅರ್ಜೆಂಟೈನದ ಜನರ ಉಚ್ಚಾರಣೆಯ ಧಾಟಿ ಸ್ಪಷ್ಟವಾಗಿ ಕೇಳುತ್ತಿತ್ತು.

ಪಂಪಾ ಬಯಲುಗಳಲ್ಲಿ ಆತುರವಿಲ್ಲದೆ ಮಾತನಾಡುವ ಮನುಷ್ಯನಂಥವನು ಇವನು ಅನ್ನಿಸುತ್ತಿತ್ತು.

ಚಿಕ್ಕ ಚಿಕ್ಕ ವಾಕ್ಯಗಳನ್ನು ಆಡುತ್ತ, ಮಾತಿನ ಕೊನೆಗೆ ಕಿರು ನಗೆ ಬೀರುತ್ತ, ಸಂಭಾಷಣೆಯು ಗಾಳಿಯಲ್ಲಿ ಕರುಗುವುದಕ್ಕೆ ಬಿಡುವವನ ಹಾಗೆ ಮಾತಾಡುತ್ತಿದ್ದ.

ನನ್ನ ‘ಕ್ಯಾಂಟೋ ಜನರಲ್’ ಪುಸ್ತಕದ ಬಗ್ಗೆ ಅವನು ಮಾತಾಡಿದ್ದು ನನ್ನಲ್ಲಿ ಹೆಮ್ಮೆ ಹುಟ್ಟಿಸಿತು.

ಅವನು ಸಿಯೆರಾ ಮೇಸ್ತ್ರಾದಲ್ಲಿ ರಾತ್ರಿಯ ಹೊತ್ತು ಗೆರಿಲ್ಲಾ ಯೋಧರಿಗೆ ಅದನ್ನು ಓದಿ ಹೇಳುತ್ತಿದ್ದ.

ಎಷ್ಟೋ ವರ್ಷಗಳಾದ ಮೇಲೆ ಅವನ ಸಾವಿನ ಸಮಯದಲ್ಲಿ ನನ್ನ ಕವಿತೆಗಳು ಅವನೊಡನೆ ಇದ್ದವು ಅನ್ನುವುದನ್ನು ನೆನೆದರೆ ನನ್ನ ಮೈ ಕಂಪಿಸುತ್ತದೆ.

ರೆಗ್ರಿಸ್ ಡೆಬ್ರೆಯ ಮುಖಾಂತರ ನನಗೆ ತಿಳಿಯಿತು : ಬೊಲಿವಿಯದ ಪರ್ವತಗಳಲ್ಲಿ ಅವನ ಕೊನೆಯ ಕಾಲದಲ್ಲೂ ಚೆ ಕೇವಲ ಎರಡು ಪುಸ್ತಕಗಳನ್ನು ಅವನ ಬ್ಯಾಗಿನಲ್ಲಿರಿಸಿಕೊಂಡಿದ್ದನಂತೆ ; ಒಂದು ಗಣಿತದ ಪುಸ್ತಕ, ಇನ್ನೊಂದು ನನ್ನ ಕ್ಯಾಂಟೋ ಜನರಲ್.

ಅಂದು ರಾತ್ರಿ ಚೆ ಹೇಳಿದ ಒಂದು ಮಾತು ನನ್ನ ನಡುಗಿಸಿಬಿಟ್ಟಿತು.

ಅದು ಅವನ ವಿಧಿಯನ್ನೇ ಸೂಚಿಸುವಂಥ ಮಾತು ಅನ್ನಿಸುತ್ತದೆ.

ಅವನ ನೋಟ ನನ್ನ ಮುಖದಿಂದ ಆಫೀಸು ಕಿಟಕಿಯಾಚೆಯ ಕತ್ತಲಿನತ್ತ ಆಗಾಗ ನೋಡುತ್ತಿತ್ತು.

ಉತ್ತರ ಅಮೇರಿಕವು ಕ್ಯೂಬಾದ ಮೇಲೆ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಮಾತಾಡುತ್ತಿದ್ದೆವು.

ಹವಾನಾದ ಬೀದಿಗಳ ಆಯಕಟ್ಟಿನ ಜಾಗಗಳಲ್ಲಿ ಮರಳ ಮೂಟೆಗಳು ಇದ್ದುದನ್ನು ನೋಡಿದ್ದೆ.

ಇದ್ದಕ್ಕಿದ್ದ ಹಾಗೆ ಚೆ ಹೇಳಿದ : ‘ಯುದ್ಧ…ಯುದ್ಧ… ನಾವು ಯಾವಾಗಲೂ ಯುದ್ಧವನ್ನು ವಿರೋಧಿಸುವವರು.

ಆದರೆ ಒಮ್ಮೆ ಯುದ್ಧ ಮಾಡಿದ ಮೇಲೆ ಯುದ್ಧವಿಲ್ಲದೆ ಬದುಕಲು ಆಗುವುದೇ ಇಲ್ಲ.

ಮತ್ತೆ ಮತ್ತೆ ಯುದ್ಧ ಮಾಡುತ್ತಲೇ ಇರುತ್ತೇವೆ.’

ನನ್ನ ಅನುಕೂಲಕ್ಕೆಂಬಂತೆ ಅವನು ಗಟ್ಟಿಯಾಗಿ ಯೋಚನೆ ಮಾಡುತ್ತಿದ್ದ.

ಅವನ ಮಾತು ಕೇಳುತ್ತ ನಡುಕ ಹುಟ್ಟಿತು.

ನನ್ನ ಮಟ್ಟಿಗೆ ಯುದ್ದವೆಂಬುದು ಅಪಾಯದ ಮೂಲವೇ ಹೊರತು ಗುರಿಯಲ್ಲ.

ಗುಡ್ ಬೈ ಹೇಳಿದೆವು.

ನಾನು ಅವನನ್ನು ಮತ್ತೆ ನೋಡಲಿಲ್ಲ.

ಆಮೇಲೆ,
ಬೊಲಿವಿಯದ ಕಾಡುಗಳಲ್ಲಿ ಆತ ಕಾದಾಡುತ್ತಿದ್ದ.

ಅಲ್ಲೇ ದುರಂತದ ಸಾವು ಅವನದ್ದಾಯಿತು.

ಆದರೆ ಚೆ ಗೆವಾರ ದುಃಖ ತುಂಬಿರುವ ಮನುಷ್ಯನ ಹಾಗೆ, ತನ್ನ ಶೌರ್ಯದ ಯುದ್ಧಗಳಲ್ಲೂ ಆಯುಧಗಳನ್ನು ಜೊತೆ ಜೊತೆಗೇ ಕಾವ್ಯಕ್ಕೂ ಜಾಗ ಮಾಡಿಕೊಟ್ಟಿದ್ದ ಮನುಷ್ಯನ ಹಾಗೆ ನನ್ನ ಕಣ್ಣಿಗೆ ಕಟ್ಟಿದಂತಿದ್ದಾನೆ.”

‍ಲೇಖಕರು Admin

7 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading